ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ : ಯತ್ನಾಳ್ ಹೇಳಿಕೆಗೆ ಈಶ್ವರಪ್ಪ ಗರಂ
ವಿಜಯಪುರ, ಆಗಸ್ಟ್ 22 : "ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮಾತುಕೇಳಬೇಕಾಗಿಲ್ಲ" ಎಂದು ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು. ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ ಹೇಳಿಕೆಯನ್ನು ಖಂಡಿಸಿದರು. "ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿಂದೆ ಅನೇಕ ಹೇಳಿಕೆ ಕೊಟ್ಟಿದ್ದಾರೆ. ಅವೆಲ್ಲ ಮಾಡಬೇಕು ಅಂತಿಲ್ಲ" ಎಂದರು.
"ಅಮಿತ್ ಶಾ ಅವರು ಸಹ ಹೆಚ್ಚು ಜನರಿಗೆ ಪರಿಚಯವಿರಲಿಲ್ಲ. ಕಟೀಲ್ ಸಹ ಇನ್ನು ಮುಂದೆ ಒಳ್ಳೆಯ ಕೆಲಸ ಮಾಡಿ ರಾಜ್ಯದ ಗಮನ ಸೆಳೆಯಲಿದ್ದಾರೆ. ಯತ್ನಾಳರ ಹೇಳಿಕೆಯಂತೆ ರಾಜ್ಯಾಧ್ಯಕ್ಷ ಸ್ಥಾನ ಕೊಡಲು ಆಗುವುದಿಲ್ಲ" ಎಂದು ಹೇಳಿದರು.

ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮಾತನಾಡಿದ್ದ ಯತ್ನಾಳ್, "ಕಟೀಲ್ ಅವರು ಬೇರೆ ಜಿಲ್ಲೆಗೆ ಹೋಗಿದ್ದನ್ನು ನಾನು ನೋಡೇ ಇಲ್ಲ. ಈಗ ಅವರು ರಾಜ್ಯಾಧ್ಯಕ್ಷರಾಗಿದ್ದಾರೆ" ಎಂದು ಹೇಳಿದ್ದರು.
"ಬೀದರ್, ಕಲಬುರಗಿ, ವಿಜಯಪುರದ ಕಡೆ ನಳಿನ್ ಓಡಾಡಬೇಕು. ಕನಿಷ್ಠ 1 ಜಿಲ್ಲೆಯ 10 ಕಾರ್ಯಕರ್ತರ ಹೆಸರನ್ನು ಹೇಳುವಂತೆ ಆಗಬೇಕು" ಎಂದು ಸಲಹೆ ನೀಡಿದ್ದರು.

ನಳಿನ್ ಕುಮಾರ್ ಕಟೀಲ್ ಇಂದು ದೆಹಲಿಯಲ್ಲಿದ್ದಾರೆ. ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ರಾಜ್ಯಾಧ್ಯಕ್ಷರಾದ ಬಳಿಕ ಇದು ಅವರ ಮೊದಲ ದೆಹಲಿ ಭೇಟಿಯಾಗಿದೆ.












Click it and Unblock the Notifications