ನೋಟು ನಿಷೇದಿಂದ ಮುಜರಾಯಿ ಇಲಾಖೆಗೆ ಹೊಸ ತಲೆನೋವು
ಮಂಗಳೂರು. ಜೂನ್ 20: ಕೇಂದ್ರ ಸರ್ಕಾರ ಹಳೆಯ 500 ರು. ಮತ್ತು 1 ಸಾವಿರ ರು. ಮೌಲ್ಯದ ನೋಟುಗಳನ್ನು ನಿಷೇಧ ಮಾಡಿ ಏಳು ತಿಂಗಳು ಕಳೆದರೂ ಕರಾವಳಿಯ ಕೆಲವು ದೇವಾಲಯಗಳ ಹುಂಡಿಯಲ್ಲಿ ಮಾತ್ರ ಈಗಲೂ ಹಳೆಯ ನೋಟುಗಳೇ ಪತ್ತೆಯಾಗುತ್ತಿರುವುದು ಮುಜರಾಯಿ ಇಲಾಖೆಗೆ ತಲೆನೋವು ತಂದುಕೊಟ್ಟಿದೆ.
ಕರಾವಳಿಯಲ್ಲಿ ೪೯೧ ದೇವಾಲಯಗಳು ಈಗಾಗಲೇ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿದೆ. ಇಲಾಖೆ ದೇವಳದ ಆದಾಯ ಲೆಕ್ಕಾಚಾರದಲ್ಲಿ ಎ, ಬಿ, ಸಿ ಎನ್ನುವ ರೀತಿಯಲ್ಲಿ ವರ್ಗಿಕರಣ ಮಾಡಿಕೊಂಡಿದೆ. ಮುಖ್ಯವಾಗಿ ಎ ವರ್ಗದಲ್ಲಿ ೨೫ ಲಕ್ಷ ಹೆಚ್ಚಿನ ಆದಾಯ ಕೊಡುವ ದೇವಾಲಗಳು, ಬಿ ವರ್ಗದಲ್ಲಿ ೨೫ ಲಕ್ಷಕ್ಕಿಂತ ಕಳಗಡೆ ಹಾಗೂ ಸಿ ವರ್ಗದಲ್ಲಿ ೫ ಲಕ್ಷ ಹಾಗೂ ಅದರ ಮೇಲ್ಪಟ್ಟು ಆದಾಯ ಪಡೆಯುವ ದೇವಾಲಗಳು ಎಂದು ವರ್ಗೀಕರಿಸಲಾಗಿದೆ.

ಅದರಲ್ಲೂ ಮುಖ್ಯವಾಗಿ 'ಎ' ವರ್ಗದ ದೇವಾಲಯಗಳ ಹುಂಡಿಯಲ್ಲಿ ಈ ನಿಷೇಧಿತ ನೋಟುಗಳು ಪತ್ತೆಯಾಗಿವೆ. ತಾಲೂಕು ಮಟ್ಟದ 11 ದೇವಾಲಗಳಲ್ಲಿ ಈ ನಿಷೇಧಿತ ನೋಟುಗಳು ಸಿಕ್ಕಿವೆ.

ಹಳೆ ನೋಟುಗಳು ನಿಷೇಧವಾಗಿ ಹೊಸ ನೋಟುಗಳು ಚಲಾವಣೆಗೆ ಬಂದು ತಿಂಗಳುಗಳೇ ಕಳೆದಿದ್ದರೂ ಇನ್ನೂ ಹಳೇ ನೋಟುಗಳೇ ಬಂದು ಹುಂಡಿಗಳಲ್ಲಿ ಬೀಳುತ್ತಿರುವುದು ಮಾಮೂಲಿಯಾಗಿದೆ. ಹಳೆ ನೋಟುಗಳನ್ನು ಆರ್ ಬಿ ಐ ಸ್ವೀಕರಿಸುತ್ತಿಲ್ಲವಾದ್ದರಿಂದ ಮುಜರಾಯಿ ಇಲಾಖೆಗೆ ತಲೆನೋವಾಗಲು ಕಾರಣ.
ನೋಟು ನಿಷೇಧದ ಸಮಯದಲ್ಲಿ ಕರಾವಳಿಯ ಬಹುತೇಕ ದೇಗುಲಗಳಿಂದ 1 ಕೋಟಿ ರು.ಗೂ ಅಧಿಕ ಮೌಲ್ಯದ ಹಳೆಯ ನೋಟುಗಳನ್ನು ಪಡೆದುಕೊಳ್ಳಲಾಗಿತ್ತು ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

ಈ ಕುರಿತು ಧಾರ್ಮಿಕ ದತ್ತಿ ಇಲಾಖೆಯ ಉಪ ನಿರ್ದೇಶಕರಾದ ಪ್ರಮೀಳಾ ಎಂ.ಕೆ ಅವರು ಹೇಳುವಂತೆ ದೇವಾಲಗಳಿಗೆ ಬರುವ ಭಕ್ತಾದಿಗಳು ನಿಷೇಧಿತ ನೋಟುಗಳ ಕುರಿತು ಗೊತ್ತಿದ್ದರೂ ಕೂಡ ಅದನ್ನೇ ಹುಂಡಿಗಳಲ್ಲಿ ಹಾಕುತ್ತಿದ್ದಾರೆ. ಈಗಾಗಲೇ ಹುಂಡಿಯಲ್ಲಿರುವ 11,18,500 ರು.ಮೊತ್ತವನ್ನು ಪ್ರತ್ಯೇಕವಾಗಿ ದೇವಳದ ಅಕೌಂಟ್ ನಲ್ಲಿ ಇಡಲಾಗುತ್ತಿದೆ. ಆರ್ ಬಿ ಐ ಯಿಂದ ಯಾವುದಾದರೂ ಸೂಚನೆ ಬರಬಹದು ಎನ್ನುವ ಈ ನೋಟುಗಳನ್ನು ಕಾಯ್ದಿರಿಸಲಾಗುತ್ತಿದೆ ಎಂದು ಹೇಳಿದ್ದಾರೆ.












Click it and Unblock the Notifications