ಬಿಎಸ್ವೈ ಬೆಂಬಲಿಸಿದ ಶಿವಶಂಕರಪ್ಪ ವಿರುದ್ಧ ಯತ್ನಾಳ್ ಗರಂ!
ವಿಜಯಪುರ, ಜುಲೈ 20: ಬಿ.ಎಸ್. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸುವ ಬಿರುಸಿನ ಚಟುವಟಿಕೆ ಬಿಜೆಪಿ ಪಾಳಯದಲ್ಲಿ ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಡಿಯೋ ವೈರಲ್ ಆಗುತ್ತಿದ್ದಂತೆಯೇ ಸಿಎಂ ಬದಲಾವಣೆ ಖಚಿತ ಅನ್ನುವ ಸುದ್ದಿ ಹರಿದಾಡುತ್ತಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬದಲಾವಣೆ ಸುದ್ದಿ ರಾಜ್ಯಾದ್ಯಂತ ಹಬ್ಬಿದ್ದು, ಈ ಕುರಿತು ಮಠಾಧೀಶರು, ಲಿಂಗಾಯತ ನಾಯಕರು ಹಾಗೂ ಅವರ ಅಭಿಮಾನಿಗಳು ಬದಲಾವಣೆ ಸುದ್ದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಿಎಂ ಯಡಿಯೂರಪ್ಪ ಬದಲಾವಣೆಗೆ ಮುರುಘಾ ಶರಣರ ಆಕ್ಷೇಪ
ಸಿಎಂ ಯಡಿಯೂರಪ್ಪರಿಗೆ ಕಾಂಗ್ರೆಸ್ ಶಾಸಕ ಹಾಗೂ ವೀರಶೈವ ಲಿಂಗಾಯತ ಮಹಾಸಭಾ ನಾಯಕ ಶಾಮನೂರು ಶಿವಶಂಕರಪ್ಪ, ಇನ್ನೋರ್ವ ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಬೈಎಸ್ವೈ ಪರ ಬ್ಯಾಟ್ ಬೀಸಿರುವುದು ಅಚ್ಚರಿ ಮೂಡಿಸಿದೆ.
ಸಿಎಂ ಯಡಿಯೂರಪ್ಪಗೆ ಬೆಂಬಲ ನೀಡಿದ ವಿಚಾರದ ಕುರಿತು ದಾವಣಗೆರೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, "ಯಡಿಯೂರಪ್ಪ ಬದಲಾವಣೆ ಮಾಡಿದರೆ ಬೇರೆ ಲಿಂಗಾಯತರಿಗೆ ಕೊಡಬಹುದು ಎಂದು ಹೇಳಬೇಕಿತ್ತು. ಅದು ಬಿಟ್ಟು ಯಡಿಯೂರಪ್ಪ ಬದಲಾವಣೆ ಮಾಡಬೇಡಿ ಅಂದರೆ ಏನು ಅರ್ಥ? ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ನಾಯಕರು ಈ ರೀತಿ ತಂತ್ರ ಮಾಡಿದ್ದಾರೆ,'' ಎಂದು ದೂರಿದರು.
"ಯಡಿಯೂರಪ್ಪ ಪರವಾಗಿ ಶಾಮನೂರು ಶಿವಶಂಕರಪ್ಪ ಮಾತನಾಡಿದರೆ ಉಪಯೋಗವಿಲ್ಲ. ವೀರಶೈವ ಮಹಾಸಭಾ ಎಲ್ಲ ಲಿಂಗಾಯತ ಪರವಾಗಿ ಕೆಲಸ ಮಾಡಬೇಕು. ಕೇವಲ ಯಡಿಯೂರಪ್ಪ ಪರವಾಗಿ ಮಾತನಾಡಿದರೆ ಪ್ರಯೋಜನವಿಲ್ಲ,'' ಎಂದು ಹರಿಹಾಯ್ದರು.
"ಬಿ.ಎಸ್. ಯಡಿಯೂರಪ್ಪರನ್ನು ಬದಲಾವಣೆ ಮಾಡುವ ವಿಚಾರ ಬಿಜೆಪಿ ಹೈಕಮಾಂಡ್ಗೆ ಬಿಟ್ಟದ್ದು. ಕಾಂಗ್ರೆಸ್ ನಾಯಕರು ಈ ವಿಚಾರದ ಬದಲು, ತಮ್ಮ ಪಕ್ಷದ ನಾಯಕರ ಬಗ್ಗೆ ಯೋಚನೆ ಮಾಡಲಿ,'' ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದರು.