ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮಹಿಳೆಗೆ ಹೆರಿಗೆ ನಿರಾಕರಣೆ
ಉಡುಪಿ, ಜೂನ್ 6: ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಪ್ರಕರಣ ಜನ ಮಾನಸದಿಂದ ಮಾಸುವ ಮುನ್ನವೇ ಗರ್ಭಿಣಿಯೋರ್ವರಿಗೆ ಮಧ್ಯರಾತ್ರಿ ಹೆರಿಗೆ ನಿರಾಕರಿಸಿದ ಮನಕಲಕುವ ಘಟನೆ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಶನಿವಾರ ಮಧ್ಯರಾತ್ರಿ ತಾಲೂಕಿನ ಕೋಡಿಯ ಹಳೆ ಅಳಿವೆ ನಿವಾಸಿ ಆಶಾ(29) ಪ್ರಸವ ವೇದನೆಯಿಂದ ಆಸ್ಪತ್ರೆಗೆ ಬಂದಾಗ ಸಿಬ್ಬಂದಿಗಳು ಹೆರಿಗೆಗೆ ನಿರಾಕರಿಸಿ ವಾಪಸು ಕಳುಹಿಸಿದ್ದಾರೆ. ಮಧ್ಯರಾತ್ರಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯ ತಾಯಿ ಬಾಬಿ ಹಾಗೂ ಚಿಕ್ಕಮ್ಮ ಅಮಿತಾ ರಿಕ್ಷಾದಲ್ಲಿ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಬಂದಿದ್ದರು. ಬರುತ್ತಿದ್ದಂತೆ ಚಿಕಿತ್ಸೆಗೆ ಒಳಗೆ ಕರೆದುಕೊಂಡು ಹೋದ ಆಸ್ಪತ್ರೆಯ ನರ್ಸ್ಗಳು ಕೆಲವೇ ನಿಮಿಷಗಳಲ್ಲಿ ಗರ್ಭಿಣಿಯನ್ನು ಹೊರಗೆ ಕರೆದುಕೊಂಡು ಬಂದು ವೈದ್ಯರು ರಜೆಯಲ್ಲಿದ್ದಾರೆ. ಇವರನ್ನು ಉಡುಪಿಯ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಎಂದು ಹೇಳಿ ಸಾಗಹಾಕಿದ್ದಾರೆ.

ಆಶಾ ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದುದನ್ನು ಕಂಡ ಆಕೆಯ ಚಿಕ್ಕಮ್ಮ ಅಮಿತಾ, ಆಸ್ಪತ್ರೆಯ ಸಿಬ್ಬಂದಿಗಳಲ್ಲಿ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಬಳಿಕ ವೈದ್ಯ ಚಂದ್ರ ಅವರ ಮೊಬೈಲ್ ನಂಬರ್ ಪಡೆದು ಕರೆ ಮಾಡಿದಾಗ ತಾನು ರಜೆಯಲ್ಲಿದ್ದೇನೆ. ಉಡುಪಿಗೆ ಕರೆದುಕೊಂಡು ಹೋಗುವುದಾದರೆ ಹೋಗಿ ನಿಮ್ಮಿಷ್ಟ ಎಂದು ಅವರು ತಿಳಿಸಿದ್ದರು ಎಂದು ಆಶಾಳ ಚಿಕ್ಕಮ್ಮ ಅಮಿತಾ 'ಕರಾವಳಿ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.
108ಕ್ಕೆ ಕರೆ ಮಾಡಿದರೆ ಸ್ಪಂದನೆಯಿಲ್ಲ
ತಾಯಿ ಮಗುವನ್ನು ಉಳಿಸಿಕೊಳ್ಳಲು ಮಧ್ಯರಾತ್ರಿ ಆಶಾಳ ತಾಯಿ ಹಾಗೂ ಚಿಕ್ಕಮ್ಮ ಪಟ್ಟ ಶ್ರಮ ಹೇಳತೀರದು. ತಡಮಾಡದೇ ಕೂಡಲೇ 108 ಆಂಬುಲೆನ್ಸ್ಗೆ ಮೂರು ಬಾರಿ ಕರೆ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ ಎನ್ನಲಾಗಿದೆ.
ಆಸ್ಪತ್ರೆಯ ಆಂಬುಲೆನ್ಸ್ ಹಾಗೂ ಗರ್ಭಿಣಿಯರಿಗಾಗಿಯೆ ಇರುವ ನಗು-ಮಗು ಯೋಜನೆಯ ಆಂಬುಲೆನ್ಸ್ ಆಸ್ಪತ್ರೆಯ ಆವರಣದಲ್ಲಿದ್ದರೂ ಕೂಡ ಅದರ ಸದುಪಯೋಗ ಪಡೆದುಕೊಳ್ಳಲು ಆಸ್ಪತ್ರೆಯ ಸಿಬ್ಬಂದಿಗಳು ಮನೆಯವರಿಗೆ ತಿಳಿಸಿಲ್ಲ.
ಇನ್ನು ಶನಿವಾರ ರಾತ್ರಿ ನಡೆದ ಪ್ರಕರಣದ ಬಗ್ಗೆ ಆಶಾ ಮನೆಯವರು ಕುಂದಾಪುರ ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದಾರೆ. ಅದರಂತೆ ಕೇಂದ್ರವು ಆಶಾಳಿಗೆ ಆಗಿರುವ ಅನ್ಯಾಯದ ವಿರುದ್ದ ಸಂಬಂಧಪಟ್ಟ ಇಲಾಖೆಗೆ ಲಿಖಿತವಾದ ದೂರನ್ನು ಸಲ್ಲಿಸಿದೆ. 'ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಇದೀಗ ಮಹಿಳಾ ಸಾಂತ್ವಾನ ಕೇಂದ್ರದಿಂದ ದೂರು ಬಂದಿದ್ದು, ಆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಲಾಗುವುದು,' ಎಂದು ಉಡುಪಿ ಆಸ್ಪತ್ರೆಯ ವೈದ್ಯಾಧಿಕಾರಿ ಉದಯ್ ಶಂಕರ್ ತಿಳಿಸಿದ್ದಾರೆ.












Click it and Unblock the Notifications