ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆಗೆ ಬಳಸಿದ್ದ ರಾಡ್ ಪತ್ತೆ
ಉಡುಪಿ, ಸೆಪ್ಟೆಂಬರ್ 22: ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನವನೀತ್ ಶೆಟ್ಟಿ ಹಾಗೂ ಜ್ಯೋತಿಷಿ ನಿರಂಜನ್ ನನ್ನು ಸಿಐಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಕೊಲೆಗೆ ಬಳಸಿದ್ದ ರಾಡ್ ಹಾಗೂ ಭಾಸ್ಕರ್ ಶೆಟ್ಟಿಯವರಿಗೆ ಸೇರಿದ ಮೊಬೈಲ್, ವಾಚ್ಗಳನ್ನು ಅಲೆವೂರು ಸೇತುವೆಗೆ ಎಸೆದ ಕುರಿತು ಬಾಯಿಬಿಟ್ಟಿದ್ದಾರೆ.
ಆರೋಪಿಗಳನ್ನು ಸೇತುವೆ ಬಳಿಗೆ ಕರೆದೊಯ್ದು, ತಜ್ಞರ ನೆರವಿನಿಂದ ಶೋಧ ನಡೆಸಲಾಗಿದೆ. ತಣ್ಣೀರುಬಾವಿಯ ಮುಳುಗು ತಜ್ಞರು ಶೋಧ ಕಾರ್ಯ ನಡೆಸಿದ್ದು, ಆರೋಪಿಗಳು ಕೊಲೆಗೆ ಬಳಸಿದ್ದಾರೆ ಎನ್ನಲಾದ ರಾಡ್ ಪತ್ತೆ ಹಚ್ಚಿ, ಮೇಲೆತ್ತಿದ್ದಾರೆ.[ಉಡುಪಿಯ ನವನೀತ್ ಶೆಟ್ಟಿ ಜಿಮ್ ನಲ್ಲಿ ಸಿಐಡಿ ಪರಿಶೀಲನೆ]
ಮುಳುಗು ತಜ್ಞರ ಸಹಾಯದಿಂದ ಪತ್ತೆ ಹಚ್ಚಿದ ರಾಡ್ ಅನ್ನು ಸಿಐಡಿ ಪೊಲೀಸರು ಮೊದಲಿಗೆ ನಿರಂಜನ್ ಭಟ್ ನನ್ನು ಕರೆತಂದು ತೋರಿಸಿದಾಗ ಆತ ಗುರುತಿಸಿದ್ದಾನೆ. ನಂತರ ನವನೀತ ಶೆಟ್ಟಿಯನ್ನು ಕರೆತಂದು ವಿಚಾರಣೆ ಮಾಡಿದ್ದಾರೆ. ಆದರೆ ತಾವು ಬಳಸಿದ್ದ ರಾಡ್ ಇಷ್ಟು ಭಾರವಿರಲಿಲ್ಲ ಎಂದು ನವನೀತ್ ಸಂಶಯ ವ್ಯಕ್ತಪಡಿಸಿದ್ದಾನೆ.
ಸಿಐಡಿ ತನಿಖೆ ವೇಳೆ ಪತ್ತೆ ಹಚ್ಚಿದ ರಾಡ್ ಸುಮಾರು ಒಂದೂವರೆ ಅಡಿಯಷ್ಟು ಉದ್ದವಾಗಿದ್ದು, ಒಳಗೆ ಟೊಳ್ಳಾದ ಸ್ಟೀಲ್ ಪೈಪ್ ಆಗಿತ್ತು. ಅದರ ಒಂದು ತುದಿ ಹೊಡೆತಕ್ಕೆ ನುಜ್ಜಾಗಿರುವುದು ಕಂಡು ಬಂದಿದೆ. ಅಲ್ಲದೆ ಆರೋಪಿಗಳು ವಾಚ್, ಮೊಬೈಲ್ ಗಳನ್ನು ಕಲ್ಕಾರು ಮತ್ತು ಎಪೇದೆಕ್ಯಾರುಗಳಲ್ಲಿ ಹೊಳೆಗೆ ಎಸೆದಿರುವುದಾಗಿ ತಿಳಿಸಿದ್ಡಾರೆ. ಅಲೆವೂರಿನಲ್ಲಿ ಶೋಧ ನಡೆಸಿದ ನಂತರ ಅಧಿಕಾರಿಗಳು ಆರೋಪಿಗಳನ್ನು ಕಲ್ಕಾರಿನತ್ತ ಕರೆದುಕೊಂಡು ಹೋಗಿದ್ದಾರೆ.[ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಕ್ಯಾಂಟೀನ್ ಊಟ, ಬಸ್ ಪ್ರಯಾಣ]
ಸಿಐಡಿ ಎಸ್ಪಿ ಐಡಾ ಮಾರ್ಟಿನ್, ಡಿವೈಎಸ್ಪಿ ಚಂದ್ರಶೇಖರ್ ಸಹಿತ ಸಿಐಡಿ ಸಿಬ್ಬಂದಿ ವಿಚಾರಣೆಯಲ್ಲಿ ಭಾಗವಹಿಸಿದ್ದರು.