ಗಂಗಾಧರ ಚಡಚಣ ಹತ್ಯೆ : ಸಿಐಡಿ ಕೈಗೆ ಸಿಕ್ಕಿಬಿದ್ದ ಎಂ.ಬಿ.ಅಸೋಡೆ
ವಿಜಯಪುರ, ಅಕ್ಟೋಬರ್ 21 : ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣದ ತನಿಖೆಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆ ಇದೆ. ಪ್ರಕರಣದ 13ನೇ ಆರೋಪಿ ಚಡಚಣ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ಅಸೋಡೆಯನ್ನು ಸಿಐಡಿ ಬಂಧಿಸಿದೆ.
ಗಂಗಾಧರ ಚಡಚಣ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದ ಎಂ.ಬಿ.ಅಸೋಡೆಗಾಗಿ ಸಿಐಡಿ ಪೊಲೀಸರು ತೀವ್ರ ಹುಡುಕಾಡ ನಡೆಸಿದ್ದರು. ಶನಿವಾರ ಕೋಲ್ಕತ್ತಾದಲ್ಲಿ ಆತನನ್ನು ಬಂಧಿಸಲಾಗಿದ್ದು, ಕರ್ನಾಟಕಕ್ಕೆ ಕರೆತರಲಾಗುತ್ತಿದೆ.
ಕಳೆದ ನಾಲ್ಕು ತಿಂಗಳಿನಿಂದ ಎಂ.ಬಿ.ಅಸೋಡೆಗಾಗಿ ಸಿಐಡಿ ಪೊಲೀಸರು ಹುಡುಕಾಟ ನಡೆಸಿದ್ದರು. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆಯುವ ಅಸೋಡೆ ಪ್ರಯತ್ನ ಸಹ ವಿಫಲವಾಗಿತ್ತು.

ಗಂಗಾಧರ ಚಡಚಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಇಂಡಿ ಜೆಎಂಎಫ್ಸಿ ನ್ಯಾಯಾಲಯಕ್ಕೆ 373 ಪುಟದ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಹತ್ಯೆ ಪ್ರಕರಣದಲ್ಲಿ ಐವರು ಪೊಲೀಸ್ ಅಧಿಕಾರಿಗಳ ಪಾತ್ರವಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ವಿಜಯಪುರದ ರೌಡಿ ಶೀಟರ್ ಧರ್ಮರಾಜ ಚಡಚಣ ಸಹೋದರ ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಪಿಎಸ್ಐ ಗೋಪಾಲ ಹಳ್ಳೂರ, ಪೇದೆಗಳಾದ ಸಿದ್ದಾರೂಢ ರಾಗಿ, ಚಂದ್ರಶೇಖರ್ ಜಾಧವ್, ಗೆದ್ದಪ್ಪ ನಾಯ್ಕೋಡಿ ಅವರನ್ನು ಸಿಐಡಿ ಈಗಾಗಲೇ ಬಂಧಿಸಿದೆ.
2017ರ ಅಕ್ಟೋಬರ್ 30ರಂದು ವಿಜಯಪುರದಲ್ಲಿ ಧರ್ಮರಾಜ ಚಡಚಣ ಎನ್ಕೌಂಟರ್ ನಡೆದಿತ್ತು. ಪೊಲೀಸರು ಧರ್ಮರಾಜ ಚಡಚಣ ಸಹೋದರ ಗಂಗಾಧರ ಚಡಚಣನನ್ನು ವಶಕ್ಕೆ ಪಡೆದಿದ್ದರು. ಆದರೆ, ಕೆಲವು ದಿನಗಳ ಬಳಿಕ ಆತನ ಹತ್ಯೆ ನಡೆದ ವಿಚಾರ ಬೆಳಕಿಗೆ ಬಂದಿತ್ತು.












Click it and Unblock the Notifications