ಕಾಪು: ಮದುವೆಗೂ ಮುನ್ನ ಮತ ಚಲಾಯಿಸಿದ ನವ ವಧು
ಉಡುಪಿ, ಮೇ 10: ಮತದಾನ ದೇಶದ ಪ್ರತಿಯೊಬ್ಬರ ಹಕ್ಕು. ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ತಮ್ಮ ನಾಯಕರನ್ನು ಆರಿಸುವ ಹಕ್ಕು ಅರ್ಹತೆ ಹೊಂದಿದ ಪ್ರತಿಯೊಬ್ಬ ಪ್ರಜೆಗಿದೆ. ಕರ್ನಾಟಕದಲ್ಲಿ ಹದಿನೆಂಟು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕೂಡ ರಾಜ್ಯಕ್ಕೆ ಸೂಕ್ತ ಸರ್ಕಾರ ಆರಿಸಲು ಇಂದು ಮೇ 10ರಂದು ಮತದಾನ ಮಾಡಬೇಕಿದೆ.
ಈಗಾಗಲೇ ರಾಜ್ಯಾದ್ಯಂತ ಮತದಾನ ಭರದಿಂದ ಸಾಗುತ್ತಿದ್ದು, ನವ ವಧು ಮದುವೆಗೂ ಮುನ್ನ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಕಾಪು ವಿಧಾನಸಭಾ ಕ್ಷೇತ್ರದ ಮೆಲಿಟಾ ಎನ್ನುವವರು ಮದುವೆಗೆ ಶೃಂಗಾರಗೊಂಡೇ ಪಲಿಮಾರು ಗ್ರಾಮ ಪಂಚಾಯತ್ ಅವರಾಲು ಮಟ್ಟು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಬಳಿಕ ಮೆಲಿಟಾ ಮತಗಟ್ಟೆಯಿಂದ ಚರ್ಚ್ಗೆ ತೆರಳಿದ್ದಾರೆ.
ಮದುವೆಯ ವಿಶೇಷ ದಿನದಂದೂ ಕೂಡ ಮತದಾನದ ಕರ್ತವ್ಯ ಮರೆಯದ ಮೆಲಿಟಾ ಅವರಿಗೆ ಚುನಾವಣಾ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಮದುವೆಗೂ ಮುನ್ನ ಮತದಾನ ಮಾಡಿದ ಮಧುಮಗಳು
ಚಿಕ್ಕಮಗಳೂರು: ಪ್ರಜಾಪ್ರಭುತ್ವದ ಹಬ್ಬ ಕಾಫಿನಾಡಿನಲ್ಲಿ ಜೋರಾಗಿದ್ದು, ಯುವಕರು, ಯುವತಿಯರು, ಮಹಿಳೆಯರು, ಪುರುಷರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಮಧುಮಗಳು ಹಸೆಮಣೆ ಏರುವ ಮೊದಲು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಯವ ಮೂಲಕ ಮತದಾನದ ಮಹತ್ವವನ್ನು ಸಾರಿದ್ದಾರೆ. ಮೂಡಿಗೆರೆಯ ಚಂದ್ರಾಪುರ ಗ್ರಾಮದ ಎಸ್.ಎಂ.ರಾಜು ಅವರ ಮಗಳಾದ ಸುಶ್ಮಿತಾ ಅವರ ವಿವಾಹವು ಬುಧವಾರ ಮೂಡಿಗೆರೆ ರೈತ ಭವನದಲ್ಲಿ ನಡೆಯಲಿದ್ದು, ಮಧುಮಗಳು ಶೃಂಗಾರಗೊಂಡು ಮಾಕೋನ ಹಳ್ಳಿಯಲ್ಲಿ ತೆರೆಯಲಾಗಿದ್ದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ನಂತರ ಮದುವೆ ಮಂಟಪಕ್ಕೆ ಆಗಮಿಸಿದರು. ಮತದಾನದ ನಂತರ ಮದುವೆಗೆ ತೆರಳಿ ಮತದಾನದ ಮಹತ್ವವನ್ನು ಸಾರಿದರು.












Click it and Unblock the Notifications