ಉಡುಪಿ; ಟೆಸ್ಟ್ ರೈಡ್ ಗೆಂದು ತೆಗೆದುಕೊಂಡ ಬೈಕ್ ಜೊತೆ ಎಸ್ಕೇಪ್
ಉಡುಪಿ, ನವೆಂಬರ್ 03: ಹಳೆಯ ಬೈಕ್ ಖರೀದಿಸುವ ನೆಪದಲ್ಲಿ ಬಂದ ವ್ಯಕ್ತಿಯೊಬ್ಬ ಟೆಸ್ಟ್ ರೈಡ್ ಮಾಡಿಕೊಂಡು ಬರುತ್ತೇನೆಂದು ಹೇಳಿ ಬೈಕ್ ಕದ್ದು ಪರಾರಿಯಾಗಿರುವ ಘಟನೆ ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿ ನ್ಯೂ ಮಣಿಪಾಲ್ ಬಜಾರ್ ನಲ್ಲಿ ನಡೆದಿದೆ.
ಹೆರ್ಗದ ತ್ರಿಶಂಕು ನಗರ ನಿವಾಸಿ ಪ್ರಶಾಂತ್ ಕುಮಾರ್ ಎಂಬುವರು ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿ ನ್ಯೂ ಮಣಿಪಾಲ್ ಬಜಾರ್ ಎಂಬ ಸೆಕೆಂಡ್ ಹ್ಯಾಂಡ್ ಬೈಕ್ ಮಳಿಗೆ ಇಟ್ಟುಕೊಂಡಿದ್ದಾರೆ.
ದ್ವಿಚಕ್ರ ವಾಹನದ ಮಾರಾಟ ಮತ್ತು ಖರೀದಿ ವ್ಯವಹಾರ ಮಾಡಿಕೊಂಡಿದ್ದ ಇವರ ಶಾಪ್ ಗೆ ಅ.31ರ ಶನಿವಾರ ಮಧ್ಯಾಹ್ನ ಗಣೇಶ್ ಉದ್ಯಾವರ ಎಂದು ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬ ಬಂದಿದ್ದಾನೆ.

ಹಳೆಯ ಬೈಕ್ ಕೊಳ್ಳಬೇಕಿದೆ ಎಂದು ಹೇಳಿ, ಮಾರಾಟ ಮಾಡಲು ಇಟ್ಟಿದ್ದ ಟಿವಿಎಸ್ ವಿಕ್ಟರ್ ಬೈಕ್ ನೋಡಿ, ಟೆಸ್ಟ್ ರೈಡ್ ಮಾಡಿಕೊಂಡು ಬರುತ್ತೇನೆಂದು ಕೀ ತೆಗೆದುಕೊಂಡು ಬೈಕ್ ರೈಡ್ ಗೆ ಹೋಗಿದ್ದಾನೆ. ಆದರೆ ಹಾಗೆ ಹೋದವ ಎಷ್ಟು ಹೊತ್ತಾದರೂ ಮರಳಲೇ ಇಲ್ಲ. ವಾಪಸ್ ಬರದೇ ಬೈಕ್ ಸಮೇತ ಪರಾರಿಯಾಗಿದ್ದಾನೆ. ಬೈಕ್ ಕಳೆದುಕೊಂಡ ಮಾಲೀಕ ಪ್ರಶಾಂತ್ ಕುಮಾರ್ ನಂತರ ದೂರು ನೀಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications