ದೈವಸ್ಥಾನದ ಆವರಣ ಗೋಡೆ ಕುಸಿದು ಕಾಲೇಜು ವಿದ್ಯಾರ್ಥಿನಿ ಸಾವು
ಉಡುಪಿ, ಜೂನ್.29 : ಶ್ರೀ ಜಟ್ಟಿಗೇಶ್ವರ ದೈವಸ್ಥಾನದ ಆವರಣ ಗೋಡೆ ಕುಸಿದು ಎಂ.ಎಸ್ಸಿ.ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ಬೈಂದೂರು ತಾಲೂಕಿನ ಉಳ್ಳೂರಿನಲ್ಲಿ ನಡೆದಿದೆ.
ಎಂ.ಕಾಂ.ವಿದ್ಯಾರ್ಥಿನಿ ಧನ್ಯಾ ಶೆಟ್ಟಿ (22) ಮೃತ ವಿದ್ಯಾರ್ಥಿನಿ. ಪ್ರತಿನಿತ್ಯ ಬೆಳಗ್ಗೆ ಮನೆ ಹತ್ತಿರದ ದೈವಸ್ಥಾನಕ್ಕೆ ಬಂದು ಕೈಮುಗಿದುಕೊಂಡು ಹೋಗುವ ಅಭ್ಯಾಸವಿಟ್ಟುಕೊಂಡಿದ್ದ ಧನ್ಯಾ, ಎಂದಿನಂತೆ ಇಂದು ಕೂಡ ದೈವಸ್ಥಾನಕ್ಕೆ ತೆರಳಿದ್ದಾಳೆ.
ದೈವಸ್ಥಾನದಲ್ಲಿ ಕೈ ಮುಗಿದು ಮನೆಗೆ ತೆರಳುವಾಗ ಭಾರಿ ಮಳೆಯಿಂದ ನೀರು ತುಂಬಿಕೊಂಡಿದ್ದ ದೈವಸ್ಥಾನದ ಆವರಣದ ಗೋಡೆ ಕುಸಿದು ವಿದ್ಯಾರ್ಥಿನಿಯ ಮೇಲೆ ಬಿದ್ದಿದೆ.

ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಹಾಗೂ ತಹಶೀಲ್ದಾರ್ ಪುರಂದರ ಹೆಗಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ವಿದ್ಯಾರ್ಥಿನಿಯ ದೇಹವನ್ನು ಬೈಂದೂರು ಶವಗಾರದಲ್ಲಿ ಇರಿಸಲಾಗಿದೆ.
ಕರಾವಳಿ ಭಾಗದಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆ ಸುರಿಯುತ್ತಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ನಿನ್ನೆ ಸಂಜೆ ಕುಂದಾಪುರದ ಮನೆಗೆ ಸಿಡಿಲು ಬಡಿದು ತಾಯಿ ಮಗಳು ಗಾಯಗೊಂಡಿದ್ದರು. ಮಳೆಯ ಬಿರುಸಿನಿಂದ ಒತ್ತನೆಣೆ ಗುಡ್ಡ ಕುಸಿದು ಮಣ್ಣು ಹೆದ್ದಾರಿ ಸಂಚಾರಕ್ಕೆ ಸಂಚಕಾರ ತಂದಿತ್ತು.
ಅಷ್ಟೇ ಅಲ್ಲ, ಮುಂಗಾರು ಪ್ರವೇಶದಿಂದ ಗದ್ದೆ ಹೊಲಗಳಿಗೆ ನೀರು ನುಗ್ಗಿ ರೈತರು ಕಂಗಾಲಾಗಿದ್ದಾರೆ.












Click it and Unblock the Notifications