ಜೀವದಲ್ಲಿ ಶ್ವಾಸ ಇರುವ ತನಕ ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ; ಹಾಲಾಡಿ ಶ್ರೀನಿವಾಸ ಶೆಟ್ಟಿ
ಉಡುಪಿ, ಜುಲೈ 29: ಸಚಿವ ಸ್ಥಾನಕ್ಕಾಗಿ ಶಾಸಕರೆಲ್ಲರೂ ರಾಜ್ಯ ರಾಜಧಾನಿಯಲ್ಲಿ ಲಾಬಿ ಮಾಡುತ್ತಿದ್ದು, ಪಕ್ಷದ ವರಿಷ್ಠರ ಮನೆ ಮನೆ ಸುತ್ತುತ್ತಿದ್ದಾರೆ. ಆದರೆ ಇವರ ನಡುವೆ ಸತತ 5 ಬಾರಿ ಶಾಸಕನಾಗಿ ಆಯ್ಕೆಯಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತ್ರ, "ನಾನು ಸಚಿವ ಸ್ಥಾನವನ್ನು ಯಾರ ಬಳಿಯೂ ಕೇಳಲು ಹೋಗುವುದಿಲ್ಲ. ನನ್ನ ಶ್ವಾಸ ಇರುವ ತನಕ ಬೆಂಗಳೂರಿಗೆ ಸಚಿವ ಸ್ಥಾನ ಕೇಳಲು ಹೋಗುವುದಿಲ್ಲ,'' ಎಂದು ಹೇಳಿ ಮಾದರಿಯಾಗಿದ್ದಾರೆ.
ನೇರ ನಡೆ- ನುಡಿ, ಸರಳ ಸಜ್ಜನಿಕೆಯ ಮೂಲಕವೇ ಆದರ್ಶರಾಗಿರುವ ಉಡುಪಿ ಜಿಲ್ಲೆಯ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಈ ಬಾರಿಯಾದರೂ ಸಚಿವ ಸ್ಥಾನ ಸಿಗಬಹುದಾ ಅನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಆದರೆ ಶ್ರೀನಿವಾಸ ಶೆಟ್ಟಿ ಮಾತ್ರ ನಾನು ಯಾವುದೇ ಕಾರಣಕ್ಕೂ ಲಾಬಿ ಮಾಡುವುದಿಲ್ಲ ಅಂತಾ ಹೇಳಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ, "ನಾನು ಯಾರ ಕಾಲಿಗೂ ಬೀಳುವುದಿಲ್ಲ, ಯಾವ ನಾಯಕನ ಹಿಂದೆ ತಿರುಗಾಡಲು ಹೋಗುವುದಿಲ್ಲ. ನಾನು ರಾಜಕೀಯದಲ್ಲಿ ಸಮತೋಲನ ಕಳೆದುಕೊಳ್ಳುವುದಿಲ್ಲ, ನಾನು ರಾಜಕೀಯದಲ್ಲಿ ಸ್ವಾಭಿಮಾನ ಬಿಟ್ಟಿಲ್ಲ,'' ಅಂತಾ ಹೇಳಿದ್ದಾರೆ.

"ಈ ಹಿಂದೆ ನನ್ನನ್ನು ಕರೆದು ತಪ್ಪು ಮಾಡಿದ್ದರು. ಆಗಲೂ ನಾನು ಸಚಿವ ಸ್ಥಾನ ಕೇಳಿರಲಿಲ್ಲ. ರಾಜಕೀಯ ಲಾಬಿ, ಜಾತಿವಾದಿತನ ನಾನು ಮಾಡುವುದಿಲ್ಲ. ಯಾರ ಕಾಲಿಗೆ ಬಿದ್ದು ನಾನು ಕೆಲಸ ತೆಗೆದುಕೊಳ್ಳುವುದಿಲ್ಲ. ಕೆಲಸ ಕೊಟ್ಟರೆ ನಾನು ಅದನ್ನು ನಿಭಾಯಿಸುತ್ತೇನೆ. ನಾನು ಮಂತ್ರಿಯಾದರೆ ಸರಕಾರಿ ಕಾರು ತೆಗೆದುಕೊಳ್ಳುವುದಿಲ್ಲ, ನಾನು ಗನ್ಮ್ಯಾನ್ ಸಹ ತೆಗೆದುಕೊಳ್ಳುವುದಿಲ್ಲ,'' ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.
ಅಲ್ಲದೇ ನನಗೆ ಈವರೆಗೆ ಯಾವುದೇ ಕರೆಗ ಬಂದಿಲ್ಲ, ಕರೆ ಬಂದರೆ ನಾನು ಇದನ್ನು ಹೇಳಲು ಸಿದ್ಧನಿದ್ದೇನೆ. ನಾನು ಹೆಡ್ಡ ರಾಜಕಾರಣಿ ಅಲ್ಲ. ನನ್ನದು ನೇರನುಡಿಯ ರಾಜಕಾರಣ. ದುರಹಂಕಾರ ಅಲ್ಲ, ನಾನು ಯಾರ ಭಯದಲ್ಲೂ ಇಲ್ಲ. ಮತದಾರರ ಮತ್ತು ಕಾರ್ಯಕರ್ತರ ಋಣದಲ್ಲಿ ಮಾತ್ರ ನಾನಿರುವುದು. ಕೇಳಿ ಸಚಿವ ಸ್ಥಾನವನ್ನು ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲ. ಕೇಳಿ ಅಧಿಕಾರವನ್ನು ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಲ್ಲ," ಎಂದು ಹೇಳಿದ್ದಾರೆ.

ನಾನು ಜಾತ್ಯಾತೀತ ರಾಜಕಾರಣಿ
"ನನ್ನ ಹುಟ್ಟಿನಿಂದ ನಾನು ಜಾತಿ ಸಂಘಕ್ಕೆ ಹೋಗಿಲ್ಲ, ಪ್ರಬಲ ಜಾತಿಯಲ್ಲಿ ಹುಟ್ಟಿದ್ದು ಆಕಸ್ಮಿಕ. ಎಲ್ಲಾ ಜಾತಿಯವರು ಮತ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ಒಂದು ಜಾತಿಯ ಉದ್ದಾರಕ್ಕಾಗಿ ಜನ ನನ್ನನ್ನು ಗೆಲ್ಲಿಸಿದ್ದಲ್ಲ. ಜಾತಿವಾದಿಗಳು ಜಾತಿಯ ಸಂಘಕ್ಕೆ ಸಚಿವರಾಗಬೇಕು. ಜಾತಿವಾದಿಗಳು ಯಾವುದೇ ಕಾರಣಕ್ಕೂ ಶಾಸಕರಾಗಬಾರದು. ಜಾತಿವಾದಿಗಳು ಸಾರ್ವತ್ರಿಕ ಚುನಾವಣೆಗೆ ಬರಬಾರದು. ನನ್ನಲ್ಲಿ ಯಾವುದೇ ನಾಟಕೀಯ ಮಾತುಗಳು ಇಲ್ಲ. ಉಪಯೋಗಕ್ಕೆ ಇಲ್ಲದ್ದನ್ನು ಕೊಟ್ಟರೆ ಕಿಸೆಗೆ ಹಾಕಿಕೊಳ್ಳುವುದಕ್ಕೆ ಬರುವುದಿಲ್ಲ. ಶಾಸಕರು ಹೆರಿಗೆ ಕೋಣೆಯ ದಾದಿಯ ರೀತಿಯಲ್ಲಿ ಕೆಲಸ ಮಾಡಬೇಕು,'' ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ತೀಕ್ಷ್ಣವಾಗಿ ಮಾತನಾಡಿದ್ದಾರೆ.












Click it and Unblock the Notifications