ಅಮೀನ್ ಮಟ್ಟು ವಿರುದ್ಧ ಮಾದಾರ ಚನ್ನಯ್ಯ ಸ್ವಾಮೀಜಿ ಗಂಭೀರ ಆರೋಪ
"2016 ರ ಅಕ್ಟೋಬರ್ ಹತ್ತರಂದು ನಡೆದ ಉಡುಪಿ ಚಲೋ ಹಿಂದೆ ಸಿಎಂ ಮಾಧ್ಯಮ ಸಲಹೆಗಾರ ಹುನ್ನಾರವಿದೆ. ಉಡುಪಿಗೆ ಮುತ್ತಿಗೆ ಹಾಕಿದ್ದರ ಹಿಂದೆ ಇದ್ದದ್ದು ರಾಜಕೀಯ ಕಾರಣ," ಎಂದು ಚನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ, ಎಪ್ರಿಲ್ 20: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬುಧವಾರ ಬಸವಮೂರ್ತಿ ಶ್ರೀಮಾದಾರ ಚನ್ನಯ್ಯ ಸ್ವಾಮೀಜಿ ಭೇಟಿ ನೀಡಿದರು. ಈ ವೇಳೆ ಅವರು ಪ್ರಗತಿಪರ ಸಂಘಟನೆಗಳ ಹಾಗೂ ಮುಖ್ಯಮಂತ್ರಿ ಸಲಹೆಗಾರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
"2016 ರ ಅಕ್ಟೋಬರ್ ಹತ್ತರಂದು ನಡೆದ ಉಡುಪಿ ಚಲೋ ಹಿಂದೆ ಸಿಎಂ ಮಾಧ್ಯಮ ಸಲಹೆಗಾರ (ದಿನೇಶ್ ಅಮೀನ್ ಮಟ್ಟು) ಹುನ್ನಾರವಿದೆ. ಉಡುಪಿಗೆ ಮುತ್ತಿಗೆ ಹಾಕಿದ್ದರ ಹಿಂದೆ ಇದ್ದದ್ದು ರಾಜಕೀಯ ಕಾರಣ," ಎಂದು ಹೇಳಿದ್ದಾರೆ.
"ಎಲ್ಲಾ ರಾಜಕೀಯ ಪಕ್ಷಗಳು ದಲಿತರಿಗೆ ಆಸೆ ತೋರಿಸಿದೆ. ಆದರೆ ಅಧಿಕಾರ ಕೊಟ್ಟಿಲ್ಲ. ದಲಿತ ಸಮುದಾಯದ ಅರ್ಹ ಮಹಿಳೆ ರತ್ನಪ್ರಭಾ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಬೇಕಿತ್ತು. ಆದರೆ ರಾಜ್ಯ ಸರ್ಕಾರ ಈ ಅವಕಾಶವನ್ನು ತಪ್ಪಿಸಿತ್ತು' ಎಂದು ಗಂಭೀರ ಆರೋಪ ಮಾಡಿದ್ದಾರೆ.'[ಉಡುಪಿ: ಅಂಬೇಡ್ಕರ್ ಗೆ ಅವಮಾನ, ಆರೋಪಿಗಾಗಿ ಶೋಧ]
"ದಲಿತರಿಗೆ ಈ ಹುನ್ನಾರ ಗೊತ್ತಾಗದಂತೆ ವಿಷಯವನ್ನು ಕೃಷ್ಣ ಮಠದ ಕಡೆ ತಿರುಗಿಸಿದರು. ಸಿಎಂ ಮಾಧ್ಯಮ ಸಲಹೆಗಾರರು ಈ ಪ್ರಕರಣ ಚರ್ಚೆಯೇ ಆಗದಂತೆ ನೋಡಿಕೊಂಡರು. ಇದು ಉಡುಪಿ ಚಲೋ ಹಿಂದಿನ ಸತ್ಯ," ಎಂದಿದ್ದಾರೆ.
ಇದೇ ವೇಳೆ ಪೇಜಾವರ ಶ್ರೀಪಾದರಿಗೆ ಧೈರ್ಯ ತುಂಬಿದ ಅವರು, "ಪೇಜಾವರಶ್ರೀಗಳು ಯಾವುದಕ್ಕೂ ಎದೆಗುಂದಬೇಡಿ. ನಿಮ್ಮ ಕಾರ್ಯವನ್ನು ನೀವು ಮುಂದುವರೆಸಿ," ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.[ಉಡುಪಿಗೆ ಬಂದ ಜರ್ಮನಿ ವಿದ್ಯಾರ್ಥಿಗಳು]
"ಎಲ್ಲಾ ವರ್ಗದವರೂ ಮುಖ್ಯಮಂತ್ರಿ ಆಗಬೇಕು. ದಲಿತರಿಗೆ ರಾಜಕೀಯ ಪ್ರಜ್ಞೆ ಬರಬೇಕು. ದಲಿತರು ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಬೇಕು. ಅವಕಾಶ ಕೊಟ್ಟರೆ ದಲಿತರು ಸಾಮರ್ಥ್ಯ ಪ್ರದರ್ಶನ ಮಾಡಬಹುದು. ದಲಿತರು ಸಿಎಂ ಆಗುವುದು ಸಂವಿಧಾನ ಬದ್ಧ ಹಕ್ಕು," ಎಂದು ಚನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.
'ದಲಿತರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ, ಅವಕಾಶ ಕೊಡುವ ಸ್ಥಾನದಲ್ಲಿದ್ದವರಿಗೆ ಮುಕ್ತ ಮನಸ್ಸು ಬರಬೇಕು. ಈಗ ಅಧಿಕಾರದಲ್ಲಿದ್ದವರಿಗೆ ಆ ವಿಶಾಲ ಮನೋಭಾವನೆ ಬೇಕು. ಸದ್ಯ ಅಥವಾ ಮುಂದಿನ ಚುನಾವಣೆಯಲ್ಲಿ ದಲಿತರು ಸಿಎಂ ಆಗುವ ಭರವಸೆ ಇಲ್ಲ. ದಲಿತ ಸಿಎಂ ಆಗಬೇಕೆಂದು ಒತ್ತಡ ಹೇರುತ್ತಾರೆ. ನಾವೂ ಒತ್ತಡ ಹೇರುತ್ತೇವೆ' ಎಂದು ಬಸವಮೂರ್ತಿ ಶ್ರೀಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.