ಕೋವಿಡ್ ನಾಗಾಲೋಟ; ಉಡುಪಿಯಲ್ಲಿ ಕಡಿಮೆಯಾಗಿಲ್ಲ ಜನರ ಓಡಾಟ!
ಉಡುಪಿ, ಮೇ 07; ಕೃಷ್ಣನಗರಿಯಲ್ಲಿ ಕೋವಿಡ್ ನಿಯಂತ್ರಣ ತಪ್ಪುತ್ತಿದೆ. ಪ್ರತಿದಿನ 1500 ಹೆಚ್ಚು ಹೊಸ ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ. ಇಷ್ಟಾದರೂ ಜನರು ಸರ್ಕಾರ ಕೊಟ್ಟಿರುವ ವಿನಾಯಿತಿಯನ್ನು ದುರ್ಬಳಕೆ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಉಡುಪಿಯ ಪ್ರತಿ ಜಂಕ್ಷನ್ನಲ್ಲಿ 30ಕ್ಕಿಂತ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸೂಕ್ತ ಕಾರಣ ಇಲ್ಲದೆ ಓಡಾಡುವವರಿಗೆ ಸಂಚಾರಿ ಪೊಲೀಸರು, ನಗರ ಠಾಣೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ.
ಮಣಿಪಾಲ-ಉಡುಪಿ ಮುಖ್ಯ ರಸ್ತೆಯಲ್ಲಿ ಉಳಿದ ಏರಿಯಾಗಳಿಗಿಂತ ಹೆಚ್ಚಿನ ಜನರ ಓಡಾಟ ಕಂಡುಬರುತ್ತಿದೆ. ಉಡುಪಿ ನಗರ ಮತ್ತು ಮಣಿಪಾಲದಲ್ಲಿ ಆಸ್ಪತ್ರೆಗಳು ಹೆಚ್ಚು ಇರುವ ಕಾರಣ ರೋಗಿಗಳ ಕಡೆಯವರು ವೈದ್ಯಕೀಯ ವ್ಯವಸ್ಥೆಗಾಗಿ ಹೆಚ್ಚಾಗಿ ಕಂಡು ಬರುತ್ತಿದ್ದಾರೆ. ಪೊಲೀಸರು ದಂಡ ವಿಧಿಸುವ ಜೊತೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

ಬೇಕಾಬಿಟ್ಟಿಯಾಗಿ ಓಡಾಡದಂತೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಜಿಲ್ಲೆಯ ಸದ್ಯದ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿ ಎಚ್ಚರಿಸುತ್ತಿದ್ದಾರೆ. ನಿಗದಿತ ಕಾರಣ ಕೊಡದವರ ವಿರುದ್ಧ ಪೊಲೀಸರು ದಂಡ ಪ್ರಯೋಗ ಮಾಡುತ್ತಿದ್ದಾರೆ.
ಕಾರ್ಯಕ್ರಮಗಳಿಗೆ ಓಡಾಡುವವರಿಗೆ ಚೆಕ್ ಪೋಸ್ಟ್ನಲ್ಲಿ ಪೊಲೀಸರು ಅವಕಾಶ ಕೊಡುತ್ತಿದ್ದಾರೆ. ದಿನಸಿ ಅಂಗಡಿಗಳಿಗೆ 12 ಗಂಟೆಯ ತನಕ ಅವಕಾಶ ಕೊಟ್ಟ ಕಾರಣ ನಗರ ಭಾಗದಲ್ಲಿ ಕೊಂಚ ಓಡಾಟ ಹೆಚ್ಚು ಇದೆ. 10 ಗಂಟೆ ತನಕ ಸಮಯವಕಾಶ ಕೊಟ್ಟರೆ ಸಾಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಗುರುವಾರದ ಮಾಹಿತಿಯಂತೆ ಉಡುಪಿಯಲ್ಲಿ 1,526 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 36,891. ಸಕ್ರಿಯ ಪ್ರಕರಣಗಳ ಸಂಖ್ಯೆ 5063.












Click it and Unblock the Notifications