ಉಡುಪಿಯಲ್ಲಿ 150 ಮಂಗಗಳ ಸಾವು, ಈವರೆಗಿನ ಸಂಪೂರ್ಣ ಮಾಹಿತಿ
ಉಡುಪಿ, ಫೆಬ್ರವರಿ 13: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಲೆನಾಡು ಭಾಗದ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಮಂಗನ ಕಾಯಿಲೆಯ ಭೀತಿ ಮುಂದುವರೆದಿದೆ. ಮಂಗಗಳ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಉಡುಪಿ ಜಿಲ್ಲೆಯಲ್ಲಿ ಈವರೆಗೆ 150 ಕ್ಕೂ ಅಧಿಕ ಸತ್ತ ಮಂಗಗಳು ಪತ್ತೆಯಾಗಿವೆ. ಆದರೆ ಉಡುಪಿ ಜಿಲ್ಲೆಯ ಆರೋಗ್ಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಪರಿಶ್ರಮ ಮತ್ತು ಜಾಗೃತಿ ಕಾರ್ಯಕ್ರಮಗಳಿಂದಾಗಿ ಈವರೆಗೆ ಯಾರೊಬ್ಬರಿಗೂ ಮಂಗನ ಕಾಯಿಲೆಯ ಸೋಂಕು ಕಾಣಿಸಿಕೊಂಡಿಲ್ಲ.
ಈ ನಡುವೆ ಮುಂಜಾಗ್ರತಾ ಕ್ರಮವಾಗಿ ಪಶ್ಚಿಮ ಘಟ್ಟ ಪ್ರದೇಶದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ, ಚಾರಣಕ್ಕೆ ತೆರಳದಂತೆ ನಿರ್ಭಂಧ ಹೇರಲಾಗಿದೆ.
ಶಿವಮೊಗ್ಗದಲ್ಲಿ ಮೊದಲು ಕಾಣಿಸಿಕೊಂಡ ಈ ಮಂಗನ ಕಾಯಿಲೆಯ ಸೋಂಕು ಇದೀಗ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭಾಗದಲ್ಲೂ ವ್ಯಾಪಕವಾಗಿ ಹಬ್ಬುತ್ತಿದೆ. ಪ್ರತಿದಿನ ಮಂಗಗಳು ಸಾವನ್ನಪ್ಪುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ.
ಈವರೆಗೆ ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ 150ಕ್ಕೂ ಅಧಿಕ ಮಂಗನ ಶವಗಳು ಪತ್ತೆಯಾಗಿದ್ದು, ಈ ಪೈಕಿ 12 ಮಂಗಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಉಡುಪಿ ಜಿಲ್ಲೆಯ 29 ಮಂದಿ ರೋಗಿಗಳಲ್ಲಿ ಸೋಂಕು ಬಾಧಿಸಿದ ಶಂಕೆಯಿತ್ತು. ಆದರೆ ಯಾರಲ್ಲೂ ಕೆಎಫ್ ಡಿ ವೈರಸ್ ಕಾಣಿಸಿಕೊಂಡಿಲ್ಲ. ಮುಂದೆ ಓದಿ...

ರೋಗ ಹರಡುವ ಸಾಧ್ಯತೆ
ಮಂಗಗಳು ಸತ್ತ 5 ಕಿ.ಮೀ.ವ್ಯಾಪ್ತಿಯಲ್ಲಿ ರೋಗ ಹರಡುವ ಸಾಧ್ಯತೆಯಿದೆ. ಹೀಗಾಗಿ ಗ್ರಾಮೀಣ ನಿವಾಸಿಗಳು ತರಗೆಲೆ ಸೇರಿದಂತೆ ಕಾಡುತ್ಪನ್ನ ತರಲು ಅರಣ್ಯ ಪ್ರದೇಶಕ್ಕೆ ಹೋಗದಂತೆಯೂ ಸೂಚಿಸಲಾಗಿದೆ.

ಮಂಗಗಳು ನಗರದತ್ತ ವಲಸೆ
ಅತಿಯಾದ ಅರಣ್ಯನಾಶದಿಂದ ಮಂಗಗಳು ನಗರದತ್ತ ವಲಸೆ ಬರುತ್ತಿವೆ. ಹಾಗಾಗಿ ಕೇವಲ ಕ್ಯಾಸನೂರು ಅರಣ್ಯ ಪ್ರದೇಶಕ್ಕೆ ಸೀಮಿತವಾಗಿದ್ದ ಈ ಕಾಯಿಲೆ ಕರಾವಳಿಯ ಅರಣ್ಯ ಮತ್ತು ನಗರ ಪ್ರದೇಶಕ್ಕೂ ಕಾಲಿರಿಸಿದೆ.

ಯಾವುದೇ ಪ್ರತ್ಯೇಕ ಚಿಕಿತ್ಸೆ ಇಲ್ಲ
ಮಂಗನ ಕಾಯಿಲೆಗೆ ಯಾವುದೇ ಪ್ರತ್ಯೇಕ ಚಿಕಿತ್ಸೆ ಇಲ್ಲ. ಆದರೂ ಮಣಿಪಾಲ ಕೆಎಂಸಿಯಲ್ಲಿ ಮಂಗನ ಕಾಯಿಲೆ ಬಾಧಿತರಿಗೆ ಪ್ರತ್ಯೇಕ ವಾರ್ಡ್ ತೆಗೆಯಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸುಮಾರು 178 ಮಂದಿ ಶಂಕಿತ ರೋಗಿಗಳು ಮಣಿಪಾಲಕ್ಕೆ ದಾಖಲಾಗಿದ್ದಾರೆ. ಇವರಲ್ಲಿ 69 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸದ್ಯ 33 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಇಬ್ಬರು ಮರಣ ಹೊಂದಿದ್ದಾರೆ.

ಪ್ರವಾಸಿಗಳ ಗಮನಕ್ಕೆ
ಮಳೆಗಾಲದವರೆಗೂ ಮಂಗನ ಕಾಯಿಲೆಯ ಭೀತಿಯಿದ್ದು, ಈ ಅವಧಿಯಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಪ್ರವಾಸಿ ತಾಣಗಳಿಗೆ ತೆರಳದಂತೆ ಸೂಚಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಹೆಬ್ರಿ ತಾಲೂಕಿನ ಕೂಡ್ಲು, ಜೋಮ್ಲು ಮುಂತಾದ ಜಲಪಾತಗಳು ಮತ್ತು ಬೈಂದೂರಿನ ಕೊಡಚಾದ್ರಿ ಹಾಗೂ ಇತರ ಅರಣ್ಯ ಪ್ರದೇಶಗಳಲ್ಲಿ ಟ್ರಕ್ಕಿಂಗ್ ಹೋಗೋದನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಫಲಕಗಳನ್ನು ಅಳವಡಿಸಿದ್ದು, ಪ್ರವಾಸಿಗಳು ಗಮನಹರಿಸಬೇಕಾಗಿದೆ.











Click it and Unblock the Notifications