ಸೌದಿ ದೊರೆ ವಿರುದ್ಧ ಪೋಸ್ಟ್; ಹರೀಶ್ ನಿವಾಸಕ್ಕೆ ಅಧಿಕಾರಿಗಳ ಭೇಟಿ
ಉಡುಪಿ, ಡಿಸೆಂಬರ್ 24 : ಕುಂದಾಪುರ ಮೂಲದ ಹರೀಶ್ ಬಂಗೇರಾ ಫೇಸ್ಬುಕ್ನಲ್ಲಿ ಸೌದಿ ದೊರೆಯ ವಿರುದ್ಧ ಪೋಸ್ಟ್ಗಳನ್ನು ಹಾಕಿದ್ದಾರೆ ಎಂಬುದು ಆರೋಪ. ಹರೀಶ್ ಬಂಧಿಸಲಾಗಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಪ್ರಕರಣದ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಉಡುಪಿ ಜಿಲ್ಲೆಯ ಗೋಪಾಡಿ ಗ್ರಾಮದ ಹರೀಶ್ ಬಂಗೇರಾ ನಿವಾಸಕ್ಕೆ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಭೇಟಿ ನೀಡಿದರು. ರಿಯಾದ್ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಪ್ರಕರಣದ ಬಗ್ಗೆ ಮಾಹಿತಿ ಪಡೆದರು.
ಭಾರತೀಯ ದೂತವಾಸದ ಅಧಿಕಾರಿಗಳೊಂದಿಗೆ ಮಾತನಾಡಿದ ಅಧಿಕಾರಿಗಳು ಆದಷ್ಟು ಶೀಘ್ರದಲ್ಲಿ ಹರೀಶ್ ಬಂಗೇರಾ ಅವರ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಈ ಪ್ರಕರಣವು ಕಾನೂನು ಮೂಲಕ ಇತ್ಯರ್ಥವಾಗಬೇಕಿದ್ದು, ಸ್ವಲ್ಪ ವಿಳಂಬವಾಗಲಿದ್ದು, ಬಂಧನದಲ್ಲಿರುವ ಅವರು ಕ್ಷೇಮವಾಗಿದ್ದಾರೆ ಎಂದು ರಾಯಭಾರ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕುಟುಂಬಕ್ಕೆ ಧೈರ್ಯ ತುಂಬಿದರು
ಹರೀಶ್ ಬಂಗೇರಾ ಪತ್ನಿ ಸುಮನ ಬಂಗೇರಾ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಕಾರ್ಯದರ್ಶಿಗಳು, ಪ್ರಕರಣದ ಪ್ರಗತಿ ಬಗ್ಗೆ ಮಾಹಿತಿ ನೀಡಿದರು, ಸರ್ಕಾರವು ತಮ್ಮ ಪರವಾಗಿ ನಿಂತಿದ್ದು, ಆದಷ್ಟು ಶೀಘ್ರ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಧೈರ್ಯ ತುಂಬಿದರು.

ಬೇಗ ಬಿಡುಗಡೆ ಮಾಡಿ
ಸುಮನ ಬಂಗೇರಾ ಮಾತನಾಡಿ, "ಬಂಧನವಾದ ಬಳಿಕ ತಮ್ಮ ಪತಿ ಹರೀಶ್ ಬಂಗೇರಾ ಕೆಲಸ ಮಾಡುವ ಕಂಪನಿಯು ತಮ್ಮನ್ನು ಸಂಪರ್ಕಿಸಿ, ಒಂದು ಬಾರಿ ಮಾತನಾಡಿತ್ತು. ತದನಂತರ ಎಂಬೆಸ್ಸಿಯು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಸೌದಿ ಪೊಲೀಸ್ ಮುಖಾಂತರವೆ ಅವರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ತಮ್ಮ ಪತಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಿಸಬೇಕು. ಪತಿಯೊಂದಿಗೆ ಒಮ್ಮೆ ದೂರವಾಣಿಯಲ್ಲಿ ಮಾತನಾಡಲು ಅವಕಾಶ ಮಾಡಿಕೊಡುವಂತೆ" ಮನವಿ ಮಾಡಿದರು.

6 ವರ್ಷಗಳಿಂದ ಸೌದಿಯಲ್ಲಿದ್ದಾರೆ
ಹರೀಶ್ ಬಂಗೇರ ಕಳೆದ ಆರು ವರ್ಷಗಳಿಂದ ಸೌದಿಯಲ್ಲಿದ್ದಾರೆ. 2019ರ ಜನವರಿಯಲ್ಲಿ ಊರಿಗೆ ಭೇಟಿ ನೀಡಿದ್ದರು. ಬಂಧನಕ್ಕೊಳಗಾದ ಸುದ್ದಿ ತಿಳಿಯುತ್ತಲೇ ಉಡುಪಿ ಪೋಲಿಸರಿಗೆ ಅರ್ಜಿ ನೀಡಲಾಗಿದ್ದು, ಮಾನವ ಹಕ್ಕು ಆಯೋಗದ ಗಮನಕ್ಕೂ ತರಲಾಗಿದೆ.

ಸೌದಿಯಲ್ಲಿ ಬಂಧನ
ಸೌದಿ ದೊರೆ ವಿರುದ್ಧ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ ಹರೀಶ್ ಬಂಗೇರಾರನ್ನು ಸೌದಿ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರೀಶ್ ಬಿಡುಗಡೆಗೆ ಕೇಂದ್ರ ಸರ್ಕಾರ ಪ್ರಯತ್ನ ನಡೆಸಬೇಕು ಎಂದು ಒತ್ತಾಯಿಸಲಾಗುತ್ತಿದೆ.












Click it and Unblock the Notifications