ಕೈಕೊಟ್ಟ ಸುಜ್ಲಾನ್ ಕಂಪನಿ ವಿರುದ್ಧ ಕಾರ್ಮಿಕರಿಂದ ಭಾರೀ ಪ್ರತಿಭಟನೆ
ಉಡುಪಿ, ನವೆಂಬರ್ 8: ಉಡುಪಿ ಜಿಲ್ಲೆಯ ಪಡುಬಿದ್ರಿಯ ನಂದಿಕೂರಿನಲ್ಲಿರುವ ಸುಜ್ಲಾನ್ ಕಂಪೆನಿ ವಿರುದ್ಧ ಕಳೆದ ಮೂರು ದಿನಗಳಿಂದ ನೂರಕ್ಕೂ ಅಧಿಕ ಕಾರ್ಮಿಕರನ್ನು ಪ್ರತಿಭಟನೆ ನಡೆಸುತ್ತಿದ್ದಾರೆ .
ಮಂಗಳವಾರ ಕರವೇ ಕಾರ್ಯಕರ್ತರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಕಾರ್ಮಿಕರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಸುಜ್ಲಾನ್ ಕಂಪೆನಿ ಗುತ್ತಿಗೆ ಆಧಾರದಲ್ಲಿರುವ ಕಾರ್ಮಿಕರನ್ನು ಏಕಾಏಕಿ ವಜಾಗೊಳಿಸಿದೆ ಎಂದು ಆರೋಪಿಸಲಾಗಿದೆ. ಕೆಲಸಗಾರರನ್ನು ವಜಾ ಮಾಡಿರುವ ಹಿನ್ನೆಲೆಯಲ್ಲಿ ಮೂರು ತಿಂಗಳ ಸಂಬಳವನ್ನು ಹೆಚ್ಚುವರಿಯಾಗಿ ತಕ್ಷಣ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಬೇಡಿಕೆ ಇಡೇರಿಸಲು ಮೀನಾಮೇಷ
ಆದರೆ ಕಂಪೆನಿ ಅಧಿಕಾರಿಗಳು ಪ್ರತಿಭಟನಾ ನಿರತ ಕಾರ್ಮಿಕರ ಬೇಡಿಕೆ ಈಡೇರಿಸಲು ಮೀನಾಮೇಷ ಎಣಿಸುತ್ತಿದ್ದು ಪ್ರತಿಭಟನಾಕಾರರು ಕಂಪನಿಯ ಮುಖ್ಯದ್ವಾರದ ಮುಂಭಾಗ ಟಯರ್ ಗೆ ಬೆಂಕಿ ಹೊತ್ತಿಸಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.
ಕಂಪನಿ ಕ್ಲೋಸ್?
ಕಂಪನಿ ಮುಚ್ಚುವ ಹಿನ್ನೆಲೆಯಲ್ಲಿ ಕಾರ್ಮಿಕರನ್ನು ತೆಗೆದು ಹಾಕಲಾಗಿದೆ. ಗುತ್ತಿಗೆ ಕಾರ್ಮಿಕರನ್ನು ಮಾತ್ರ ತೆಗೆದು ಹಾಕಿದ್ದಲ್ಲ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಂಪನಿ ಸುತ್ತ ಬಿಗಿ ಬಂದೋಬಸ್ತ್
ಕಾರ್ಮಿಕರ ಪ್ರತಿಭಟನೆ ಹಿನ್ನಲೆಯಲ್ಲಿ ಕಂಪನಿಗೆ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರು ಹಾಗೂ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಆದರೆ ಸಂಧಾನ ವಿಫಲವಾಗಿದೆ.
ಗಾಳಿ ಯಂತ್ರದ ರೆಕ್ಕೆ ಉತ್ಪಾದನಾ ಕಂಪನಿ
ಸುಜ್ಲಾನ್ ಗಾಳಿಯಂತ್ರದ ರೆಕ್ಕೆಗಳನ್ನು ಉತ್ಪಾದಿಸುವ ಕಂಪನಿಯಾಗಿದೆ. ಕರ್ನಾಟಕದ ಹೆಚ್ಚಿನ ಪವನ ಶಕ್ತಿ ಉತ್ಪಾದಿಸುವ ಗಾಳಿಯಂತ್ರಗಳಿಗೆ ರೆಕ್ಕೆಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಈ ಕಂಪನಿ ವಿರುದ್ಧ ಈ ಹಿಂದೆಯೂ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು.