ಕರ್ತವ್ಯ ಲೋಪ: ಕುಂದಾಪುರ ಉಪವಿಭಾಗಾಧಿಕಾರಿ ಅಮಾನತು
ಉಡುಪಿ, ಮಾರ್ಚ್ 31: ರಾಜ್ಯ ಸರ್ಕಾರದ ಆದೇಶದಂತೆ ಕುಂದಾಪುರ ತಾಲೂಕಿನ ಉಪವಿಭಾಗಾಧಿಕಾರಿ ಕೆ.ಮಹೇಶ್ ಚಂದ್ರ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಈ ಅಧಿಕಾರಿಯ ಲೀನ್ನ್ನು ಕೌನ್ಸಿಲ್ ಕಾರ್ಯದರ್ಶಿ ಕಲಬುರಗಿ ನಗರ ಕಾರ್ಪೋರೇಷನ್ ಕಲಬುರಗಿ ಇಲ್ಲಿಗೆ ವರ್ಗಾಯಿಸಲಾಗಿದೆ.
ಸದ್ಯ ಕೆ.ಮಹೇಶ್ ಚಂದ್ರ ಅವರನ್ನು ಕುಂದಾಪುರ ಉಪವಿಭಾಗಾಧಿಕಾರಿ ಹುದ್ದೆಯ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದ್ದು, ಕುಂದಾಪುರ ಉಪವಿಭಾಗದ ಉಪವಿಭಾಗಾಧಿಕಾರಿ ಹುದ್ದೆಯ ಪ್ರಭಾರವನ್ನು ಬ್ರಹ್ಮಾವರ ತಾಲೂಕಿನ ತಹಶೀಲ್ದಾರ್ ಆಗಿರುವ ಶ್ರೀಕಾಂತ್ ಎಸ್.ಹೆಗ್ಡೆ ಅವರಿಗೆ ವಹಿಸಲಾಗಿದೆ.

ಕುಂದಾಪುರದ ಮಾಜಿ ಉಪವಿಭಾಗಾಧಿಕಾರಿ ಕೆ.ಮಹೇಶ್ ಚಂದ್ರ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿದ್ದವು. ಉಡುಪಿ ಜಿಲ್ಲಾಡಳಿತಕ್ಕೆ ಮುಜುಗರದ ಸನ್ನಿವೇಶ ಉಂಟಾಗುವಂತೆ ಮಾಡಿರುವುದು, ಕರ್ತವ್ಯ ಲೋಪ, ಜನರಿಗೆ ಸ್ಪಂದಿಸದೇ ಇರುವುದು, ಕೆಲಸದಲ್ಲಿ ವಿಳಂಬ ಒಂದೆಡೆಯಾದರೆ, ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಜಮೀನಿನ ಪರಿಹಾರ ಮೊತ್ತವನ್ನು ಭೂಮಾಲೀಕರಿಗೆ ಪಾವತಿಸಲು ಹಾಗೂ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಬಾಕಿ ಉಳಿಸಿರುವುದು ಬಹುದೊಡ್ಡ ಆರೋಪವಾಗಿದೆ.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಸಂದರ್ಭದಲ್ಲಿ ಮಹೇಶ್ ಚಂದ್ರ ಬಡಾನಿಡಿಯೂರು ಗ್ರಾಮದಲ್ಲಿ 0.90 ಎಕರೆ ಜಾಗದಲ್ಲಿರುವ ವಾಣಿಜ್ಯ ಉದ್ದೇಶದ ರೆಸಾರ್ಟ್ ನಿರ್ಮಾಣದ ವಿಚಾರದಲ್ಲಿ ಉದ್ಯಾನವನ ಮತ್ತು ಬಯಲು ಜಾಗದ ವಲಯದಿಂದ ವಾಣಿಜ್ಯ ವಲಯಕ್ಕೆ ಬದಲಾವಣೆಯ ಕಡತದಲ್ಲಿ ಸರಕಾರಿ ದಾಖಲೆಗಳನ್ನು ನಿಯಮ ಮೀರಿ ನಕಲಿ ದಾಖಲೆ ಸೃಷ್ಟಿಸಿರುವ ಆರೋಪ ಕೇಳಿಬಂದಿತ್ತು.
ಈ ಆರೋಪದ ಮೇಲೆ ವಿಚಾರಣೆ ನೋಟಿಸ್ ನೀಡಿದಾಗ, ಅಧಿಕಾರಿಗಳ ವಿಚಾರಣೆಗೆ ತೃಪ್ತಿಕರ ಸಮಜಾಯಿಷಿ ನೀಡಿಲ್ಲ. ವಿಚಾರಣೆಯಲ್ಲಿ ಈ ಅಧಿಕಾರಿ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ ಎಂದು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ನೀಡಿರುವ ವರದಿಯನ್ನು ಪರಿಶೀಲಿಸಿದ ಮೇಲಾಧಿಕಾರಿಗಳು, ಮಹೇಶ್ ಚಂದ್ರ ಸರ್ಕಾರಿ ಕರ್ತವ್ಯದಲ್ಲಿದ್ದು, ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸುವಂತೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.












Click it and Unblock the Notifications