ವಿಡಿಯೋ ವೈರಲ್; ಅಪಘಾತವಾದ ಯುವತಿ ರಕ್ಷಿಸಿದ ಹತ್ತನೇ ತರಗತಿ ಬಾಲಕಿ
ಉಡುಪಿ, ಜೂನ್ 22: ನಿನ್ನೆ ಬಾರ್ಕೂರಿನ ಚೌಳಿಕೆರೆ ಸಮೀಪ ನಡೆದ ಅಪಘಾತದಲ್ಲಿ ಕಾರು ಕೆರೆಗೆ ಉರುಳಿ ಉದ್ಯಮಿ ಸಂತೋಷ್ ಶೆಟ್ಟಿ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಜೊತೆಗಿದ್ದ, ಸಂಸ್ಥೆಯ ಉದ್ಯೋಗಿ ಶ್ವೇತಾ ಎಂಬ ಯುವತಿಗೆ ಗಂಭೀರ ಗಾಯಗಳಾಗಿತ್ತು.
Recommended Video
ಆದರೆ ಅಪಘಾತದಲ್ಲಿ, ಕೆರೆಯ ನೀರಿನಲ್ಲಿ ಮುಳುಗಿ ಅಸ್ವಸ್ಥವಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಯುವತಿಯನ್ನು ಸ್ಥಳೀಯ ಬಾಲಕಿ ರಕ್ಷಿಸಿದ್ದಳು. ಅಪಘಾತವಾಗುತ್ತಿದ್ದಂತೆ ನಮನಾ ಎಂಬ ಹದಿನೈದರ ಹರೆಯದ ಬಾಲಕಿ ತಕ್ಷಣ ಸ್ಥಳಕ್ಕೆ ಆಗಮಿಸಿ ತನ್ನ ಸಮಯಪ್ರಜ್ಞೆಯಿಂದ ಯುವತಿಯನ್ನು ಉಳಿಸಿದ್ದಾಳೆ. ಇದೀಗ ಆ ವಿಡಿಯೋ ವೈರಲ್ ಆಗಿದೆ.

ಪ್ರಾಥಮಿಕ ಚಿಕಿತ್ಸೆ ನೀಡಿದ ನಮನಾ
ಶ್ವೇತಾಳನ್ನು ಮೇಲಕ್ಕೆ ಎತ್ತಿದ ತಕ್ಷಣ ನಮನಾ, ಉಸಿರು ಕೊಟ್ಟು, ಪ್ರಾಥಮಿಕ ಚಿಕಿತ್ಸೆ ನೀಡಿ ಉಸಿರು ಮರಳುವಂತೆ ಮಾಡಿದ್ದಾಳೆ. ಈಕೆಯ ಸಮಯ ಪ್ರಜ್ಞೆಗೆ, ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಲಿಟಲ್ರಾಕ್ ಶಾಲೆಯಲ್ಲಿ 10 ತರಗತಿ ಕಲಿಯುತ್ತಿರುವ ನಮನಾ ಹಿರಿಯ ಉಪನ್ಯಾಸಕಿ, ಎನ್ಎಸ್ಎಸ್ ಅಧಿಕಾರಿ ಸವಿತಾ ಎರ್ಮಾಳ್ ಮತ್ತು ಕುಮಾರ್ ಅವರ ಮಗಳು.

ಯುವತಿ ದೇಹದಲ್ಲಿನ ನೀರು ತೆಗೆದ ಬಾಲಕಿ
ಅಪಘಾತದಲ್ಲಿ ಕಾರು ಕೆರೆಗೆ ಬಿದ್ದಿತ್ತು. ಕಾರಿನೊಳಗಿದ್ದ ಯುವತಿಯನ್ನು ಸ್ಥಳೀಯರು ಮೇಲಕ್ಕೆತ್ತಿದ್ದರು. ಜೀವಚ್ಛವದಂತಾಗಿದ್ದ ಆ ಯುವತಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದಾಳೆ ನಮನಾ. ಅದಾದ ಬಳಿಕ ಮಣಿಪಾಲ ಆಸ್ಪತ್ರೆಗೆ ಯುವತಿಯನ್ನು ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ನಮನಾಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಪಘಾತದಿಂದ ಕೆರೆಗೆ ಬಿದ್ದಿದ್ದ ಕಾರು
ಬಾರ್ಕೂರು ಕಡೆಯಿಂದ ಸಾಬರಕಟ್ಟೆ ಕಡೆಗೆ ವಕ್ವಾಡಿಯ ಶ್ವೇತಾ (23) ಹಾಗೂ ಬೀಜಾಡಿ ಪ್ಲೈವುಡ್ ಅಂಗಡಿ ಮಾಲೀಕ ವಕ್ವಾಡಿ ನಿವಾಸಿ ಸಂತೋಷ ಶೆಟ್ಟಿ (40) ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ತಡೆಗೋಡೆ ಇಲ್ಲದ ಚೌಳಿಕೆರೆಗೆ ಉರುಳಿ ಬಿದ್ದಿದ್ದು, ಸಂತೋಷ್ ಶೆಟ್ಟಿ ಸಾವನ್ನಪ್ಪಿದ್ದರು. ಸ್ಥಳೀಯರು ನೀರಿಗೆ ಜಿಗಿದು ಶ್ವೇತಾರನ್ನು ಮೇಲಕ್ಕೆತ್ತಿದ್ದರು.

ಶ್ವೇತಾ ಆರೋಗ್ಯದಲ್ಲಿ ಚೇತರಿಕೆ
ಸದ್ಯ ಶ್ವೇತಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ವೇತಾ ಅವರಿಗೆ ಆ ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡದಿದ್ದಲ್ಲಿ ಬದುಕಿ ಉಳಿಯುತ್ತಿರಲಿಲ್ಲ ಎಂದು ವೈದ್ಯರು ಹೇಳಿದ್ದು, ನಮನಾ ಕಾರ್ಯದ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಚೌಳಿಕೆರೆಗೆ ತಾತ್ಕಾಲಿಕ ತಡೆ ಬೇಲಿ ನಿರ್ಮಾಣ ಮಾಡಲಾಗಿದೆ.












Click it and Unblock the Notifications