ಹೆಜಮಾಡಿಯಲ್ಲಿ ಈಜಲು ಹೋದ ಇಬ್ಬರು ನೀರುಪಾಲು: ಓರ್ವನ ರಕ್ಷಣೆ
ಉಡುಪಿ, ನವೆಂಬರ್ 6: ಉಡುಪಿ ಜಿಲ್ಲೆಯ ಹೆಜಮಾಡಿ ಅಳಿವೆ ಸಮೀಪ ಸ್ನಾನಕ್ಕೆ ಇಳಿದ ಬಾಲಕರಿಬ್ಬರು ನೀರು ಪಾಲಾದ ಘಟನೆ ನಡೆದಿದ್ದು, ಓರ್ವ ಬಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಸ್ಥಳೀಯ ಬಾಲಕ ಮೋಸಿನ್ (16) ಮತ್ತು ಮೊಹಮ್ಮದ್ ರಾಯಿಸ್ (16) ಮೃತಪಟ್ಟವರು. ಮೊಹಮ್ಮದ್ ನಬೀಲ್ (16) ಎಂಬ ಬಾಲಕನನ್ನು ರಕ್ಷಣೆ ಮಾಡಲಾಗಿದೆ. ಮೂವರು ಬಾಲಕರು ಹೆಜಮಾಡಿ ಎನ್.ಎಸ್. ರಸ್ತೆ ನಿವಾಸಿಗಳು. ಇವರು ಹೆಜಮಾಡಿಯ ಕಾಮಿನಿ ಹೊಳೆ ಹಾಗೂ ಸಮುದ್ರ ಸೇರುವ ಮುಟ್ಟಳಿವೆ ಬಳಿ ಸ್ನಾನ ಮಾಡಲು ತೆರಳಿದ್ದರು.
ಗುರುವಾರ, ನ.5ರ ಸಂಜೆ ದಡದಲ್ಲಿ ಸ್ನಾನ ಮಾಡಿ ಈಜಲು ನೀರಿಗೆ ಇಳಿದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೂವರು ನೀರಿಗಿಳಿದು ಈಜಲು ಆರಂಭಿಸಿದ್ದು, ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ.

ಇದನ್ನು ಕಂಡ ಮಹಿಳೆಯೊಬ್ಬರು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಮೂವರನ್ನು ಮೇಲಕ್ಕೆತ್ತಲಾಗಿದೆ. ಓರ್ವ ಅಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಮತ್ತೊಬ್ಬ ಅಪಾಯದಿಂದ ಪಾರಾಗಿದ್ದಾನೆ.
ಪಡುಬಿದ್ರಿ ಠಾಣಾ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.












Click it and Unblock the Notifications