ಗ್ರೀನ್ ಝೋನ್ಗೆ ಉಡುಪಿ: ಚಟುವಟಿಕೆಗಳ ಬಗ್ಗೆ ಡಿಸಿ ಆದೇಶ
ಉಡುಪಿ, ಏಪ್ರಿಲ್ 28: ಉಡುಪಿ ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗದ ಹಿನ್ನಲೆಯಲ್ಲಿ ಅಧಿಕೃತವಾಗಿ ಗ್ರೀನ್ ಝೋನ್ಗೆ ಉಡುಪಿ ಜಿಲ್ಲೆ ಸೇರಿಕೊಂಡಿದೆ.
ಜಿಲ್ಲೆಯಲ್ಲಿ ಅಗತ್ಯವಿರುವ ಎಲ್ಲಾ ಚಟುವಟಿಕೆಗಳಿಗೂ ಶರತ್ತುಬದ್ಧವಾಗಿ ಈಗಾಗಲೇ ವಿನಾಯತಿ ನೀಡಲಾಗಿದೆ. ಮೇ.3 ತನಕ ಲಾಕ್ ಡೌನ್ ಜಾರಿ ಕಾರಣ ಸಾಮಾಜಿಕ ಅಂತರ ಪಾಲನೆ ಅಗತ್ಯವಾಗಿದೆ. ಆರ್ಥಿಕವಾಗಿ ಸಬಲರಾಗಿ ಕೊರೋನಾ ವಿರುದ್ಧ ಹೋರಾಡಲು ಸರಕಾರ ಕೊಟ್ಟ ಅವಕಾಶ ಇದಾಗಿದೆ. ಇದನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಬಂಗಾರದಂಗಡಿಗಳು, ಮಲ್ಟಿ ಬ್ರಾಂಡ್ ಮತ್ತು ಸಿಂಗಲ್ ಬ್ರಾಂಡ್ ಶಾಪ್, ಬ್ಯೂಟಿ ಪಾರ್ಲರ್, ಸೆಲೂನ್, ಸ್ಪಾಗಳು ಓಪನ್ ಆಗಲ್ಲ.ಹೋಟೆಲ್ ತೆರೆಯಲು ಅನುಮತಿಯಿಲ್ಲ ಆದರೆ, ಪಾರ್ಸೆಲ್ ನೀಡಲು ತೊಂದರೆಯಿಲ್ಲ. ಗ್ರೀನ್ ಜೋನ್ ಜಿಲ್ಲೆಗಳಲ್ಲಿ ಕೈಗಾರಿಕಾ ಕೇಂದ್ರ ತೆರೆಯಲು ಅವಕಾಶವಿರುವ ಹಿನ್ನಲೆ, ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ.

ಕಟ್ಟಡ ನಿರ್ಮಾಣ ಕಾರ್ಯಕ್ಕೆ, ಮನೆ ನಿರ್ಮಾಣಕ್ಕೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಪೂರಕವಾಗಿ ಮರಳು, ಕ್ರಷರ್ ಪ್ರಾರಂಭವಾಗಲು ಕ್ರಮ ಕೈಗೊಳ್ಳಲಾಗಿದೆ. ಅನುಮತಿ ನೀಡಿದ ಕಡೆ ಕಟ್ಟುನಿಟ್ಟಿನ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು ಎಂದು ಸೂಚನೆ ನೀಡಲಾಗಿದೆ.
ನಿಯಮ ಉಲ್ಲಂಘಿಸಿದರೆ, ಸಂಬಂಧಪಟ್ಟ ಮಾಲಿಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಈ ಬಗ್ಗೆ ಮುತುವರ್ಜಿವಹಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೇಲುಸ್ತುವಾರಿಗೆ ನೋಡೆಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.
ಇವೆಲ್ಲಾ ಚಟುವಟಿಕೆಗಳು ನಡೆದರೂ ಕೂಡ ಜನರು ಇಚ್ಚಾನುಸಾರ ಸುಖಾಸುಮ್ಮನೆ ತಿರುಗಾಡುವಂತಿಲ್ಲ. ಓಡಾಡುವವರು ತಮ್ಮ ತಮ್ಮ ಕೆಲಸ ನಿರ್ವಹಣೆ ಸಂಸ್ಥೆಯಿಂದ ಪಾಸ್ ಪಡೆದು ಪೊಲೀಸರಿಗೆ ತೋರಿಸಬೇಕು. ಅಂಗಡಿಗಳು ಬೆಳಿಗ್ಗೆ 7 ರಿಂದ ಬೆಳಿಗ್ಗೆ 11ರವರೆಗೆ ತೆರೆಯಬೇಕು. ಆಟೋ ರಿಕ್ಷಾ ಸೇರಿದಂತೆ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿರಬಾರದು ಎಂದು ಸೂಚನೆ ನೀಡಲಾಗಿದೆ.
ಈಗಾಗಲೇ, ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದ 750ಕ್ಕೂ ಅಧಿಕ ವಾಹನಗಳು ವಶಕ್ಕೆ ಪಡೆಯಲಾಗಿದೆ. ಗ್ರೀನ್ ಝೋನ್ ಆಗಿದ್ದು, ಜಿಲ್ಲೆಯ ಚಟುವಟಿಕೆಗಳ ಬಗ್ಗೆ ಡಿಸಿ ಜಿ ಜಗದೀಶ್ ಆದೇಶ ನೀಡಿದ್ದಾರೆ.












Click it and Unblock the Notifications