ನೆರೆಗೆ ಕೇಂದ್ರದ ನೆರವಿನ ಅಗತ್ಯವಿಲ್ಲ ಎಂದ ತೇಜಸ್ವಿ ಸೂರ್ಯ ವಿರುದ್ಧ ಶಾಸಕ ಯತ್ನಾಳ ಕಿಡಿ
ವಿಜಯಪುರ, ಸೆಪ್ಟೆಂಬರ್ 28: ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದ ಸಮಸ್ಯೆಯಿಂದ ತತ್ತರಿಸಿರುವ ಜನರಿಗೆ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ ನೆರವು ನೀಡುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದಿಂದ ಹಣದ ನೆರವು ನೀಡುವ ಅಗತ್ಯವಿಲ್ಲ. ರಾಜ್ಯದಲ್ಲಿಯೇ ಹಣವಿದೆ ಎಂಬ ಬೇಜವಾಬ್ದಾರಿಯ ಹೇಳಿಕೆ ನೀಡಿದರೆ ನಾನು ಸುಮ್ಮನೆ ಕೂರುವುದಿಲ್ಲ. ತೇಜಸ್ವಿ ಸೂರ್ಯ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳಲಿ ಎಂದು ಯತ್ನಾಳ ಆಗ್ರಹಿಸಿದ್ದಾರೆ.

ಭೀಕರ ಪ್ರವಾಹದಿಂದಾಗಿ ಉತ್ತರ ಕರ್ನಾಟಕದ ಜನರು ಕಣ್ಣೀರು ಹಾಕುತ್ತಿದ್ದಾರೆ. ಪ್ರವಾಹ ಮುಗಿದು ಎರಡು ತಿಂಗಳು ಉರುಳಿದೆ. ಆದರೂ ಅಲ್ಲಿನ ಜನಜೀವನ ಸಹಜ ಸ್ಥಿತಿಗೆ ಬಂದಿಲ್ಲ. ಅವರ ಸಹಾಯಕ್ಕೆ ಆಗಮಿಸಬೇಕಾಗಿರುವುದು ಕೇಂದ್ರ ಸರ್ಕಾರದ ಕರ್ತವ್ಯ. ಇಂಗತಹ ಸಂಕಷ್ಟದ ಸಮಯದಲ್ಲಿ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುವುದನ್ನು ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಪರಿಹಾರಕ್ಕೆ ಕೇಂದ್ರದ ಹಣದ ನೆರವಿನ ಅಗತ್ಯವಿಲ್ಲ ಎಂಬ ಹೇಳಿಕೆಯನ್ನು ಅವರು ಹಿಂದಕ್ಕೆ ಪಡೆದುಕೊಳ್ಳಬೇಕು. ಈ ರೀತಿ ಬೇಜವಾಬ್ದಾರಿಯುತ ಹೇಳಿಕೆ ನೀಡಿದರೆ ಉತ್ತರ ಕರ್ನಾಟಕದ ಮಂದಿ ಕಣ್ಣುಮುಚ್ಚಿಕೊಂಡು ಕೂರುವುದಿಲ್ಲ. ನಾವೇನು ಕೇಂದ್ರ ಸರ್ಕಾರದಿಂದ ಭಿಕ್ಷೆ ಕೇಳುತ್ತಿಲ್ಲ. ಎಲ್ಲಿಯೋ ಕುಳಿತು ಹೇಳಿಕೆ ನೀಡುವ ಬದಲು ಇಲ್ಲಿಗೆ ಬಂದು ನಮ್ಮ ಪರಿಸ್ಥಿತಿ ನೋಡಲಿ ಎಂದು ಯತ್ನಾಳ ಹೇಳಿದ್ದಾರೆ.
ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಧ್ವನಿ ಎತ್ತುತ್ತೇವೆ. ಇಲ್ಲಿನ ಬಗ್ಗೆ ಕೀಳುಮಟ್ಟದ ಮಾತು ಕೇಳಿದರೆ ಜನಪ್ರತಿನಿಧಿಗಳು ಸುಮ್ಮನೆ ಇರುವುದಿಲ್ಲ. ಪ್ರವಾಹ ಪರಿಹಾರವಾಗಿ ಕೂಡಲೇ ಐದು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ಎಲ್ಲ ಸಂಸದರು ಮತ್ತು ಸಚಿವರನ್ನು ಒಳಗೊಂಡ ನಿಯೋಗವನ್ನು ಮೋದಿ ಅವರ ಬಳಿ ಕೊಂಡೊಯ್ಯಬೇಕು. ಜನರ ಕಷ್ಟಕ್ಕೆ ಸ್ಪಂದಿಸಬೇಕು. ಇದರಲ್ಲಿ ರಾಜಕೀಯ ಬೇಡ ಎಂದು ಹೇಳಿದ್ದಾರೆ.












Click it and Unblock the Notifications