ಕೋವಿಡ್, ತೌಕ್ತೆ ನಿರ್ವಹಣೆ ಕುರಿತು ಸಂಸದರ ಸಭೆ; ಹಾನಿಯ ಅವಲೋಕನ
ಉಡುಪಿ, ಮೇ 16; ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಖಾಯಿಲೆಯ ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಕಳೆದ 8 ದಿನಗಳಲ್ಲಿ ಇದೀಗ ಎರಡನೇ ಬಾರಿಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೋವಿಡ್ ನಿರ್ವಹಣೆಯ ಕುರಿತು ಪರಿಶೀಲನೆ ನಡೆಸಿದರು.
ಕೋವಿಡ್ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿರುವ ಜಿಲ್ಲೆಯ ನಾಗರೀಕರಿಗೆ ಬೆಡ್ ಹಂಚಿಕೆ, ಆಕ್ಸಿಜನ್ ಪೂರೈಕೆ, ರೆಮಿಡಿಸಿವರ್ ಸರಬರಾಜು, ವ್ಯಾಕ್ಸಿನ್ ನೀಡುವಿಕೆ ಮೊದಲಾದ ವಿಚಾರಗಳ ಬಗ್ಗೆ ಮಾಹಿತಿಯನ್ನು ಶೋಭಾ ಕರಂದ್ಲಾಜೆ ಪಡೆದುಕೊಂಡರು.
ಆಸ್ಪತ್ರೆಗಳಿಗೆ ದಾಖಲಾಗುವ ಜಿಲ್ಲೆಯ ಯಾವುದೇ ಕೋವಿಡ್ ಸೋಂಕಿತರಿಗೆ ಯಾವುದೇ ಕೊರತೆಯಾಗದಂತೆ ಹೇಗೆ ಸನ್ನದ್ಧರಾಗಿರಬೇಕೆಂಬ ಕುರಿತು ಜಿಲ್ಲಾಡಳಿತದ ಕೋವಿಡ್ ನಿರ್ವಹಣಾ ತಂಡಕ್ಕೆ ಮಾರ್ಗದರ್ಶನ ನೀಡಿದರು. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದನ್ನು ಉಲ್ಲೇಖಿಸಿದ ಅವರು ಗ್ರಾಮ ಪಂಚಾಯಿತಿ ಮಟ್ಟದ ಕೋವಿಡ್ ಕಾರ್ಯಪಡೆಯು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡಲು ಸೂಚಿಸಿದರು.

ಸಭೆಯಲ್ಲಿ ಪ್ರತಿಯೊಬ್ಬ ಅಧಿಕಾರಿಯಿಂದ ವಿವರವಾಗಿ ವರದಿ ಪಡೆದ ಸಂಸದೆ ಶೋಭಾರವರು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಸಭೆ ನಡೆಯುತ್ತಿದ್ದಾಗಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂಪರ್ಕಿಸಿ, ಉಡುಪಿ ಜಿಲ್ಲೆಗೆ ಅಗತ್ಯವಿರುವ ಆಕ್ಸಿಜನ್, ರೆಮಿಡಿಸಿವರ್, ಇತರ ಅಗತ್ಯದ ಔಷಧಿಗಳು, ಆಸ್ಪತ್ರೆ ಸಲಕರಣೆಗಳು ಮೊದಲಾದುವುಗಳ ಪೂರೈಕೆ ಬಗ್ಗೆ ಚರ್ಚಿಸಿ, ಶೀಘ್ರ ಪೂರೈಕೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಸಭೆಯ ಬಳಿಕ ಮಾತನಾಡಿದ ಸಂಸದರು, "ಒಟ್ಟಾರೆಯಾಗಿ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಕೋವಿಡ್ನ ಎರಡನೇ ಅಲೆ ಹಿಮ್ಮೆಟ್ಟುತ್ತಿರುವ ಲಕ್ಷಣಗಳು ಗೋಚರಿಸುತ್ತಿದೆ. ಉಡುಪಿ ಜಿಲ್ಲೆಯ ಜನತೆ ಅದರಲ್ಲೂ ಮುಖ್ಯವಾಗಿ ಸೋಂಕಿತರು ಮತ್ತವರ ಕುಟುಂಬಗಳ ಸದಸ್ಯರು ಯಾವುದೇ ರೀತಿಯ ಒತ್ತಡ, ಆತಂಕಕ್ಕೊಳಗಾಗಬಾರದು" ಎಂದು ಮನವಿ ಮಾಡಿದರು.
ಬಳಿಕ ಅವರು ತೌಕ್ತೆ ಚಂಡಮಾರುತದ ಪರಿಣಾಮಗಳನ್ನು ಎದುರಿಸಲಯ ಜಿಲ್ಲೆಯ ಉಡುಪಿ, ಮಲ್ಪೆ, ಕಾಪು, ಪಡುಬಿದ್ರಿ, ಬೇಂಗ್ರೆ, ಕುಂದಾಪುರ, ಬೈಂದೂರು ಮೊದಲಾದ ಪ್ರದೇಶಗಳ ಕರಾವಳಿ ಭಾಗಗಳಲ್ಲಿ ಕೈಗೊಳ್ಳಲಾದ ಮುನ್ನೆಚ್ಚರಿಕಾ ಕ್ರಮಗಳನ್ನು ಅವಲೋಕಿಸಿದರು. ಅಗತ್ಯವಿರುವೆಡೆಗಳಲ್ಲಿ ತೀರ ಪ್ರದೇಶಗಳ ನಿವಾಸಿಗಳನ್ನು ಸಾಕಷ್ಟು ಮುಂಚಿತವಾಗಿಯೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದರು.












Click it and Unblock the Notifications