ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಅವಮಾನ ಮಾಡಿದ್ದಕ್ಕೆ ಆಕ್ರೋಶ
ಉಡುಪಿ, ನವೆಂಬರ್ 28: ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥರ ಭಾವಚಿತ್ರದ ಮೇಲೆ ಕಾಲಿಟ್ಟು, ಫೋಟೋ ಕ್ಲಿಕ್ಕಿಸಿಕೊಂಡು ಅವಮಾನ ಮಾಡಿದ ಘಟನೆಗೆ ಎಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪೇಜಾವರ ಶ್ರೀಗಳಿಗೆ ಅವಮಾನಿಸಿರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಸಂವಿಧಾನ ಕುರಿತ ಹೇಳಿಕೆ : ಪೇಜಾವರ ಶ್ರೀಗಳ ವಿರುದ್ಧ ಪ್ರತಿಭಟನೆ
ಪೇಜಾವರ ಶ್ರೀಗಳಿಗೆ ಅವಮಾನಿಸಿರುವುದನ್ನು ಖಂಡಿಸಿರುವ ಮುಸ್ಲಿಂ ಯುವಕರ ತಂಡ ಈಗ ಶ್ರೀ ಗಳ ಪರ ಧ್ವನಿ ಎತ್ತಿದೆ. ಪೇಜಾವರ ಶ್ರೀಗಳನ್ನು ಅವಮಾನಿಸಿರುವುದರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದ್ದು, ವಿಶ್ವೇಶ ತೀರ್ಥರಿಗೆ ಅವಮಾನ ಮಾಡಿದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಲಾಗಿದೆ.
ಪೇಜಾವರ ಶ್ರೀಗಳ ವಿರುದ್ಧ ನಡೆದ ಪ್ರತಿಭಟನೆಯೊಂದರಲ್ಲಿ ಅವಮಾನಿಸಲಾದ ಫೋಟೋ ಈಗ ವೈರಲ್ ಆಗಿದೆ. ಯುವಕನೊಬ್ಬ ಚಪ್ಪಲಿ ಕಾಲಿನಿಂದ ಸ್ವಾಮೀಜಿ ಭಾವಚಿತ್ರಕ್ಕೆ ತುಳಿಯುತ್ತಿರುವ ಫೋಟೋ ಇದಾಗಿದೆ. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಧರ್ಮ ಸಂಸತ್ ನಲ್ಲಿ ಸಂವಿಧಾನದ ಬಗ್ಗೆ ಸ್ವಾಮೀಜಿ ವ್ಯಕ್ತಪಡಿಸಿದ ಅಭಿಪ್ರಾಯದ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ವಿವಿಧೆಡೆ ಪ್ರತಿಭಟನೆ ನಡೆದಿದೆ.