ಉಡುಪಿ; ನೈಟ್ ಕರ್ಪ್ಯೂ, ವಾಹನ ಸವಾರರಿಗೆ ಡಿಸಿ ಎಚ್ಚರಿಕೆ
ಉಡುಪಿ, ಏಪ್ರಿಲ್ 11; ಕರ್ನಾಟಕ ಸರ್ಕಾರ ಉಡುಪಿ ಮತ್ತು ಮಣಿಪಾಲದಲ್ಲಿಯೂ ಕೊರೊನಾ ಕರ್ಫ್ಯೂ ಘೋಷಣೆ ಮಾಡಿದೆ. ಕರ್ಫ್ಯೂ ಜಾರಿಯಾದ ಮೊದಲ ದಿನವಾದ ಶನಿವಾರ ಪೊಲೀಸರು ಭಾರೀ ಭದ್ರತೆ ಮತ್ತು ತಪಾಸಣೆ ಕೈಗೊಂಡಿದ್ದರು.
ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯ ತನಕ ನೈಟ್ ಕರ್ಪ್ಯೂ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಮಲ್ಪೆ, ಉಡುಪಿ, ಮಣಿಪಾಲದಲ್ಲಿ ಒಟ್ಟು 5 ಕಡೆಗಳಲ್ಲಿ ತಾತ್ಕಾಲಿಕ ಚೆಕ್ಪೋಸ್ಟ್ ಹಾಕಲಾಗಿತ್ತು.
ಮುಂಜಾಗ್ರತೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಹೆಚ್ಚುವರಿ ಸಿಬ್ಬಂದಿಗಳಿಗೆ ನೋಡಲ್ ಅಧಿಕಾರಿಯಾಗಿ ಓರ್ವ ಡಿವೈಎಸ್ಪಿಯನ್ನು ನಿಯೋಜನೆ ಮಾಡಿದ್ದು, ರಾತ್ರಿ 10 ಗಂಟೆ ಬಳಿಕ ಜನರು ಅನಗತ್ಯವಾಗಿ ಓಡಾಡದಂತೆ ಅಗತ್ಯ ಕ್ರಮ ಕೈಗೊಂಡರು.

ಜಿಲ್ಲಾಧಿಕಾರಿ ಜಿ. ಜಗದೀಶ್ ಉಡುಪಿ ಮತ್ತು ಮಣಿಪಾಲದಲ್ಲಿ ಗಸ್ತು ತಿರುಗಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ವಾಹನಗಳನ್ನು ತಡೆದು ನಿಲ್ಲಿಸಿ ಸ್ವತಃ ಜಿಲ್ಲಾಧಿಕಾರಿಗಳೇ ವಿಚಾರಣೆ ಮಾಡಿದರು.
ರಸ್ತೆಯಲ್ಲಿ ಓಡಾಡುವವರನ್ನು ಜಿಲ್ಲಾಧಿಕಾರಿಗಳು ತರಾಟೆಗೆ ತೆಗೆದುಕೊಳ್ಳುವ ದೃಶ್ಯವೂ ಕಂಡು ಬಂತು. ಭಾನುವಾರದಿಂದ ಅನಗತ್ಯ ತಿರುಗಾಡಿದರೆ ವಾಹನವನ್ನು ವಶಕ್ಕೆ ಪಡೆಯುತ್ತೇವೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಮಣಿಪಾಲದಲ್ಲಿ ವಿದ್ಯಾರ್ಥಿಗಳ ಓಡಾಟ ನಿಯಂತ್ರಿಸುವುದೇ ಪೊಲೀಸರಿಗೆ ತಲೆನೋವಾಗಿದೆ. ವಾರಾಂತ್ಯಗಳಲ್ಲಿ ಲೇಟ್ ನೈಟ್ ಪಾರ್ಟಿ ಮಾಡುವ ವಿದ್ಯಾರ್ಥಿಗಳಿಗೆ ಶನಿವಾರ ಕರ್ಪ್ಯೂ ಬಿಸಿ ತಟ್ಟಿದೆ.
ಶನಿವಾರದ ವರದಿಯಂತೆ ಉಡುಪಿಯಲ್ಲಿ 68 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 354.












Click it and Unblock the Notifications