ಹಿಜಾಬ್ ಪರ ಇರುವವರ ಓಟು ನಮಗೆ ಬೇಡ; ಅಶೋಕ
ಉಡುಪಿ, ಫೆಬ್ರವರಿ 20; " ಹಿಜಾಬ್ ಪರ ಇರುವವರು ಇಡೀ ಕರ್ನಾಟಕದಲ್ಲಿ ಗುಡ್ಡೆ ಹಾಕಿದರೆ ನೂರು ಜನ ಸಿಗಲ್ಲ. ಅವರ ಓಟು, ಅವರ ಅನುಕಂಪವೂ ನಮಗೆ ಬೇಡ" ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಉಡುಪಿಯ ಬ್ರಹ್ಮಾವರ ತಾಲೂಕಿನ ಕೆಂಜೂರಿನಲ್ಲಿ ಸಚಿವರು ಮಾತನಾಡಿದರು. "ಹಿಜಾಬ್ ವಿಚಾರದಲ್ಲಿ ಪೋಷಕರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ" ಎಂಬ ಯು. ಟಿ. ಖಾದರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, "ಹಿಜಾಬ್ ಹಾಕುತ್ತಿರುವವರು ಶಾಪ ಹಾಕುತ್ತಿರಬಹುದು. ಉಳಿದಂತೆ ಬೇರೆ ಯಾರೂ ಹಿಜಾಬ್ ಪರ ಮಾತನಾಡುತ್ತಿಲ್ಲ" ಎಂದರು.
"ಹಿಜಾಬ್ ಪರ ಮಾತನಾಡುತ್ತಿರುವವರು ಕೆಲವೇ ಕೆಲವು ಜನರಿದ್ದಾರೆ. ಇಡೀ ಕರ್ನಾಟಕದಲ್ಲಿ ಗುಡ್ಡೆ ಹಾಕಿದರೂ ಹಿಜಾಬ್ ಪರ ಇರುವವರು ನೂರು ಜನ ಸಿಗುವುದಿಲ್ಲ. ಹಿಜಾಬ್ ಪರ ಇರುವವರ ಓಟೂ ಬೇಡ, ಅವರ ಸಿಂಪಥಿಯೂ ಬೇಡ" ಎಂದು ಅಶೋಕ ಹೇಳಿದರು.

ಸಚಿವ ಕೆ. ಎಸ್. ಈಶ್ವರಪ್ಪನವರನ್ನು ಸಂಪುಟದಿಂದ ವಜಾ ಮಾಡಬೇಕೆಂಬ ಕಾಂಗ್ರೆಸ್ ಆಗ್ರಹಕ್ಕೆ ಉತ್ತರಿಸಿದ ಅಶೋಕ, "ಈಶ್ವರಪ್ಪರನ್ನು ನೇಮಕ ಮಾಡಿದ್ದು ಬಿಜೆಪಿ ಪಕ್ಷ. ಈಶ್ವರಪ್ಪನವರನ್ನು ಕಾಂಗ್ರೆಸ್ ನೇಮಕ ಮಾಡಿದೆಯಾ?. ಕಾಂಗ್ರೆಸ್ನ ಎಲ್ಲರೂ ಬಿಜೆಪಿಗೆ ಸೇರಿಕೊಂಡು ಬಿಡಿ. ಆಮೇಲೆ ನೀವು ಬಿಜೆಪಿಗೆ ಸಲಹೆ ಕೊಡಿ" ಎಂದು ತಿರುಗೇಟು ನೀಡಿದರು.
"ಕಾಂಗ್ರೆಸ್ ಪಕ್ಷ ಬಹಳ ಗೊಂದಲದಲ್ಲಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಒಡಕು ಬೀದಿಯಲ್ಲಿದೆ. ಹಿಜಾಬ್ ವಿವಾದ ವಿಧಾನಸಭೆಯಲ್ಲಿ ಚರ್ಚೆಗೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ನ ಬಂಡವಾಳ ಏನು ಎಂಬುದು ಜನಕ್ಕೆ ಅರ್ಥ ಆಗುತ್ತಿದೆ. ನಾವು ಹಿಜಾಬ್ ರಾಜ್ಯದಲ್ಲೇ ಚರ್ಚೆಯಾಗುತ್ತಿರುವ ವಿಚಾರ. ಹಿಜಾಬ್ ವಿಚಾರ ಚರ್ಚೆ ಮಾಡಿ ಅಂದರೆ ಕಾಂಗ್ರೆಸ್ ನಾಯಕರು ಕೇಳುತ್ತಿಲ್ಲ. ಹಿಜಾಬ್ ವಿಚಾರದಲ್ಲಿ ಸರ್ಕಾರದಿಂದ ತಪ್ಪಾಗಿದ್ದರೆ ಅದನ್ನು ಹೇಳಬೇಕಾದವರು ಸುಮ್ಮನಿದ್ದಾರೆ. ಸರ್ಕಾರದ ಕಿವಿ ಹಿಂಡಬೇಕಾದವರ ಕಿವಿಯನ್ನು ನಾವೇ ಹಿಂಡಬೇಕಾಗಿದೆ" ಎಂದು ಲೇವಡಿ ಮಾಡಿದರು.
"ಹಿಜಾಬ್ ಬೇಕು ಅಂತಾ ಒತ್ತಾಯಿಸುತ್ತಿರುವವರು ಭಾರತದ ಯಾರ ಮಾತನ್ನು ಕೇಳುತ್ತಿಲ್ಲ. ಈ ಹಠದಿಂದ ಹಲವರ ವಿಧ್ಯಾಭ್ಯಾಸ ಹಾಳಾಗುತ್ತಿದೆ. ಕೆಲವರು ಟಿಸಿ ಕೇಳುತ್ತಿದ್ದಾರೆ, ಕೆಲವರು ಶಾಲೆಗೆ ಬರಲ್ಲ ಅನ್ನುತ್ತಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಐಸಿಸ್ ಸಂಘಟನೆ ಕೆಲಸ ಮಾಡುತ್ತಿದೆ. ಒಂದು ಸಂಸ್ಥೆಯ ವಿಚಾರ ಪ್ರಪಂಚಕ್ಕೆ ಹಬ್ಬಿದ್ದು ಹೇಗೆ?. ಆರು ಮಂದಿ ವಿದ್ಯಾರ್ಥಿಗಳು ಇಷ್ಟೆಲ್ಲ ಮಾಡಲು ಸಾಧ್ಯವೇ?, ವಿದ್ಯೆ ಮುಖ್ಯ ಧರ್ಮ ಮುಖ್ಯ ಅಲ್ಲ. ನಾನು ಮಕ್ಕಳಲ್ಲಿ ವಿನಂತಿ ಮಾಡುತ್ತಿದ್ದೇನೆ. ವಿದ್ಯೆ ಇದ್ದರೆ ಧರ್ಮ ಎಲ್ಲವೂ ನಿಮ್ಮ ಹತ್ತಿರ ಓಡಿ ಬರುತ್ತದೆ. ದೇಶ ದೊಡ್ಡದು ಧರ್ಮ ದೊಡ್ಡದಲ್ಲ. ಅರ್ಥ ಮಾಡಿಕೊಳ್ಳಿ" ಎಂದರು.
"ಅಂಜುಮನ್ ಇಸ್ಲಾಂ ಇಡೀ ರಾಜ್ಯದ ದೊಡ್ಡ ಶಿಕ್ಷಣ ಸಂಸ್ಥೆ. ಹಿಜಾಬ್, ಕೇಸರಿ ಮುಖ್ಯ ಅಲ್ಲ ಅಂತ ಅವರೇ ಕರೆ ಕೊಟ್ಟಿದ್ದಾರೆ. ಬಹಳಷ್ಟು ಮೌಲಿಗಳು ಹಿಜಾಬ್ ಮುಖ್ಯ ಅಲ್ಲ ಎಂದಿದ್ದಾರೆ. ದೇಶದ ಮಾತು ಕೇಳೋದು ಬಿಟ್ಟು ವಿದೇಶದ ಮಾತು ಕೇಳುತ್ತಿದ್ದಾರೆ. ಸ್ಥಳೀಯ ಮುಸ್ಲಿಂ ನಾಯಕರು ಶಿಕ್ಷಣ ಪರ ಇದ್ದಾರೆ" ಎಂದು ಸಚಿವರು ಹೇಳಿದರು.
"ಸದನವನ್ನು ಮುಂದೂಡುತ್ತಿರುವ ಕಾಂಗ್ರೆಸ್ ನಾಯಕರು ಜನರಿಗೆ ಮೋಸ ಮಾಡುತ್ತಿದ್ದಾರೆ. ಎರಡು ಲಕ್ಷ ಸಂಬಳ ತೆಗೆದುಕೊಂಡು ವಿಧಾನಸಭೆಯಲ್ಲಿ ಗೊರಕೆ ಹೊಡಿಯುತ್ತಿದ್ದಾರೆ. ಭತ್ಯೆ, ಕಾರು, ಸಂಬಳವನ್ನು ಜನರ ತೆರಿಗೆ ಹಣದಿಂದ ಪಡೆಯುತ್ತಿದ್ದಾರೆ. ಸದನದಲ್ಲಿ ಕೆಲಸ ಇಲ್ಲದೇ ಕಾಂಗ್ರೆಸಿಗರು ಮಜಾ ಮಾಡುತ್ತಿದ್ದಾರೆ. ಅವರು ಸದನದಲ್ಲಿ ನಿದ್ದೆ ಮಾಡಲು ಬಳಸಿದ ದಿಂಬು, ಚಾಪೆ, ಬೆಡ್ಗಳೂ ಜನರ ತೆರಿಗೆ ಹಣದ್ದಾಗಿದೆ" ಎಂದು ಸಚಿವರು ತಿಳಿಸಿದರು.












Click it and Unblock the Notifications