ಉಡುಪಿ: ಯುವಕರ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ ಬಾಲಕಿ!
ಉಡುಪಿ, ಜೂನ್ 06 : ಯುವಕರ ಕಿರುಕುಳದಿಂದ ಬೇಸತ್ತ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉಡುಪಿಯ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಯುವಕರ ಕಿರುಕುಳದಿಂದಾಗಿ ಜೂನ್ 02ರಂದು ಬೆಳಗ್ಗೆ ಮನೆಯಲ್ಲಿ ಇಲಿ ಪಾಷಣ ಸೇವಿಸಿ ಆತ್ಮಹತ್ಯೆ ಯತ್ನಿಸಿರುವ ಬಾಲಕಿ ಸಧ್ಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಸಾದ್ ಹೆಗ್ಡೆ(30), ಪ್ರಶಾಂತ್ ಹೆಗ್ಡೆ (28) ಹಾಗೂ ವಿನಯ ಶೆಟ್ಟಿ(29) ಎನ್ನುವರ ಕಳೆದ ಮೂರು ತಿಂಗಳು ನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
ಮೊಬೈಲ್ ಕರೆ ಹಾಗೂ ಎದುರಿನಲ್ಲಿ ಸಿಕ್ಕಿದಾಗ ಪ್ರೀತಿಸುವಂತೆ ಹೇಳಿ ಅಸಭ್ಯವಾಗಿ ವರ್ತಿಸುತ್ತಿದ್ದರೆನ್ನಲಾಗಿದೆ. ಹಾಗೂ ಜೂ.2 ರಂದು ಬಾಲಕಿಯ ಮೊಬೈಲ್ಗೆ ಕರೆ ಮಾಡಿದ ಈ ಮೂವರು ಯುವಕರು, ಆಕೆಯನ್ನು ತಾವು ಹೇಳಿದ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಬರದಿದ್ದರೆ ನಿನ್ನ ತಂದೆ ತಾಯಿಗೆ ತೊಂದರೆ ಮಾಡುತ್ತೇವೆ ಎಂಬುದಾಗಿ ಬೆದರಿಕೆ ಹಾಕಿದರೆಂದು ಎಂದು ಹೇಳಲಾಗುತ್ತಿದೆ.
ಇದರಿಂದ ಮನನೊಂದ ಬಾಲಕಿ ಅದೇ ದಿನ ಬೆಳಗ್ಗೆ ಮನೆಯಲ್ಲಿ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ತಿಳಿದು ಬಂದಿದೆ. ಇದೀಗ ಆರೋಪಿಗಳು ತಲೆಮರಿಸಿಕೊಂಡಿದ್ದು, ಅಮಾಸೆಬೈಲು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.