ಸ್ವಿಮ್ಮಿಂಗ್ ಪೂಲ್ ಆದ ರಸ್ತೆ: ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಾರು ತಡೆದು ಜನರಿಂದ ಕ್ಲಾಸ್!
ಉಡುಪಿ, ಆಗಸ್ಟ್ 08: ಕಳೆದ ಬಹಳಷ್ಟು ವರ್ಷಗಳಿಂದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆ ಬಂದರೆ ಈಜುಕೊಳದಂತಾಗುವ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಜನರ ಸಹನೆ ಇಂದು ಕಟ್ಟೆ ಒಡೆದಿತ್ತು. ಅದೇ ರಸ್ತೆಯಲ್ಲಿ ಬರುತ್ತಿದ್ದ ಮೀನುಗಾರಿಕೆ, ಬಂದರು ಮತ್ತು ಮುಜರಾಯಿ ಸಚಿವರನ್ನು ತಡೆದ ಸ್ಥಳೀಯರು ಚೆನ್ನಾಗಿ ಕ್ಲಾಸ್ ತೆಗೆದುಕೊಂಡ ಪ್ರಸಂಗ ನಡೆಯಿತು.
Recommended Video
ಪ್ರತೀ ಮಳೆಗೂ ಕುಂದಾಪುರದ ಬಸ್ರೂರು ಮೂರುಕೈ ಜಂಕ್ಷನ್ ಬಳಿ ರಸ್ತೆಯಲ್ಲಿ ನೀರು ನಿಂತು ಟ್ರಾಫಿಕ್ ಜಾಮ್ ಆಗುವುದು ಸಾಮಾನ್ಯ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹೆದ್ದಾರಿ ಅಕ್ಷರಶಃ ಈಜುಕೊಳವಾಗಿ ಪರಿವರ್ತನೆ ಆಗಿದೆ. ಇಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ಇದೇ ರಸ್ತೆಯಾಗಿ ಬರುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು, ಆಟೋ ಚಾಲಕರು ಮತ್ತು ಹೆದ್ದಾರಿ ಹೋರಾಟ ಸಮಿತಿಯವರು ಸಚಿವರ ಕಾರು ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ತಬ್ಬಿಬ್ಬಾದ ಸಚಿವರು ಕಾರಿನಿಂದ ಕೆಳಗಿಳಿದು ಕೆಲಕಾಲ ಜನರ ಸಮಸ್ಯೆಯನ್ನು ಆಲಿಸಿದರು.

ಕುಂದಾಪುರದಲ್ಲಿ ಕಾರ್ಯಕ್ರಮ ಮುಗಿಸಿ ಉಡುಪಿ ಕಡೆಗೆ ತೆರಳುತ್ತಿದ್ದ ಸಚಿವರು, ಯಾಕಾದರೂ ಈ ರಸ್ತೆಯಲ್ಲಿ ಬಂದೆನೋ ಎಂದು ಪೇಚಾಡುವಂತಾಯಿತು. ಜನರ ಆಕ್ರೋಶ ಕಂಡು ತಕ್ಷಣ ಜಿಲ್ಲಾಧಿಕಾರಿಗೆ ಕರೆ ಮಾಡಿ ಮಾತನಾಡಿದರು. ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಡಿಸಿಗೆ ಸೂಚನೆ ನೀಡಿ ಜನರನ್ನು ಸಮಾಧಾನಿಸಿ ಕಾರು ಹತ್ತಿದರು.












Click it and Unblock the Notifications