ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ: ಉಡುಪಿಯಲ್ಲಿ ಸೆಕ್ಷನ್ 144 ಜಾರಿ
ಉಡುಪಿ, ಸೆಪ್ಟೆಂಬರ್,10: ಶಾಂತಿಯುತವಾಗಿ ನಡೆಯುತ್ತಿದ್ದ ಭಾರತ್ ಬಂದ್ ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನಡುವಿನ ಸಂಘರ್ಷವಾಗಿ ತಿರುಗಿ, ಪೊಲೀಸರು ಲಾಠಿಚಾರ್ಜ್ ನಡೆಸಿದ ಘಟನೆ ನಡೆದಿದೆ. ಹನ್ನೊಂದೂವರೆ ತನಕ ಶಾಂತವಾಗಿದ್ದ ಉಡುಪಿ ಬಳಿಕ ಉಭಯ ಪಕ್ಷಗಳ ಬಲಪ್ರದರ್ಶನ ಮತ್ತು ಹೊಡೆದಾಟಕ್ಕೆ ಸಾಕ್ಷಿಯಾಯಿತು.
ಎರಡೂ ಪಕ್ಷಗಳ ಕಾರ್ಯಕರ್ತರ ಹೊಡೆದಾಟ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಪ್ರಯೋಗಿಸಬೇಕಾಯಿತು. ಕಾಂಗ್ರೆಸ್ ಮತ್ತು ಬಿಜೆಪಿಯ ನಾಲ್ವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ನಾಳೆ ಆರು ಗಂಟೆ ತನಕ ನಗರಸಭೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಭಾರತ್ ಬಂದ್ LIVE: ಬಿಹಾರದಲ್ಲಿ ಮಗು ಸಾವು: ರಾಹುಲ್ ಹೊಣೆ ಎಂದ ಬಿಜೆಪಿ
ಉಡುಪಿ ಎಸ್ಪಿ ಕಚೇರಿ ಹೊರ ಆವರಣದಲ್ಲಿ ಮುಖಾಮುಖಿಯಾದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬೀದಿಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಅಲ್ಲದೇ ಅನಾಗರಿಕ ಭಾಷೆಯಲ್ಲಿ ಬೈದಾಡಿಕೊಂಡ ಕಾರ್ಯಕರ್ತರು ಬಳಿಕ ಕಾಳಗಕ್ಕಿಳಿದಿದ್ದಾರೆ.
ಕಾಂಗ್ರೆಸ್ ನವರು ಯಾವುದೇ ಕಾರಣಕ್ಕೂ ಬಲವಂತದ ಬಂದ್ ನಡೆಸಕೂಡದು ಎಂದು ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದರು. ಈ ಸಂದರ್ಭ ಐವತ್ತಕ್ಕೂ ಮಿಕ್ಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ನಗರಾಧ್ಯಕ್ಷ ಪ್ರಭಾಕರ ಪೂಜಾರಿ ಮೇಲೆ ಹಲ್ಲೆ ನಡೆಸಿದ್ದಾರೆ.
ಇದರಿಂದಾಗಿ ಮುಖ ಹಾಗೂ ತಲೆಗೆ ಗಂಭೀರ ಗಾಯಗೊಂಡ ಅವರನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುವನ್ನು ಭೇಟಿ ಮಾಡಿದ ಶಾಸಕ ರಘುಪತಿ ಭಟ್ ಒತ್ತಾಯದ ಬಂದ್ ಮಾಡಿಸಿದ್ದೂ ಅಲ್ಲದೆ, ನಮ್ಮ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ನವರು ಹಲ್ಲೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತ ಬಂದ್ : ಉಡುಪಿಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಹೊಡೆದಾಟ
ಅಲ್ಲದೇ ಒಬ್ಬಂಟಿಗನಾಗಿ ಸಿಕ್ಕ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಮುಗಿಬಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಹರಸಾಹಸಪಟ್ಟು ರಕ್ಷಿಸಿದರು. ಈ ವೇಳೆ ಮತ್ತೆ ಗುಂಪುಗೂಡಿ ಬಂದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರು.
ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ಬೀದಿ ಜಗಳ ಅತಿಯಾಗುತ್ತಿದ್ದಂತೆ ಆಗಮಿಸಿದ ಎಸ್ಪಿ ಲಕ್ಷ್ಮಣ್ ಬಿ. ನಿಂಬರಗಿ ಸುಮಾರು 20 ನಿಮಿಷಕ್ಕೂ ಅಧಿಕ ಕಾಲ ನಡೆದ ಹೈಡ್ರಾಮಕ್ಕೆ ಲಾಠಿ ಚಾರ್ಜ್ ಮಾಡುವ ಮೂಲಕ ಬಿಸಿ ಮುಟ್ಟಿಸಿದರು. ಲಾಠಿರುಚಿ ಪಡೆದ ಉದ್ರಿಕ್ತ ಗುಂಪು ದಿಕ್ಕಾಪಾಲಾಗಿ ಓಡಿತು.
ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಮೂವರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಲಾಠಿರುಚಿಗೆ ಕಾಂಗ್ರೆಸ್ ನಗರಸಭೆ ಸದಸ್ಯ ರಮೇಶ್ ಕಾಂಚನ್ ಎಡ ಕೈಗೆ ತೀವ್ರ ರೀತಿಯ ಪೆಟ್ಟಾಗಿದೆ. ಎರಡೂ ತಂಡದಲ್ಲಿ ಅಂದಾಜು ಐವತ್ತು ಮಂದಿ ಇದ್ದಿದ್ದರಿಂದ ಹಲವರು ಪೊಲೀಸರ ಲಾಠಿ ರುಚಿ ಉಂಡರು.
ಮೈಸೂರಿನಲ್ಲಿ ಭಾರತ್ ಬಂದ್ ಗೆ ಮಿಶ್ರಪ್ರತಿಕ್ರಿಯೆ:ವಿವಿಧ ಸಂಘಟನೆಗಳಿಂದ ವಿಶಿಷ್ಟ ಶೈಲಿಯಲ್ಲಿ ಪ್ರತಿಭಟನೆ
ಇದೀಗ ನಿಧಾನವಾಗಿ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದು ,ಉಭಯ ಪಕ್ಷಗಳ ನಾಯಕರು ಆಸ್ಪತ್ರೆಗೆ ತೆರಳಿ ತಮ್ಮ ತಮ್ಮ ಕಾರ್ಯಕರ್ತರುಗಳ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ "ಪೊಲೀಸರು ಅನವಶ್ಯಕ ಲಾಠಿಚಾರ್ಜ್ ಮಾಡಿದ್ದಾರೆ. ನಮ್ಮ ಕಾರ್ಯಕರ್ತನ ಕೈ ತುಂಡಾಗಿದೆ.
ನಮ್ಮ ಕಾರ್ಯಕರ್ತರು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದಾಗ ಬಿಜೆಪಿಯವರು ಏಕಾಏಕಿ ಹೊಡೆದಾಟಕ್ಕೆ ಬಂದಿದ್ದಾರೆ. ಇದನ್ನು ಗೃಹ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇವೆ" ಎಂದು ಪ್ರತಿಕ್ರಿಯಿಸಿದ್ದಾರೆ.
ಉಳಿದಂತೆ ಬಿಜೆಪಿಯ ಭದ್ರಕೋಟೆ ಉಡುಪಿ ಜಿಲ್ಲೆಯಲ್ಲಿ ಬಂದ್ ಬಹುತೇಕ ಯಶಸ್ವಿಯಾಗಿತ್ತು.ಇದೀಗ ಮುನ್ನೆಚ್ಚರಿಕೆ ಕ್ರಮವಾಗಿ ನಗರಸಭೆ ವ್ಯಾಪ್ತಿಯಲ್ಲಿ ನಿಷೇಧಾಜ್ಞಾ ಜಾರಿಗೊಳಿಸಲಾಗಿದ್ದು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.