ಉಡುಪಿ; ರಂಗೋಲಿಯಲ್ಲಿ ಅರಳಿದ ನರೇಂದ್ರ ಮೋದಿ!
ಉಡುಪಿ, ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿ ಶನಿವಾರ ತಮ್ಮ 72 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮೋದಿ ಜನ್ಮದಿನಕ್ಕೆ ವಿಶ್ವಾದ್ಯಾಂತ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ದೇಶದಲ್ಲೂ ಬಿಜೆಪಿ ಕಾರ್ಯಕರ್ತರು ಹಲವು ಕಾರ್ಯಕ್ರಮಗಳನ್ನು ಮಾಡಿ ಮೋದಿ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸುಕೊಳ್ಳುತ್ತಿದ್ದಾರೆ. ಅದರಲ್ಲೂ ಉಡುಪಿ ಜಿಲ್ಲೆಯ ಮೋದಿ ಅಭಿಮಾನಿಗಳಾದ ಇಬ್ಬರು ಕಲಾವಿದರು ಪ್ರಧಾನಿ ಮೋದಿಯ ರಂಗೋಲಿ ಬಿಡಿಸಿ ಅಭಿಮಾನ ಮೆರೆದಿದ್ದಾರೆ.
ಉಡುಪಿಯ ಚಿತ್ರ ಕಲಾವಿದೆ ಸ್ಫೂರ್ತಿ ಆಚಾರ್ಯ ಮತ್ತು ಅಶ್ವಥ್ ಆಚಾರ್ಯ ಕೈ ಚಳಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸುಂದರ ರಂಗೋಲಿ ಮೂಡಿಬಂದಿದೆ. ಉಡುಪಿ ಯ ಸಾಸ್ತಾನದ ಚೆನ್ನಕೇಶವ ಹಾಲ್ನಲ್ಲಿ ಈ ರಂಗೋಲಿ ಬಿಡಿಸಲಾಗಿದ್ದು ನೋಡುಗರ ಕಣ್ಮನ ಸೆಳೆದಿದೆ.
ಸುಮಾರು 15 ಗಂಟೆಗಳ ಪರಿಶ್ರಮ ವಹಿಸಿ ನರೇಂದ್ರ ಮೋದಿಯವರ ಈ ರಂಗೋಲಿ ಅರಳಿ ನಿಂತಿದೆ. ಈ ರಂಗೋಲಿ 12 ಅಡಿ ಎತ್ತರ, 7.5 ಅಡಿ ಅಗಲವಿದ್ದು ನರೇಂದ್ರ ಮೋದಿಯವರ ಜನ್ಮ ದಿನಕ್ಕಾಗಿಯೇ ಈ ರಂಗೋಲಿ ಸಿದ್ಧವಾಗಿದೆ. ತೀಕ್ಷ್ಣ ಕಣ್ಣೋಟದ ನರೇಂದ್ರ ಮೋದಿಯವರ ಮುಖದ ಆಕೃತಿ ರಂಗೋಲಿ ಮೂಲಕ ಮೂಡಿ ಬಂದಿದೆ. ಪ್ರಧಾನಿ ಮೋದಿ ಅಭಿಮಾನಿಗಳು ಈ ರಂಗೋಲಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿ ಅಭಿಮಾನಿಗಳ ವೀಕ್ಷಣೆಗಾಗಿ ಇಡೀ ದಿನ ರಂಗೋಲಿಯ ಪ್ರದರ್ಶನ ಮಾಡಲಾಗಿದೆ.

ಈ ಸಂಧರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಲಾವಿದೆ ಸ್ಫೂರ್ತಿ ಆಚಾರ್ಯಾ, ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಕೋಟ್ಯಾಂತರ ಅಭಿಮಾನಿಗಳಂತೇ ನಾವೂ ಅಭಿಮಾನಿಗಳೇ ಆಗಿದ್ದೇವೆ. 72ರ ಹರೆಯದಲ್ಲೂ ಚುರುಕಿನ ಸ್ವಭಾವದ ಮೋದಿಯವರ ಹುಟ್ಟು ಹಬ್ಬಕ್ಕೆ ಏನಾದರೂ ವಿಶೇಷವಾಗಿ ಮಾಡಬೇಕೆಂದು ಒಂದು ತಿಂಗಳ ಹಿಂದೆಯೇ ಯೋಚನೆ ಮಾಡಿದ್ದೆ, ಸಹ ಕಲಾವಿದ ಅಶ್ವಥ್ ಆಚಾರ್ಯ ಅವರ ಸಹಾಯದಿಂದ 12 ಅಡಿ ಉದ್ದದ ಬೃಹತ್ ರಂಗೋಲಿ ರಚಿಸಿದ್ದೇವೆ. ಈ ರಂಗೋಲಿ ತಯಾರಿಕೆಗೆ 15 ಗಂಟೆ ತಗುಲಿದ್ದು, ಮೋದಿಯವರ ಮೇಲಿನ ಪ್ರೀತಿಯಿಂದ ಈ ರಂಗೋಲಿ ಯನ್ನು ರಚಿಸಿದ್ದೇವೆ ಎಂದು ಹೇಳಿದ್ದಾರೆ.
1,213 ಮಣ್ಣಿನ ಟೀ ಕಪ್ಗಳೊಂದಿಗೆ ಮೋದಿ ಮರಳು ಶಿಲ್ಪ
ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು 1,213 ಮಣ್ಣಿನ ಟೀ ಕಪ್ಗಳೊಂದಿಗೆ ಪ್ರಧಾನಿ ಮೋದಿಯವರ ಮರಳು ಶಿಲ್ಪವನ್ನು ರಚಿಸಿದ್ದಾರೆ. ಪಟ್ನಾಯಕ್ ಒಡಿಶಾದ ಪುರಿ ಬೀಚ್ನಲ್ಲಿ 5 ಅಡಿ ಎತ್ತರದ ಮೋದಿ ಮರಳು ಶಿಲ್ಪವನ್ನು ನಿರ್ಮಿಸಿದ್ದಾರೆ. ಇದಕ್ಕೆ 5 ಟನ್ಗೂ ಹೆಚ್ಚು ಮರಳನ್ನು ಬಳಸಿಕೊಳ್ಳಲಾಗಿದೆ. ದೇಶದ ಪ್ರಧಾನಿ ಜನ್ಮದಿನದ ಶುಭಾಶಯವನ್ನು ತಮ್ಮ ಕಲೆಯ ಮೂಲಕ ಪಟ್ನಾಯಕ್ ತೋರ್ಪಡಿಸಿದ್ದಾರೆ.
ಮಣ್ಣಿನ ಕಪ್ಪುಗಳನ್ನು ಬಳಿಸಿಕೊಳ್ಳುವ ಮೂಲಕ ನಾವು ಮೋದಿ ಟೀ ಮಾರಾಟಗಾರನಿಂದ ದೇಶದ ಪ್ರಧಾನ ಸೇವಕ ಹುದ್ದೆಗೇರಿರುವ ಪಯಣವನ್ನು ತೋರಿಸಿದ್ದೇವೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಟ್ನಾಯಕ್ ಹೇಳಿದ್ದಾರೆ.












Click it and Unblock the Notifications