ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ; ಕೆಎಂಸಿಯ ಆರು ತಜ್ಞ ವೈದ್ಯರಿಂದ ಚಿಕಿತ್ಸೆ
ಉಡುಪಿ, ಡಿಸೆಂಬರ್ 20: ಉಸಿರಾಟದ ಸಮಸ್ಯೆಯಿಂದ ಇಂದು ಮುಂಜಾನೆ ಆಸ್ಪತ್ರೆಗೆ ದಾಖಲಾಗಿದ್ದ ಪೇಜಾವರ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ತಿಳಿದುಬಂದಿದೆ. ಆರೋಗ್ಯದಲ್ಲಿ ಏರುಪೇರಾದ ಕಾರಣ ಪೇಜಾವರ ಶ್ರೀಗಳನ್ನು ಇಂದು ಬೆಳಿಗ್ಗೆ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕೆಎಂಸಿ ಮಣಿಪಾಲದ ಹಿರಿಯ ವೈದ್ಯೆ ಡಾ. ಸುಧಾ ವಿದ್ಯಾಸಾಗರ್ ತಿಳಿಸಿದ್ದಾರೆ. ದಿನದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ಅವರು, "ಉಸಿರಾಟದ ಸಮಸ್ಯೆಯಿಂದ ಸ್ವಾಮೀಜಿ ಕೆಎಂಸಿಗೆ ಬೆಳಗ್ಗೆ ದಾಖಲಾಗಿದ್ದರು. ಈಗ ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ. ಸ್ವಾಮೀಜಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗುವಾಗ ಬಹಳ ಸಮಸ್ಯೆಯಿತ್ತು. ಶ್ರೀಗಳಿಗೆ ವೆಂಟಿಲೇಟರ್ ಅಳವಡಿಸಿದ್ದೇವೆ, ಚೇತರಿಸಿಕೊಳ್ಳಲು ಮದ್ದುಗಳನ್ನು ಹಾಕಿರುವುದರಿಂದ ಅಮಲಿನಲ್ಲಿ ಇದ್ದಾರೆ" ಎಂದು ಹೇಳಿದರು.
ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ; ಕೃತಕ ಉಸಿರಾಟ ವ್ಯವಸ್ಥೆ
ಪೇಜಾವರ ಶ್ರೀಗಳಿಗೆ ಕೆಎಂಸಿಯ ಆರು ತಜ್ಞ ವೈದ್ಯರಿಂದ ಚಿಕಿತ್ಸೆ ಸಿಗುತ್ತಿದೆ. ಡಾ. ಸುಧಾ ವಿದ್ಯಾಸಾಗರ್ ವೈದ್ಯರ ತಂಡದ ನೇತೃತ್ವ ವಹಿಸಿದ್ದು, ರವಿರಾಜ್ ಆಚಾರ್ಯ, ಡಾ. ಶ್ವೇತಪ್ರಿಯ, ಡಾ. ಮಂಜುನಾಥ ಹಂದೆ, ಡಾ. ಪದ್ಮಕುಮಾರ್, ಡಾ. ವಿಶಾಲ್ ಶಾನುಭೋಗ್ 24 ಗಂಟೆ ನಿಗಾ ವಹಿಸಲಿದ್ದಾರೆ. ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಶ್ರೀಗಳ ಚಿಕಿತ್ಸೆಯ ಸಂಪೂರ್ಣ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತಿದ್ದಾರೆ.
ಪ್ರಧಾನಿ ಮೋದಿಯವರು ಪೇಜಾವರ ಶ್ರೀ ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲು ಹಾರೈಸಿದ್ದಾರೆ. ಶ್ರೀಗಳ ಆಪ್ತ ಕಾರ್ಯದರ್ಶಿ ಟಿ.ಪಿ.ಅನಂತ್ ಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ನಡುವೆ ಅಮಿತ್ ಶಾ, ದೇವೇಗೌಡರು, ಮುಖ್ಯಮಂತ್ರಿ ಬಿಎಸ್ ವೈ ಕರೆ ಮಾಡಿ ಪೇಜಾವರ ಅವರ ಆರೋಗ್ಯ ವಿಚಾರಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ನಾಳೆ ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉಡುಪಿಗೆ ಆಗಮಿಸಿ ಆಸ್ಪತ್ರೆಗೆ ಭೇಟಿ ನೀಡಲಿರುವುದಾಗಿ ತಿಳಿದುಬಂದಿದೆ.