ಶೀಘ್ರವೇ ಉಡುಪಿಯ ಹೆಜಮಾಡಿ ಬಂದರು ನಿರ್ಮಾಣ : ಶಾಸಕ ಸೊರಕೆ
ಉಡುಪಿ, ಜನವರಿ. 03 : ಉಡುಪಿ ಜಿಲ್ಲೆಯ ಹೆಜಮಾಡಿನಲ್ಲಿ ಶೀಘ್ರವೇ ಬಂದರು ನಿರ್ಮಾಣವಾಗಲಿದೆ. ಈ ನಿರ್ಮಾಣ ಯೋಜನೆಗೆ ಎಲ್ಲ ಪರವಾನಗಿ ದೊರತಿದ್ದು, ಶೀಘ್ರವೇ ರಾಜ್ಯ ಸರ್ಕಾರದ ಮೂಲಕ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ ಎಂದು ಶಾಸಕ ವಿನಯ್ ಕುಮಾರ್ ಸೊರಕೆ ತಿಳಿಸಿದ್ದಾರೆ.
ಬಂದರಿಗೆ ಪೂರಕವಾಗಿ ಕಾಪು ಕ್ಷೇತ್ರ ವ್ಯಾಪ್ತಿಯ ಮೀನುಗಾರಿಕಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ತಮ್ಮ ಪ್ರಥಮ ಬಜೆಟ್ ನಲ್ಲಿಯೇ ಹೆಜಮಾಡಿ ಬಂದರು ಯೋಜನೆಗೆ ಅನುದಾನ ನಿಗದಿಪಡಿಸಿದ್ದಾರೆ. ಕೇಂದ್ರ ಅನುಮೋದನೆ ದೊರೆತ ತಕ್ಷಣ ಬಂದರು ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಹೇಳಿದರು.
ಇನ್ನು ಪಡುಕರೆ-ಉಳಿಯಾರಗೋಳಿ ಬಳಿ ಸಮುದ್ರದಂಚಿಗೆ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಸಹ 99 ಕೋಟಿ ರು ಮಂಜೂರಾಗಿದೆ. ಶೀಘ್ರವೇ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಅದೇ ರೀತಿ ಎರ್ಮಾಳು ಭಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ 89 ಕೋಟಿ ರು ಮಂಜೂರಾಗಿದ್ದು, ಶೀಘ್ರ ಟೆಂಡರ್ ಕರೆಯಲಾಗುವುದು ಎಂಬ ಮಾಹಿತಿ ನೀಡಿದರು.
ಹೆಜಮಾಡಿಯಿಂದ ಪಡುಬಿದ್ರಿಗೆ ತೆರಳುವವರು ಹೆದ್ದಾರಿ ಮೂಲಕ ಸುತ್ತು ಬಳಸಿ ಹೋಗಬೇಕಿತ್ತು. ಈ ನಿಟ್ಟಿನಲ್ಲಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯೊಂದಿಗೆ ಸಮಾಲೋಚಿಸಿ ಶಾಸಕ ಸೊರಕೆ ಅವರು ವಿನೂತನ ತಂತ್ರಜ್ಞಾನ ಬಳಸಿ ಸೇತುವೆ ನಿರ್ಮಾಣಕ್ಕೆ ನಿರ್ಧರಿಸಿದ್ದರು.
ಅದರಂತೆ ಇಲಾಖೆ ಬೆಂಗಳೂರಿನ ಸಿವಿಲೇಡ್ ಮೂಲಕ ನೀಲನಕ್ಷೆ ತಯಾರಿಸಿ 80 ಲಕ್ಷ ರು ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ನಬಾರ್ಡ್ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ.
ಅನುದಾನ ಬಿಡುಗಡೆಗೊಂಡ ಕಾರಣ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ಸಹ ನೆರವೇರಿಸಲಾಗಿದೆ. ವರ್ಷದೊಳಗೆ ಸೇತುವೆ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರಾವಳಿ ಭಾಗದಲ್ಲಿ ಸಿಆರ್ ಜೆಡ್ ಮಿತಿ 500 ಮೀಟರ್ ಇರುವ ಕಾರಣ ಬಡ ಮೀನುಗಾರರಿಗೆ ದೊರೆಯಲು ತೀವ್ರ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಶೈಲೇಶ್ ಸಮಿತಿ ಮೂಲಕ ಕೇಂದ್ರ ಸರ್ಕಾರಕ್ಕೆ 50 ಮೀಟರ್ ನಿಗದಿಪಡಿಸುವಂತೆ ಕೋರಿ ಮನವಿ ಮಾಡಲಾಗಿದೆ.
ಅದು ಅನುಮೋದನೆ ಹಂತದಲ್ಲಿದ್ದು, ಪ್ರಧಾನಮಂತ್ರಿ ಸಹಿಗೆ ಬಾಕಿ ಇದೆ. ಅಲ್ಲದೇ ಹಲವು ಮೀನುಗಾರರಿಗೆ ಹಕ್ಕುಪತ್ರ ದೊರೆಯದೆ ಸಮಸ್ಯೆ ಉಂಟಾಗಿದೆ.
ರಾಜ್ಯ ಕಂದಾಯ ಮತ್ತು ಅರಣ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳ ಸಮಾಲೋಚಿಸಿ 2006ಕ್ಕಿಂತ ಮೊದಲು ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡಲು ತೀರ್ಮಾನಿಸಲಾಗಿದೆ. ಎಂದು ಶಾಸಕ ಹಾಗೂ ಮಾಜಿ ಸಚಿವ ಸೊರಕೆ ತಿಳಿಸಿದರು.