ಮೈಕ್ರೋಫೈನಾನ್ಸ್ ಗಳ ದೌರ್ಜನ್ಯ: ಉಡುಪಿಯಲ್ಲಿ ಧರಣಿ ಕೂತ ಸಾವಿರಾರು ಮಹಿಳೆಯರು
ಉಡುಪಿ, ಫೆಬ್ರವರಿ 06: ಮೈಕ್ರೋಫೈನಾನ್ಸ್ ಗಳ ವಿರುದ್ಧ ಉಡುಪಿಯಲ್ಲಿ ಬೃಹತ್ ಹೋರಾಟ ನಡೆಯುತ್ತಿದೆ. ನಗರದ ಬೀಡಿನಗುಡ್ಡೆ ಮೈದಾನದಲ್ಲಿ ಇಂದು ಬೃಹತ್ ಸಾರ್ವಜನಿಕ ಸಭೆ ನಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಸಂತ್ರಸ್ತ ಮಹಿಳೆಯರು ಸೇರಿದ್ದರು.
ರಾಜ್ಯ ಋಣಮುಕ್ತ ಹೋರಾಟ ಸಮಿತಿ ಮತ್ತು ದಲಿತ ಸಂಘಟನೆಗಳು ಈ ಸಂತ್ರಸ್ತ ಮಹಿಳೆಯರನ್ನು ಒಂದೇ ವೇದಿಕೆಯಡಿ ತಂದು ಪ್ರತಿಭಟನೆ ನಡೆಸಿತು. ಈ ಮಹಿಳೆಯರೆಲ್ಲ ಜಿಲ್ಲೆಯ ವಿವಿಧ ಮೈಕ್ರೋ ಫೈನಾನ್ಸ್ ಗಳಿಂದ 25 ಸಾವಿರದಿಂದ ಒಂದು ಲಕ್ಷದ ತನಕ ಸಾಲ ಪಡೆದವರು. ಆದರೆ ಸಾಲ ವಸೂಲಾತಿ ನೆಪದಲ್ಲಿ ಫೈನಾನ್ಸ್ ಕಂಪೆನಿಗಳು ದೌರ್ಜನ್ಯ ನಡೆಸುತ್ತಿವೆ ಎಂಬುದು ಈ ಮಹಿಳೆಯರ ಆರೋಪ. ಈ ಸಂಬಂಧ ಮಹಿಳೆಯರು ಇಂದು ಬೀಡಿನಗುಡ್ಡೆಯಲ್ಲಿ ಪ್ರತಿಭಟನೆ ನಡೆಸಿದರು.

ಸಾಲ ನೀಡಿರುವ ಫೈನಾನ್ಸ್ ಸಂಸ್ಥೆಗಳು ದೌರ್ಜನ್ಯ ಎಸಗುತ್ತಿವೆ, ಸಾಲ ಕಟ್ಟಲು ತಡವಾದರೆ ರೌಡಿಗಳ ಮೂಲಕ ಮಾನಸಿಕ ಕಿರುಕುಳ ನೀಡುತ್ತಲಿವೆ ಎಂದು ಆರೋಪಿಸುತ್ತಾರೆ ಈ ಮಹಿಳೆಯರು. ಮತ್ತೊಂದೆಡೆ ಈ ಮಹಿಳೆಯರ ಸಾಲ ಮನ್ನಾ ಮಾಡಿಸುತ್ತೇವೆ ಎಂದು ಹೊರಟಿರುವ ರಾಜ್ಯ ಋಣ ಮುಕ್ತ ಹೋರಾಟ ಸಮಿತಿ, ಈ ಮಹಿಳೆಯರಿಂದ ತಲಾ 120 ರೂ ಶುಲ್ಕ ಪಡೆದಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಹೋರಾಟ ನಡೆಸಲು ಹಣ ಏಕೆ? ಮೊದಲೇ ಸಾಲ ಪಡೆದು ಹೈರಾಣಾಗಿರುವ ಮಹಿಳೆಯರಿಂದ ಶುಲ್ಕ ಪಡೆದು ಅವರಿಗೆ ಮತ್ತಷ್ಟು ತೊಂದರೆ ನೀಡುವ ಅವಶ್ಯಕತೆ ಏನಿದೆ ಎನ್ನುವುದು ಉಡುಪಿಯ ಕೆಲವು ಸಾಮಾಜಿಕ ಕಾರ್ಯಕರ್ತರ ಪ್ರಶ್ನೆ.
ಸಾಲಗಾರರಿಂದ ಹೋರಾಟ ನಡೆಸಲು 120 ರೂಪಾಯಿ ಶುಲ್ಕ ಪಡೆಯುತ್ತಿರುವ ಸಮಿತಿ ಬಗ್ಗೆ ಈಗ ಅಪಸ್ವರ ಕೇಳಿಬರತೊಡಗಿದೆ. ಸಂಬಂಧಪಟ್ಟ ಇಲಾಖೆ ಇತ್ತ ಕಡೆ ಗಮನ ಹರಿಸಬೇಕಿದೆ.












Click it and Unblock the Notifications