ಮಂಡ್ಯ ವ್ಯಕ್ತಿಯಿಂದ ಆತಂಕದಲ್ಲಿದ್ದ ತೆಕ್ಕಟ್ಟೆ ಜನರೀಗ ರಿಲ್ಯಾಕ್ಸ್
ಉಡುಪಿ, ಮೇ 01: ಕುಂದಾಪುರ ತಾಲೂಕಿನ ತೆಕ್ಕಟ್ಟೆ ನಿವಾಸಿಗಳು ಸದ್ಯ ನಿರಾಳರಾಗಿದ್ದಾರೆ. ಮೂರು ದಿನಗಳ ಮುನ್ನ ಕ್ವಾರಂಟೈನ್ ಗೊಳಗಾಗಿದ್ದ ತೆಕ್ಕಟ್ಟೆ ಪರಿಸರದ ಎಲ್ಲಾ 18 ಮಂದಿಯ ವರದಿ ನೆಗೆಟಿವ್ ಬಂದಿದೆ.
ಇವರೆಲ್ಲ ಮಂಡ್ಯ ಜಿಲ್ಲೆಯ ನಾಗಮಂಗಲದ ಪಾಸಿಟಿವ್ ವ್ಯಕ್ತಿಯ ಸಂಪರ್ಕಕ್ಕೆ ಬಂದವರಾಗಿದ್ದರು. ಮುಂಬೈನಿಂದ ಮಂಡ್ಯಕ್ಕೆ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ರೋಗಿಯು ಈ ಪರಿಸರದ ಪೆಟ್ರೋಲ್ ಬಂಕ್ ನಲ್ಲಿ ಇಳಿದು ಅವಾಂತರ ಸೃಷ್ಟಿಸಿದ್ದ. ಹೀಗಾಗಿ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಮತ್ತು ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಿ ಗಂಟಲ ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು.
ಉಡುಪಿಗೆ ತೊಡಕಾದ ನಾಗಮಂಗಲ ಕೊರೊನಾ ಸೋಂಕಿತನ ಬಂಕ್ ಸ್ಟೇ
ಕೊರೊನಾ ಸೋಂಕಿತ ಮಂಡ್ಯದ ವ್ಯಕ್ತಿ ಪೆಟ್ರೋಲ್ ಬಂಕ್ ನಲ್ಲಿ ಊಟ, ನಿದ್ದೆ, ಸ್ನಾನ ಮಾಡಿದ್ದ. ಮಾತ್ರವಲ್ಲ, ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿ ಜೊತೆಗೂ ಸಂಪರ್ಕಕ್ಕೆ ಬಂದಿದ್ದ. ಈ ಘಟನೆಯ ನಂತರ ತೆಕ್ಕಟ್ಟೆಯ ಜನರಲ್ಲಿ ಆತಂಕ ಮನೆಮಾಡಿತ್ತು ಮತ್ತು ಇಲ್ಲಿನ ಪೆಟ್ರೋಲ್ ಬಂಕ್ ಅನ್ನೂ ಸೀಲ್ ಡೌನ್ ಮಾಡಲಾಗಿತ್ತು. ಸದ್ಯ ಎಲ್ಲರ ವರದಿಯೂ ನೆಗೆಟಿವ್ ಆಗಿದ್ದು, ತೆಕ್ಕಟ್ಟೆಯ ಜನ ನಿಟ್ಟುಸಿರು ಬಿಟ್ಟಿದ್ದಾರೆ.