ಲಿಂಗಾಯತರ ಮೇಲೆ ಪ್ರೀತಿಯಿದೆ, ನಾನೇನೂ ಚುನಾವಣೆ ನಿಲ್ಲಬೇಕಿಲ್ಲ : ಪೇಜಾವರ ಶ್ರೀ
Recommended Video
ಉಡುಪಿ, ಅಕ್ಟೋಬರ್ 21 : ಲಿಂಗಾಯತರು ಹಿಂದೂ ಧರ್ಮ ತೊರೆಯದಿರಿ ಎಂದು ಹೇಳಿದ್ದೇನೆ. ನಾನು ಭಯದಿಂದ ನೀಡಿದ ಹೇಳಿಕೆ ಇದಲ್ಲ. ಲಿಂಗಾಯತರ ಬಗ್ಗೆ ಯಾವ ವಿರೋಧವೂ ಇಲ್ಲ. ಲಿಂಗಾಯತರು ನಮ್ಮವರು ಎಂಬುದಷ್ಟೇ ನನ್ನ ಕಾಳಜಿ. ಇದು ಸಲಹೆ- ಒತ್ತಡ ಅಲ್ಲ. ಕೇವಲ ನಿವೇದನೆಯಷ್ಟೇ ಎಂದು ಪೇಜಾವರ ಮಠಾಧೀಶರಾದ ವಿಶ್ವೇಶ ತೀರ್ಥರು ಹೇಳಿದ್ದಾರೆ.
ಪೇಜಾವರ ಶ್ರೀ ವಿಶ್ವೇಶ ತೀರ್ಥರ ಎಕ್ಸ್ ಕ್ಲೂಸಿವ್ ಸಂದರ್ಶನ
ನಾವು ಇಷ್ಟರವರೆಗೆ ಹಿಂದೂಗಳಾಗಿಯೇ ಇರಲಿಲ್ಲ ಅಂತ ಜಾಮ್ ದಾರ್ ಹೇಳುತ್ತಾರೆ. ಅವರ ಹೇಳಿಕೆ ಸರಿಯಲ್ಲ. ಎಲ್ಲ ಹಿಂದೂ ಸಮಾವೇಶದಲ್ಲಿ, ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಲಿಂಗಾಯತರು, ವಿರಕ್ತಿ ಮಠಾಧೀಶರು ಪಾಲ್ಗೊಂಡಿದ್ದಾರೆ ಉಡುಪಿಯಲ್ಲಿ 1968 ರಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ಸಮಾವೇಶ ನಡೆದಿತ್ತು. ಆ ಸಮಾವೇಶದಲ್ಲಿ ಸಿದ್ದಗಂಗಾ ಶ್ರೀ, ಆಗಿನ ಸುತ್ತೂರು ಶ್ರೀ ಭಾಗವಹಿಸಿದ್ದರು ಎಂದಿದ್ದಾರೆ.
ಜಾಮ್ ದಾರ್ ಹೇಳಿಕೆಯಲ್ಲಿ ಸತ್ಯ ಇಲ್ಲ. ಹಿಂದೂ ಹೋರಾಟದಲ್ಲಿ ನಿಮ್ಮದು ಪ್ರಥಮ ಧ್ವನಿ ಅಂತ ಈವರೆಗೆ ಎಲ್ಲಾ ಮಠಾಧೀಶರು ಹೇಳಿದ್ದಾರೆ. ಈಗ ಮಾತ್ರ ಹೊಸದಾಗಿ ವಿವಾದ ಪ್ರಾರಂಭವಾಗಿದೆ. ಬೌದ್ಧ- ಜೈನ ಧರ್ಮ ಪ್ರತ್ಯೇಕವಾದ ಕಾಲದಲ್ಲಿ ನಾನು ಇರಲಿಲ್ಲ. ಬಸವಣ್ಣ ಕೂಡ ಶಿವನೇ ಸರ್ವೋತ್ತಮ ಅಂತ ಹೇಳಿದ್ದಾರೆ.
ಹಿಂದೂ ಧರ್ಮದಲ್ಲಿ ಹಲವು ಪಂಥಗಳಿಗೆ ತತ್ವ, ಆಚರಣೆ ವಿಭಿನ್ನವಾದರೂ ಹಿಂದೂ ಧರ್ಮದೊಳಗೆ ಎಲ್ಲರೂ ಇದ್ದಾರೆ. ಬಸವಣ್ಣ ಪುನರ್ಜನ್ಮವನ್ನು ಒಪ್ಪಿದ್ದಾರೆ. ಅಪರಾಧ ಮಾಡಿದರೆ ನಾಯಿ- ಹಂದಿಯಾಗಿ ಹುಟ್ಟುತ್ತಾರೆಂದು ಶರಣರ ವಚನದಲ್ಲಿದೆ. ಶಿವ ಸರ್ವೋತ್ತಮ ಎನ್ನಲು ಬಸವಣ್ಣ ಆಗಮವನ್ನು ಉಲ್ಲೇಖಿಸಿದ್ದಾರೆ- ಉದಾಹರಿಸಿದ್ದಾರೆ. ನಮ್ಮ ಶಿವ ಅವೈದಿಕ ಅನ್ನಲು ಆಧಾರವೇನು ಎಂದು ಪೇಜಾವರ ಶ್ರೀಗಳು ಪ್ರಶ್ನೆ ಮಾಡಿದ್ದಾರೆ.
ಲಿಂಗಾಯತ ಧರ್ಮ: 'ಅಲ್ಪಸಂಖ್ಯಾತರಾಗುವುದು ಸುಲಭವಲ್ಲ' - ಪೇಜಾವರ ಶ್ರೀ
ಜಾಮ್ ದಾರ್ ಹೇಳಿದ್ದೆಲ್ಲ ಸತ್ಯಕ್ಕೆ ವಿರುದ್ಧ. ಲಿಂಗಾಯತರ ಮೇಲೆ ಪ್ರೀತಿಯಿಂದ ಇಷ್ಟೆಲ್ಲಾ ಹೇಳುತ್ತಿದ್ದೇನೆ. ಹಿಂದೂ ಧರ್ಮ ದುರ್ಬಲವಾಗಬಾರದು. ಕರ್ನಾಟಕದಲ್ಲಿ ಹಿಂದೂ ಧರ್ಮ ಉತ್ತಮ ರೀತಿಯಲ್ಲಿ ಬೆಂಬಲಿಸಿಕೊಂಡು ಬಂದಿದ್ದಾರೆ. ಇದರಲ್ಲಿ ವೈಯಕ್ತಿಕ ಸ್ವಾರ್ಥ ಇಲ್ಲ. ನಾನೇನು ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಚರ್ಚೆಯಾಗಲಿ. ಜನವರಿ 18 ರ ನಂತರ ಬೆಂಗಳೂರಿನಲ್ಲಿ ಚರ್ಚೆಯಾಗಲಿ. ನಾನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಗೆ ಬರಲು ಸಿದ್ಧ ಎಂದು ವಿಶ್ವೇಶ ತೀರ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ.