ಪೇಜಾವರ ಶ್ರೀ-ಕಂಚಿ ಶ್ರೀಗಳ ಭೇಟಿ: ರಾಮಮಂದಿರ ನಿರ್ಮಾಣಕ್ಕೆ ಸಹಕಾರ ಕೋರಿಕೆ
ಉಡುಪಿ, ಡಿಸೆಂಬರ್ 10: ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಡಿ.೯ರ ಬುಧವಾರ ರಾತ್ರಿ ಕಂಚಿ ಕ್ಷೇತ್ರಕ್ಕೆ ಭೇಟಿ ನೀಡಿ ಕಂಚಿ ಶ್ರೀ ವಿಜಯೇಂದ್ರ ಸರಸ್ವತೀ ಸ್ವಾಮೀಜಿಯವರನ್ನು ಭೇಟಿ ಮಾಡಿದರು.
ಶ್ರೀಗಳವರನ್ನು ಸಾಂಪ್ರದಾಯಿಕ ಗೌರವಗಳ ಸಹಿತ ಆತ್ಮೀಯವಾಗಿ ಸ್ವಾಗತ ಮಾಡಿಕೊಳ್ಳಲಾಯಿತು. ಶ್ರೀಗಳ ಭೇಟಿಗೆ ಅತೀವ ಸಂತಸ ವ್ಯಕ್ತಪಡಿಸಿ, ಉಭಯ ಮಠಗಳೊಂದಿಗೆ ಮತ್ತು ವಿಶೇಷವಾಗಿ ಎರಡೂ ಮಠಗಳ ಹಿಂದಿನ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಶ್ರೀ ಜಯೇಂದ್ರ ಸರಸ್ವತೀ ಸ್ವಾಮೀಜಿಯವರ ಬಾಂಧವ್ಯವನ್ನು ಸ್ಮರಿಸಿಕೊಂಡರು.
ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಬಗ್ಗೆ ಉಭಯ ಶ್ರೀಗಳು ಸಮಾಲೋಚನೆ ನಡೆಸಿ, ಮುಂದೆ ನಡೆಯಲಿರುವ ಧನ ಸಂಗ್ರಹ ಅಭಿಯಾನ ಮತ್ತು ಇತರ ಕಾರ್ಯಗಳಲ್ಲಿ ವಿಶೇಷ ಸಹಕಾರ ಕೊಡಬೇಕೆಂದು ಪೇಜಾವರ ಶ್ರೀಗಳು ವಿಶೇಷ ಮನವಿ ಮಾಡಿಕೊಂಡರು.

ಕಂಚಿ ಮಠದ ಪರವಾಗಿ ಪೇಜಾವರ ಶ್ರೀಗಳನ್ನು ಸನ್ಮಾನಿಸಿ ಅಭಿನಂದಿಸಿದರು. ಪೇಜಾವರ ಶ್ರೀಗಳು ಕಂಚಿ ಶ್ರೀಗಳಿಗೆ ಶಾಲು, ಫಲ-ಪುಷ್ಪ ಅರ್ಪಿಸಿ ಗೌರವಿಸಿದರು.
ಇದಕ್ಕೂ ಮೊದಲು ಪೇಜಾವರ ಶ್ರೀಗಳು ಶಿಷ್ಯರ ಸಹಿತ ವರದರಾಜಸ್ವಾಮಿ, ಕಾಮಾಕ್ಷಿ ದೇವಿಯ ದರ್ಶನ ಪಡೆದು ಲೋಕದ ಒಳಿತಿಗೆ ಮತ್ತು ರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನತಾ ಸಿದ್ಧಿಗಾಗಿ ಪ್ರಾರ್ಥಿಸಿದರು.
ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆ ಬಳಿ 3 ಹಾಗೂ 4 BHK ಐಷಾರಾಮಿ ಅಪಾರ್ಟ್ಮೆಂಟ್. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ












Click it and Unblock the Notifications