ಮಡೆ, ಎಡೆಸ್ನಾನಕ್ಕೆ ತಿಲಾಂಜಲಿ ಹಾಡಿದ ಪಲಿಮಾರು ಶ್ರೀ
ಉಡುಪಿ, ಡಿಸೆಂಬರ್ 14: ಷಷ್ಠಿ ಆಚರಣೆ ಸಂದರ್ಭದಲ್ಲಿ ನಡೆಯತ್ತಿದ್ದ ಎಡೆಸ್ನಾನಕ್ಕೂ ತಿಲಾಂಜಲಿ ಹಾಡಿ ಪರ್ಯಾಯ ಪಿಠಾಧೀಶ ಪಲಿಮಾರುಶ್ರೀ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದಾರೆ.
ಉಡುಪಿ ಕೃಷ್ಣಮಠದಲ್ಲಿ ಷಷ್ಠಿ ಆಚರಣೆ ಸಂದರ್ಭದಲ್ಲಿ ನಡೆಯುತ್ತಿದ್ದ ಎಡೆಸ್ನಾನ, ಮಡೆಸ್ನಾನ ಎರಡಕ್ಕೂ ವಿದಾಯ ಹೇಳಲಾಗಿದೆ.
ಈ ಬಗ್ಗೆ ಪರ್ಯಾಯ ಪಲಿಮಾರು ಮಠಾಧೀಶರ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಶ್ರೀ ಸುಬ್ರಹ್ಮಣ್ಯ ಗುಡಿಯ ಆವರಣದಲ್ಲಿ ಷಷ್ಠಿ ಆಚರಣೆ ಸಂದರ್ಭದಲ್ಲಿ ಕೆಲ ವರ್ಷಗಳ ಹಿಂದೆ ಮಡೆಸ್ನಾನ ನಡೆಯುತ್ತಿತ್ತು. ಆದರೆ ಇದು ಭಾರೀ ವಿವಾದಕ್ಕೆ ಕಾರಣವಾದ ನಂತರ ಪೇಜಾವರ ಶ್ರೀಗಳ ಸಲಹೆಯಂತೆ ಎಡೆಸ್ನಾನ ನಡೆಸಲು ತೀರ್ಮಾನಿಸಲಾಯಿತು.
ಗುರುವಾರ (ಡಿಸೆಂಬರ್ 13) ನಡೆದ ಷಷ್ಠಿ ಆಚರಣೆ ಸಂದರ್ಭದಲ್ಲಿ ಆಸಕ್ತ ಭಕ್ತರಿಂದ ಈ ಬಾರಿ ಕೇವಲ ಉರುಳು ಸೇವೆ ನಡೆಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ , ಪೇಜಾವರ ಶ್ರೀಗಳ ಸಲಹೆಯಂತೆ ಎಡೆಸ್ನಾನ ನಡೆಯುತ್ತಿತ್ತು. ಆದರೆ ಈ ಬಗ್ಗೆ ಅನಗತ್ಯ ವಿವಾದ ಬೇಡವೆಂದು ಈ ನಿರ್ಧಾರಕ್ಕೆ ಬಂದಿದ್ದೇವೆ.

ಎಡೆಸ್ನಾನ ದಿಂದಲೂ ಕೆಲವರಿಗೆ ಬೇಸರವಾಗಿದೆ. ತಿನ್ನುವ ಅನ್ನದ ಮೇಲೆ ಉರುಳು ಸೇವೆ ಕೆಲವರಿಗೆ ಇಷ್ಟವಿಲ್ಲ. ಕೃಷ್ಣಮಠದ ಭೋಜನ ಶಾಲೆಯಲ್ಲೇ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಪಲಿಮಾರುಶ್ರೀಗಳ ಈ ನಿರ್ಧಾರಕ್ಕೆ ಪೇಜಾವರಶ್ರೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪಲಿಮಾರು ಶ್ರೀ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಜಾತಿಯ ಹೆಸರಲ್ಲಿ ವಿರೋಧ ಬಂದ್ರೆ ಸಂಘರ್ಷವಾಗುತ್ತದೆ. ದೇವಸ್ಥಾನದಲ್ಲಿ ಮಡೆಸ್ನಾನ - ಎಡೆಸ್ನಾನ ಅನಿವಾರ್ಯ ಅಲ್ಲ.

ಹಿಂದೂ ಧರ್ಮಕ್ಕೆ ಇದರಿಂದ ಯಾವುದೇ ಹಾನಿಯಿಲ್ಲ. ದೇವಸ್ಥಾನದ ಉತ್ಸವ ಪೂಜೆ ಶಾಸ್ತ್ರಬದ್ಧವಾಗಿ ನಡೆದರೆ ಸಾಕು. ವಿವಾದ, ಭಿನ್ನಾಭಿಪ್ರಾಯದ ಆಚರಣೆಗಳು ನಿಂತರೆ ಹಿಂದೂ ಧರ್ಮಕ್ಕೆ ನಷ್ಟವಿಲ್ಲ. ಎಡೆಸ್ನಾನಕ್ಕೆ ಬರುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ.
ಘರ್ಷಣೆಗೆ ಎಡೆಮಾಡುವ ಆಚರಣೆ ನಮಗೆ ಬೇಡ ಎಂದು ಅವರು ಪರ್ಯಾಯ ಪಲಿಮಾರು ಶ್ರೀಗಳ ನಿರ್ಧಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.












Click it and Unblock the Notifications