ಕೊಲೆ ಆರೋಪಿ ಮಹಾದೇವ ಬೈರಗೊಂಡಗೆ ಗೌರವ ಡಾಕ್ಟರೇಟ್!
ವಿಜಯಪುರ, ಸೆಪ್ಟೆಂಬರ್ 03 : ವಿಜಯಪುರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಜಾಮೀನಿನ ಮೇಲೆ ಆರೋಪಿ ಕೆಲವು ದಿನಗಳ ಹಿಂದೆ ಬಿಡುಗಡೆಗೊಂಡಿದ್ದಾನೆ.
ಮಹಾದೇವ ಸಾಹುಕಾರ ಬೈರಗೊಂಡಗೆ ಏಷಿಯನ್ ಇಂಟರ್ನ್ಯಾಷನಲ್ ಇಂಡೋನೆಷಿಯಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ. ಬೈರಗೊಂಡ ಭೀಮಾತೀರದ ಧರ್ಮರಾಜ ಚಡಚಣ ಕೊಲೆ ಮತ್ತು ಗಂಗಾಧರ ಚಡಚಣ ನಾಪತ್ತೆ ಮತ್ತು ನಿಗೂಢ ಕೊಲೆ ಪ್ರಕರಣದಲ್ಲಿ ಆರೋಪಿ.

ಕೆರೂರ ಗ್ರಾಮದ ಬೈರವನಾಥ ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಏಷಿಯನ್ ವಿಶ್ವವಿದ್ಯಾಲಯದ ಕರ್ನಾಟಕದ ಸಂಯೋಜಕ ಡಾ. ರಾಜು ರೋಖಡೆ ಬೈರಗೊಂಡ ಅವರ ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದರು.
ಗಂಗಾಧರ ಚಡಚಣ ನಾಪತ್ತೆ ಮತ್ತು ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಹಾದೇವ ಸಾಹುಕಾರ ಬೈರಗೊಂಡ ಮೇ 4ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ನೂರಾರು ಅಭಿಮಾನಿಗಳು ದೊಡ್ಡ ಹೂವಿನ ಹಾರ ಹಾಕಿ ಆತನನ್ನು ಬರಮಾಡಿಕೊಂಡಿದ್ದರು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಉಮರಾಣಿ ಗ್ರಾಮದ ಗಂಗಾಧರ ಮತ್ತು ಧರ್ಮರಾಜ್ ಚಡಚಣ ಹತ್ಯೆ ಬಗ್ಗೆ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿದೆ. ಸಿಐಡಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಮಹಾದೇವ ಸಾಹುಕಾರ ಬೈರಗೊಂಡನನ್ನು ಬಂಧಿಸಿತ್ತು.












Click it and Unblock the Notifications