ಉಡುಪಿ; ಕೆ. ಮಂಜುಳಾ ಅಮಾನತು ಪ್ರಕರಣಕ್ಕೆ ತಿರುವು
ಉಡುಪಿ, ಏಪ್ರಿಲ್ 8; ಉಡುಪಿಯ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕೆ. ಅವರನ್ನು ಕರ್ತವ್ಯಲೋಪದ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಈ ಪ್ರಕರಣ ತಿರುವು ಪಡೆದುಕೊಳ್ಳುತ್ತಿದೆ. ಅಮಾನತು ಮಾಡಿರುವ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಮಂಜುಳಾ ಅವರ ವಿರುದ್ಧ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಕ್ರಮ ಕೈಗೊಂಡಿತ್ತು. ಆದರೆ "ಇದು ತನ್ನ ವಿರುದ್ಧ ನಡೆದಿರುವ ಪಿತೂರಿ" ಎಂದು ಹೇಳಿರುವ ಮಂಜುಳಾ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.
ಮಂಜುಳ ಉಡುಪಿ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮೂಲ ಶಾಲೆಯಿಂದ ಅಗತ್ಯವಿರುವ ಶಾಲೆಗಳಿಗೆ ನಿಯೋಜನೆ ಮಾಡಿ, ಆ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನಿಯಮಗಳಿಗೆ ವಿರುದ್ಧವಾಗಿ ನೇಮಕಾತಿ ಮಾಡಿದ್ದರು ಎಂಬ ಆರೋಪವಿದೆ.

ಕಚೇರಿಯ ಕರ್ತವ್ಯ ನಿರ್ವಹಣೆ, ಅತಿಥಿ ಶಿಕ್ಷಕರ ನಿಯೋಜನೆ ಮತ್ತು ಅಕ್ಷರ ದಾಸೋಹ ಕಾರ್ಯಕ್ರಮ ಸರಿಯಾಗಿ ನಿರ್ವಹಿಸದಿರುವ ಆರೋಪವೂ ಇವರ ಮೇಲಿದೆ. ಆದರೆ, "ತಮ್ಮ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಇದೊಂದು ಪಿತೂರಿ" ಎಂದು ಮಂಜುಳಾ ಪ್ರತಿಕ್ರಿಯೆ ನೀಡಿದ್ದಾರೆ.
ತನಿಖೆಗೆ ಆಗ್ರಹ; ಕ್ಷೇತ್ರ ಶಿಕ್ಷಣಾಧಿಕಾರಿಯ ಅಮಾನತಿನ ಕುರಿತು ಸಮಗ್ರ ತನಿಖೆಗೆ ಕ್ಯಾಂಪಸ್ ಫ್ರಂಟ್ ಆಗ್ರಹಿಸಿದೆ. ಮಂಜುಳಾ ಕೆ. ಅವರನ್ನು ಏಪ್ರಿಲ್ 7 ರಂದು ಕರ್ತವ್ಯದಲ್ಲಿ ನಿರ್ಲಕ್ಷ್ಯದ ಕಾರಣದಿಂದ ಅಮಾನತು ಮಾಡಲಾಗಿದೆ. ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ. ಮಾತ್ರವಲ್ಲ, ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇಲಾಖೆಯ ಭ್ರಷ್ಟ ಅಧಿಕಾರಿಗಳ ಖುಲಾಸೆ ಜಿಲ್ಲೆಯ ಜನರಿಗೆ ಆಘಾತಕಾರಿಯಾಗಿದೆ. ಉಡುಪಿ ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿಯಾದ ಜಿಲ್ಲೆ. ವಿದ್ಯಾರ್ಥಿಯ ಭವಿಷ್ಯ ರೂಪಿಸುವಂತಹ ಇಲಾಖೆಗಳಲ್ಲಿ ಇಂತಹ ಆರೋಪಗಳು ಕೇಳಿ ಬಂದರೆ ಜನರಿಗೆ ಭೀತಿ ಉಂಟಾಗುತ್ತದೆ. ಶಿಕ್ಷಣದ ಕುರಿತಾದಂತಹ ಬೇಜವಾಬ್ದಾರಿತನ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಕ್ಯಾಂಪಸ್ ಫ್ರಂಟ್ ಹೇಳಿದೆ.
"ಈ ಪ್ರಕರಣದಲ್ಲಿ ಹಲವಾರು ಆಯಾಮಗಳಿಂದ ತನಿಖಾಧಿಕಾರಿಗಳು ತನಿಖೆ ನಡೆಸಿ, ಎಲ್ಲಾ ಸತ್ಯಾಸತ್ಯೆಗಳನ್ನು ಬಯಲು ಮಾಡಬೇಕು ಹಾಗೂ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಮತ್ತು ಅಮಾಯಕರಿಗೆ ನ್ಯಾಯ ದೊರಕಿಕೊಡಬೇಕು" ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾದ ಅಸೀಲ್ ಅಕ್ರಮ್ ಒತ್ತಾಯಿಸಿದ್ದಾರೆ.












Click it and Unblock the Notifications