ಮಧ್ವಾಚಾರ್ಯರ ದಿನಾಚರಣೆ ಆರಂಭಿಸಲು ರಾಷ್ಟ್ರಪತಿಗಳಿಗೆ ಪೇಜಾವರ ಶ್ರೀ ಮನವಿ
ಉಡುಪಿ, ಡಿಸೆಂಬರ್ 27: ಶಂಕರಾಚಾರ್ಯರ ದಿನಾಚರಣೆಯಂತೆ ಮಧ್ವಾಚಾರ್ಯರ ದಿನಾಚರಣೆ ಆರಂಭಿಸಲು ಹಾಗೂ ಪಾಜಕದಲ್ಲಿ ಮುಕ್ತ ಮಧ್ವ ವಿಶ್ವವಿದ್ಯಾನಿಲಯ ತೆರೆಯಲು ರಾಷ್ಟ್ರಪತಿಗೆ ವಿನಂತಿ ಮಾಡಲಾಗಿದೆ ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭೇಟಿಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ವಿಜಯದಶಮಿಯಂದು ಮಧ್ವ ದಿನಾಚರಣೆ ಆಚರಿಸಲು ರಾಷ್ಟ್ರಪತಿ ಅವರಲ್ಲಿ ವಿನಂತಿ ಮಾಡಿಕೊಂಡಿದ್ದೇವೆ.
ಅಷ್ಟೇ ಅಲ್ಲ, ರಾಮಂದಿರ ನಿರ್ಮಾಣ ಆಗದಿರುವ ಬಗ್ಗೆ ರಾಷ್ಟ್ರಪತಿಗಳಿಗೆ ನಮ್ಮ ಅಪೇಕ್ಷೆ ಏನು ಅನ್ನುವುದನ್ನು ತಿಳಿಸಿದ್ದೇನೆ . ಅವರು ನಗುವಿನ ಮೂಲಕ ಉತ್ತರಿಸಿದ್ದಾರೆ.ಈಗಾಗಲೇ ವಿಶ್ವ ಹಿಂದೂ ಪರಿಷತ್ ಈ ಬಗ್ಗೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ ಎಂದರು.

ಮಾಜಿ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀ ಅಮೀನ್ ಮಟ್ಟು ನಮ್ಮಲ್ಲಿ ಬರ್ತಾರೆ. ಮಾತಾಡುತ್ತಾರೆ. ಅವರು ಸಿಕ್ಕಿದಾಗ ಹೇಳಿದ್ದೆ ಉಡುಪಿ ಚಲೋ ಸಂದರ್ಭದಲ್ಲಿ ನಾವು ದಲಿತರು ನಡೆದ ದಾರಿಯನ್ನು ಶುದ್ಧ ಮಾಡಿಲ್ಲ ಅಂತ.
ನಮ್ಮ ಮುಂದೆ ಬಹಳ ಭಕ್ತಿ ತೋರಿಸ್ತಾರೆ ಹಿಂದಿನಿಂದ ಈ ರೀತಿ ಹೇಳಿಕೆ ಕೊಡ್ತಾರೆ . ಮಟ್ಟು ಅವರಿಗೆ ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನಿಸಿದ್ದೇನೆ. ಆದರೆ ಅವರು ಚರ್ಚೆಗೆ ಬಂದಿಲ್ಲ.
ರಾಷ್ಟ್ರಪತಿ ಜೊತೆ ಉಂಡರೆ ದಲಿತರ ಪರ ಎಂಬ ಪ್ರಗತಿಪರರ ಹೇಳಿಕೆಗೆ ಉತ್ತರಿಸಿದ ಪೇಜಾವರ ಶ್ರೀ ನಾನು ಯಾರ ಜೊತೆಗೂ ಊಟ ಮಾಡುವುದಿಲ್ಲ. ದಲಿತರ ಜೊತೆ ಮಾತ್ರವಲ್ಲ, ಬ್ರಾಹ್ಮಣರ ಜೊತೆಗೂ ಊಟ ಮಾಡುವುದಿಲ್ಲ. ಸನ್ಯಾಸಿಗಳಿಗೆ ಅವರದ್ದೇ ಆದ ಕಟ್ಟು ಪಾಡುಗಳಿವೆ. ನಾನು ಏಕಾಂಗಿಯಾಗಿ ಊಟ ಮಾಡುವ ಸಂಪ್ರದಾಯ ಪಾಲಿಸುತ್ತಾ ಬಂದಿದ್ದೇನೆ ಎಂದು ಸ್ಪಷ್ಟ ಪಡಿಸಿದರು.












Click it and Unblock the Notifications