ಕ್ಯಾನ್ಸರ್ ಗುಣಪಡಿಸುವ ಹಾಲೆ ತೊಗಟಿಯ ಕಷಾಯಕ್ಕೆ ಭಾರೀ ಬೇಡಿಕೆ
Recommended Video

ಉಡುಪಿ, ಆಗಸ್ಟ್ 11 : ಉಡುಪಿಯೆಲ್ಲೆಡೆ ಶನಿವಾರ ಆಟಿ ಅಮವಾಸ್ಯೆಯ ಸಡಗರ... ಆಷಾಢ ಮಾಸದ ಅಮವಾಸ್ಯೆಯಾದ ಇಂದು ಹಾಲೆ ಮರಕ್ಕೆ ಎಲ್ಲಿಲ್ಲದ ಡಿಮ್ಯಾಂಡ್; ಹೌದು...ರೋಗ ನಿರೋಧಕ ಶಕ್ತಿ ಕೊಡುವ ಹಾಲೆ ಮರದ ತೊಗಟೆಯ ಕಷಾಯವನ್ನು ಈ ದಿನ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ ಕರಾವಳಿಯಲ್ಲಿದೆ.
ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ಶ್ರದ್ದಾಳುಗಳು ಹಾಲೆ ಮರದ ಬಳಿ ಜಮಾಯಿಸಿದ ದೃಶ್ಯ ಕಂಡುಬಂತು. ಆಯುರ್ವೇದದಲ್ಲಿ ಸಪ್ತಪರ್ಣ ಎಂದು ಕರೆಸಿಕೊಳ್ಳುವ ಹಾಲೆ ಮರ, ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಹೀಗಾಗಿ ಆಟಿ ಅಮವಾಸ್ಯೆ ದಿನ ಈ ಮರದ ತೊಗಟೆಯ ಕಷಾಯ ಸೇವಿಸುವುದು ಕರಾವಳಿಯಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿದೆ.
ಮಳೆಯನ್ನೂ ಲೆಕ್ಕಿಸದ ಕರಾವಳಿಯ ಮಂದಿ ಹಾಲೆ ಮರದ ತೊಗಟೆ ಸೀಳಿ ಅದರಿಂದ ಕಷಾಯ ಮಾಡಿ ತಾವೂ ಕುಡಿಯುವುದರಿಂದಿಗೆ ನೆರೆಹೊರೆಯವರಿಗೂ ನೀಡುತ್ತಾರೆ. ತೊಗಟೆಯನ್ನು ನೀರು ಮಿಶ್ರ ಮಾಡಿ ಜಜ್ಜಿ ಅದರಿಂದ ರಸ ತೆಗೆಯಲಾಗುತ್ತದೆ. ಕೆಲವರು ಈ ರಸವನ್ನು ಹೀಗೇ ಕುಡಿದರೆ ಇನ್ನೂ ಕೆಲವರು ಹಾಲೆ ರಸಕ್ಕೆ ಜೀರಿಗೆ, ಬೆಳ್ಳುಳ್ಳಿ, ಅರಿಶಿನ ಮಿಶ್ರ ಮಾಡಿ ಕುಡಿಯುತ್ತಾರೆ.

ಹಾಲೆ ರಸಕ್ಕೆ ವ್ಯಾಧಿಕ್ಷಮತ್ವ ಹೆಚ್ಚಿಸುವ ಗುಣ, ವೈರಾಣು ನಿರೋಧಕ, ಕ್ಯಾನ್ಸರ್ ಗಡ್ಡೆ ಗಾತ್ರ ಕಡಿಮೆ ಮಾಡುವ ಗುಣ, ಅತಿಸಾರ ನಿರೋಧಕ, ಜ್ವರತಾಪ ಕಡಿಮೆ ಮಾಡುವ ಗುಣ ಸಹಿತ ಅನೇಕ ಪ್ರಯೋಜನಗಳಿವೆ ಎಂಬುದು ವೈಜ್ಞಾನಿಕವಾಗಿಯೂ ಧೃಡಪಟ್ಟಿದೆ.
ಆಷಾಢ-ಶ್ರಾವಣ ಮಾಸಪೂರ್ತಿ ಹಾಲೆ ಮರದಲ್ಲಿ ಗರಿಷ್ಠ ಗುಣಕಾರತ್ವವಿದೆ ಎಂಬ ಕಾರಣಕ್ಕೆ ಅಮವಾಸ್ಯೆಯಂದು ಇದರ ಕಷಾಯ ಸೇವಿಸುವ ಪದ್ಧತಿ ಉಡುಪಿ ಜಿಲ್ಲೆ ಸಹಿತ ಕರಾವಳಿಯಲ್ಲಿ ಚಾಲ್ತಿಯಲ್ಲಿದೆ.
ಉಡುಪಿ ತುಳುಕೂಟದ ವತಿಯಿಂದ ಆಟಿ ಅಮವಾಸ್ಯೆ ಅಂಗವಾಗಿ ಆಟಿ ಕಷಾಯ ವಿತರಣೆ ಕಾರ್ಯಕ್ರಮ ಉಡುಪಿಯಲ್ಲಿ ನಡೆಯಿತು. ತುಳುಕೂಟದೊಂದಿಗೆ ಎಸ್ ಡಿಎಂ ಆಯುರ್ವೇದ ಸಂಸ್ಥೆ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ನೂರಾರು ಜನರು ಔಷಧೀಯ ಗುಣವುಳ್ಳ ಆಟಿ ಕಷಾಯವನ್ನು ಸೇವಿಸಿ ಮೆಂತೆ ಗಂಜಿಯನ್ನು ಸವಿದರು.












Click it and Unblock the Notifications