ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 'ಕೈ' ತಪ್ಪಿದ ಲೆಕ್ಕಾಚಾರ
ಉಡುಪಿ, ಮಾರ್ಚ್ 16: ಕಾಂಗ್ರೆಸ್-ಜೆಡಿಎಸ್ ಟಿಕೆಟ್ ಚೌಕಾಸಿಯಲ್ಲಿ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಜೆಡಿಎಸ್ಗೆ ಪಾಲಾಗಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಹೋಲಿಸಿದರೆ ಜೆಡಿಎಸ್ ದುರ್ಬಲವಾಗಿದೆ.
ಈ ಕ್ಷೇತ್ರದಲ್ಲಿ ಬಿಜೆಪಿಗೆ ಭಾರೀ ಪೈಪೋಟಿ ನೀಡುವ ಶಕ್ತಿ ಕಾಂಗ್ರೆಸ್ ಗೆ ಇದ್ದರೂ ಇಂದಿರಾ ಗಾಂಧಿ ಗೆದ್ದು ಪ್ರಧಾನಿಯಾದ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟಿ ಕೊಟ್ಟಿರುವುದು ಒಂದೆಡೆ ಅಚ್ಚರಿ ಮೂಡಿಸಿದರೂ ಈ ಕ್ಷೇತ್ರದಲ್ಲಿ ನೆಲೆ ಕಾಣಲು ಹೆಣಗಾಡುತ್ತಿರುವ ಜೆಡಿಎಸ್ ಈ ಕ್ಷೇತ್ರವನ್ನು ಒಪ್ಪಿಕೊಂಡಿದ್ದಾದರೂ ಏಕೆ ?ಎಂಬ ಪ್ರಶ್ನೆ ಮೂಡುತ್ತಿದೆ.
ಸ್ಪರ್ಧೆಯಿಂದ ಹಿಂದೆ ಸರಿದ ಶೋಭಾ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಯಶ್ಪಾಲ್ ಸುವರ್ಣ ಸ್ಪರ್ಧೆ?
ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದಕ್ಕೆ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯಾಗಿರುವ ಎಐಸಿಸಿ ಸದಸ್ಯ ಅಮೃತ್ ಶೆಣೈ, ಟಿಕೆಟ್ ಸಿಗದಿದ್ದರೆ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿ ಪಕ್ಷೇತರ ಆಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಮಧ್ಯೆ ಕ್ಷೇತ್ರದಿಂದ ಮತ್ತೊಬ್ಬರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ಡಾ ಆರತಿ ಕೃಷ್ಣ ಅವರಿಗೆ ಜೆಡಿಎಸ್ ಅಧ್ಯಕ್ಷ ಎಚ್.ಡಿ. ದೇವೇಗೌಡರು ದೂರವಾಣಿ ಕರೆ ಮಾಡಿ ಸ್ಪರ್ಧೆಗೆ ಆಹ್ವಾನಿಸಿದ್ದಾರೆನ್ನಲಾಗಿದೆ. ಆದರೆ ಆರತಿಯವರು ದಿಲ್ಲಿಗೆ ತೆರಳಿ ಕಾಂಗ್ರೆಸ್ನಿಂದ ಟಿಕೆಟ್ ಗೆ ಪ್ರಯತ್ನಿಸುತ್ತಾರೆನ್ನಲಾಗಿದೆ.
ಕಳೆದ ವಿಧಾನ ಸಭಾ ಚುನಾವಣೆಯ ಮತಗಳಿಕೆಯ ಲೆಕ್ಕಾಚಾರ ನೋಡಿದರೆ ಉಡುಪಿ ಜಿಲ್ಲೆಯಲ್ಲಿ ಶೋಚನೀಯ ಸ್ಥಿತಿಯಲ್ಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಕ್ಷೇತ್ರವಾರು ಬಿಜೆಪಿಯು 3,55,518 ಮತ ಪಡೆದಿದ್ದರೆ, ಕಾಂಗ್ರೆಸ್ 2,33,586 ಗಳಿಸಿತ್ತು ಆದರೆ ಜೆಡಿಎಸ್ಗೆ 6,589 ಮತಗಳು ಲಭಿಸಿತ್ತು.
'ಕೈ' ತಪ್ಪಿದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ:ಬಿಜೆಪಿ ಪಾಳಯದಲ್ಲಿ ಹರ್ಷ
ಹಾಗೆಯೇ ಚಿಕ್ಕಮಗಳೂರು ಕ್ಷೇತ್ರವಾರು ಲೆಕ್ಕದ ಪ್ರಕಾರ ಬಿಜೆಪಿಗೆ 2,35,377 ಮತಗಳು ದಕ್ಕಿದ್ದರೆ, ಕಾಂಗ್ರೆಸ್ಗೆ 1,86,853 ಸಿಕ್ಕಿತ್ತು. ಜೆಡಿಎಸ್ ತುಸು ಸಮಾಧಾನಕಾರವೆಂಬ ಸಾಧನೆ ಪ್ರದರ್ಶಿಸಿ 84,753 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು.
2014ರ ಲೋಕಸಭಾ ಚುನಾವಣೆಯಲ್ಲಿ ಚಲಾವಣೆ ಯಾದ 10,34,108 ಮತಗಳಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆಗೆ 5,81,168, ಕಾಂಗ್ರೆಸ್ನ ಜಯಪ್ರಕಾಶ್ ಹೆಗ್ಡೆಯವರಿಗೆ 3,99,525, ಜೆಡಿಎಸ್ನ ವಿ. ಧನಂಜಯ ಕುಮಾರರಿಗೆ 14,895 ಮತಗಳು ದೊರಕಿದ್ದವು. ಜೆಡಿಎಸ್ ನೊಂದಿಗೆ ಈ ಹೊಂದಾಣಿಗೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಗೆ ಮುಳುವಾಗಲಿದೆ ಎಂದು ವಿಮರ್ಶಿಲಾಗುತ್ತಿದೆ.