ವಿದ್ಯುತ್ ಅವಘಡ: ಹೊತ್ತಿ ಉರಿದ ಕೊಟ್ಟಿಗೆ, ಹತ್ತಕ್ಕೂ ಹೆಚ್ಚು ಜಾನುವಾರುಗಳು ಸಜೀವ ದಹನ
ವಿಜಯನಗರ, ಜುಲೈ 21: ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿಕೊಂಡ ಬೆಂಕಿಯಿಂದ ಹತ್ತಕ್ಕೂ ಹೆಚ್ಚು ಜಾನುವಾರುಗಳು ಸಜೀವ ದಹನವಾಗಿರುವ ಘಟನೆ ವಿಜಯನಗರಯ ಹರಪನಹಳ್ಳಿ ತಾಲೂಕಿನ ಉಪ್ಪಾರಗೇರಿ ಬಳಿ ನಡೆದಿದೆ.
ಉಪ್ಪಾರಗೇರಿಯ ಗೌಳಿ ಬಸಪ್ಪ ಎನ್ನುವವರ ಮನೆಯಲ್ಲಿ ತಲೆತಲಾಂತರಿಂದ ಹೈನುಗಾರಿಕೆ ಮಾಡುತ್ತಿದ್ದಾರೆ. ಹೀಗಾಗಿ ಮನೆಯಲ್ಲಿ ಹತ್ತಾರು ಹಸು, ಎಮ್ಮೆಗಳನ್ನು ಸಾಕಲಾಗಿತ್ತು. ನಿನ್ನೆ ಜಿಟಿ ಜಿಟಿ ಮಳೆಯಾಗಿದ್ದರಿಂದ ಜಾನುವಾರಗಳಿದ್ದ ಕೊಟ್ಟಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಕೊಟ್ಟಿಗೆಯಲ್ಲಿ ಮೆಕ್ಕೆ ಜೋಳದ ಪೈರು ಹಾಗೂ ಹಸುಗಳ ಮೇವನ್ನು ಇರಿಸಲಾಗಿತ್ತು.

ಹೀಗಾಗಿ ಶಾರ್ಟ್ ಸರ್ಕ್ಯೂಟ್ ಆಗುತ್ತಿದ್ದಂತೆ ಕೊಟ್ಟಿಯ ಒಂದು ಭಾಗ ಬಹುತೇಕ ಹೊತ್ತಿ ಉರಿದಿದೆ. ಜಾನುವಾರುಗಳನ್ನು ಬಿಗಿಯಾಗಿ ಕಟ್ಟಿದ್ದರಿಂದ ಬೆಂಕಿ ಹೊತ್ತಿಕೊಂಡು ಕಟ್ಟಿದ ಸ್ಥಳದಲ್ಲೇ ಒದ್ದಾಡಿ ಸಜೀವ ದಹನವಾಗಿವೆ. ದುರಾದೃಷ್ಟವಶಾತ್ ರಾತ್ರಿ ವೇಳೆ ಅವಘಡ ಸಂಭವಿಸಿದ್ದರಿಂದ ಗೌಳಿ ಬಸಪ್ಪ ಅವರ ಹಾಗೂ ಮನೆಯವರ ಅರಿವಿಗೆ ಬಂದಿಲ್ಲ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಆರು ಎಮ್ಮೆಗಳು, ಎರಡು ಹಸು, ಮೂರರಿಂದ ನಾಲ್ಕು ಕರುಗಳು ಸಜೀವ ದಹನವಾಗಿದೆ. ಇನ್ನು ಕೆಲವು ಜಾನುವಾರುಗಳಿಗೆ ಸುಟ್ಟ ಗಾಯಗಳಾಗಿದೆ. ಬೆಂಕಿಗಾಹುತಿಯಾಗಿರುವ ಜಾನುವಾರುಗಳ ಮೃತದೇಹಗಳು ನೋಡುಗರ ಮನ ಕಲುಕುವಂತಿದೆ. ಬೆಂಕಿ ಅವಘಡದಿಂದ ಮಾಲೀಕರಿಗೆ ಎರಡು ಲಕ್ಷಕ್ಕೂ ಅಧಿಕ ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹತ್ತಕ್ಕೂ ಹೆಚ್ಚು ಜಾನುವಾರುಗಳ ಸಾವಿನಿಂದ ರೈತ ಗೌಳಿ ಬಸಪ್ಪ ಕಂಗಾಲಾಗಿದ್ದಾರೆ.

ಹೈನುಗಾರಿಕೆಯನ್ನೇ ನಂಬಿಕೊಂಡಿದ್ದ ಕುಟುಂಬಕ್ಕೆ ಜಾನುವಾರುಗಳ ಸಾವು ಬರ ಸಿಡಿಲು ಬಡಿದಂತಾಗಿದ್ದು, ನಡೆಯಬಾರದ ಘಟನೆ ನಡೆದಿದೆ ಎಂದು ಗೌಳಿ ನಾಗಪ್ಪ ಅವರ ಕುಟುಂಬ ನೋವು ತೋಡಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ತಿಳಿದು ಸರ್ಕಾರ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.












Click it and Unblock the Notifications