ಆಗುಂಬೆ ಘಾಟಿಯಲ್ಲಿ 20ಕ್ಕೂ ಹೆಚ್ಚು ಮಂಗಗಳ ಮಾರಣ ಹೋಮ
ಉಡುಪಿ, ಅಕ್ಟೋಬರ್ 27: ಈ ಮಂಗಗಳು ಮನುಷ್ಯರಿಗೆ ಅದೇನು ಮಾಡಿದ್ದವೋ ಗೊತ್ತಿಲ್ಲ. ಆದರೆ ಕಿಡಿಗೇಡಿಗಳ ಕೃತ್ಯಕ್ಕೆ ಇವೆಲ್ಲಾ ನರಳಿ ನರಳಿ ಸತ್ತಿವೆ.
ಇಪ್ಪತ್ತಕ್ಕೂ ಅಧಿಕ ಮಂಗಗಳು ಜೀವನ್ಮರಣ ಸ್ಥಿತಿಯಲ್ಲಿ ನರಳಾಡಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಘಾಟಿಯ ರಸ್ತೆ ಬದಿಯಲ್ಲಿ ಈ ಮನಕಲುಕುವ ದೃಶ್ಯ ಕಂಡುಬಂದಿದ್ದು ಯಾರೋ ಕಿಡಿಗೇಡಿಗಳು ಈ ಮಂಗಗಳಿಗೆ ಆಹಾರದಲ್ಲಿ ವಿಷವುಣಿಸಿ ತಂದು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಆಹಾರವನ್ನು ಹುಡುಕಿಕೊಂಡು ನಾಡಿಗೆ ಬಂದ ಈ ಮೂಕ ಜೀವಿಗಳಿಗೆ ವಿಷವುಣಿಸಿರಬಹುದೆಂದು ಅನುಮಾನ ವ್ಯಕ್ತಪಡಿಸಲಾಗಿದೆ.
ಫಲಿಸದ ಸಾರ್ವಜನಿಕರ ಯತ್ನ
ಮಂಗಗಳ ನರಳಾಟವನ್ನು ಕಂಡ ಸ್ಥಳೀಯ ಯುವಕರ ತಂಡ ಹಾಗೂ ಕೆಲವು ಪ್ರಯಾಣಿಕರು ಮಂಗಗಳಿಗೆ ನೀರು ಕುಡಿಸಿ ಬದುಕಿಸಲು ಬಹಳ ಪ್ರಯತ್ನ ಪಟ್ಟರೂ ಪ್ರಯೋಜನವಾಗಿಲ್ಲ.
ಮಂಗಗಳ ಮೂಕ ರೋಧನೆ
ಎಲ್ಲಾ 20ಕ್ಕೂ ಹೆಚ್ಚು ಮಂಗಗಳು ಸತ್ತು ಬಿದ್ದಿವೆ. ಅವುಗಳ ಮೂಕ ರೋಧನೆಗೆ ಜನರು ಮೌನ ಸಾಕ್ಷಿಯಾಗಿದ್ದಾರೆ.
ವನ್ಯಜೀವಿ ಇಲಾಖೆ ಸಿಬ್ಬಂದಿ ಪರಿಶೀಲನೆ
ಈ ಘಟನೆ ಬಗ್ಗೆ ಅರಣ್ಯ ಇಲಾಖೆಯವರು ಗಮನ ಹರಿಸಬೇಕೆಂದು ಸ್ಥಳೀಯರು ಒತ್ತಾಯಿದ್ದಾರೆ. ಘಟನಾ ಸ್ಥಳಕ್ಕೆ ಹೆಬ್ರಿ ವಲಯ ವನ್ಯಜೀವಿ ಇಲಾಖೆಯ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಹಿಂದೆಯೂ ನಡೆದಿತ್ತು ಘಟನೆ
ಇತ್ತೀಚೆಗೆ ಹೆಬ್ರಿ ಬಳಿಯ ಕಬ್ಬಿನಾಲೆ ಎಂಬಲ್ಲಿ ಇದೇ ರೀತಿ ಯಾರೋ ಕಿಡಿಗೇಡಿಗಳು ಮಂಗಗಳಿಗೆ ವಿಷ ಉಣಿಸಿ ರಸ್ತೆ ಬದಿಯಲ್ಲಿ ಹಾಕಿದ ಘಟನೆ ನಡೆದಿತ್ತು.