"ಕ್ಯಾಸಿನೊ ಕೇಂದ್ರ ತೆರೆಯಬೇಕೆಂದು ನಾನೇನು ನೇರ ಹೇಳಲಿಲ್ಲ"
ಉಡುಪಿ, ಫೆಬ್ರವರಿ 22: ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ಯಾಸಿನೋ ತೆರೆಯುವ ಕುರಿತು ಹೇಳಿಕೆ ನೀಡಿರುವ ಸಿ.ಟಿ.ರವಿ ವಿರುದ್ಧ ಟೀಕೆ ಕೇಳಿಬಂದಿದ್ದು, ಅದಕ್ಕೆ "ಕ್ಯಾಸಿನೋ ಕೇಂದ್ರ ತೆರೆಯಬೇಕೆಂದು ನಾನು ನೇರವಾಗಿ ಹೇಳಿಲ್ಲ. ವಿದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹೇಗಾಯಿತೆಂದು ಹೇಳಿದ್ದೇನಷ್ಟೇ. ಯೋಜನೆ ಸಿದ್ಧಪಡಿಸುವುದು ಸರ್ಕಾರದ ಕೆಲಸ" ಎಂದು ಪ್ರತಿಕ್ರಿಯಿಸಿದ್ದಾರೆ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಮಾತನಾಡಿದ ಅವರು, "ನಾನು ಅಮೆರಿಕಾದಲ್ಲಿರುವ ವಾಸ್ತವಾಂಶವನ್ನಷ್ಟೇ ಹೇಳಿದ್ದೇನೆ. ಅಮೆರಿಕಾದಲ್ಲಿ ಸಾಕಷ್ಟು ಕ್ಯಾಸಿನೋ ಸೆಂಟರ್ ಗಳಿವೆ. ಕರ್ನಾಟಕದಿಂದ ಸಾಕಷ್ಟು ಮಂದಿ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ. ಸಿಂಗಾಪುರ, ಶ್ರೀಲಂಕಾ ಕ್ಯಾಸಿನೋದಿಂದ ಪ್ರಸಿದ್ಧಿಯಾದ ದೇಶಗಳು. ಶ್ರೀಲಂಕಾ, ಲಾಸ್ ವೇಗಾಸ್ ನಲ್ಲಿ ಭಾರತೀಯ ಪ್ರವಾಸಿಗರ ದಂಡೇ ಇದೆ" ಎಂದು ಹೇಳಿದ್ದಾರೆ.
Video: ಅಮೂಲ್ಯ ಲಿಯೋನಾ ಹಿನ್ನೆಲೆಯನ್ನೇ ಪ್ರಶ್ನೆ ಮಾಡಿದ ಶಾಸಕ ಸಿ.ಟಿ.ರವಿ
"ನಮ್ಮಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ನಮ್ಮ ದುಡ್ಡು ವಿದೇಶಿ ಪ್ರವಾಸಿ ತಾಣಗಳಿಗೆ ಹರಿಯುತ್ತಿದೆ. ಪ್ರವಾಸಿಗರು ವಿದೇಶಕ್ಕೆ ದುಡ್ಡು ಹರಿಸಿದರೆ ನಮ್ಮ ದೇಶಕ್ಕೆ ನಷ್ಟ. ವಿದೇಶಕ್ಕೆ ಹೋಗುವವರನ್ನು ತಡೆಯಲು ಸಾಧ್ಯವಿಲ್ಲ. ನಮ್ಮಲ್ಲಿ ಪ್ರವಾಸಿ ತಾಣ ನಿರ್ಮಿಸುವ ಅಗತ್ಯವಿದೆ. ನಮ್ಮಲ್ಲಿ ಉದ್ಯೋಗ ಸೃಷ್ಟಿಸುವ ಉದ್ದೇಶವೂ ಇದೆ. ಗೋವಾ ಕ್ಲಬ್ ಹಾಗೂ ಪಬ್ ನಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿ ಮಡಿವಂತರೆಂದು ಪ್ರದರ್ಶಿಸುವವರು ಅಲ್ಲಿ ದುಡ್ಡು ಸುರಿಯುತ್ತಿದ್ದಾರೆ. ಇದು ಕೇವಲ ಪ್ರವಾಸೋದ್ಯಮ ಇಲಾಖೆ ಯೋಜನೆ ಅಲ್ಲ, ಗೃಹ ಇಲಾಖೆ ಅಭಿಪ್ರಾಯ ಪಡೆದುಕೊಳ್ಳಬೇಕಾಗುತ್ತದೆ" ಎಂದರು.
"ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಭೆಯಲ್ಲಿ ಹಲವಾರು ಚರ್ಚೆಯಾಗಿದೆ. ಕೃಷಿ ಟೂರಿಸಂ, ವಿಲೇಜ್ ಟೂರಿಸಂ, ರೈನ್ ಟೂರಿಸಂ, ಫುಡ್ ಟೂರಿಸಂ ಬಗ್ಗೆ ಹೇಳಿದ್ದೇನೆ. ಕೇವಲ ಕ್ಯಾಸಿನೋ ಬಗ್ಗೆ ಉಲ್ಲೇಖವಾಗಿದೆ. ನಮ್ಮ ಸಂಸ್ಕೃತಿಗೆ ವಿರೋಧವಾಗುತ್ತದೆ ನಿಜ. ನಮ್ಮ ದುಡ್ಡು ವಿದೇಶಕ್ಕೆ ಹರಿಯುತ್ತಿರುವುದೂ ಸತ್ಯ" ಎಂದು ಹೇಳಿದರು.
"ಬಾಂಗ್ಲಾ, ಪಾಕಿಸ್ತಾನದಿಂದ ಬಂದವರು ಹೆದರಬೇಕು, ಇಲ್ಲಿರುವವರು ಯಾಕೆ?'
ಇನ್ನು ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಕುರಿತು ಮಾತನಾಡಿ, "ದೇಶ ದ್ರೋಹದ ಮಾನಸಿಕತೆ ಅಪಾಯಕಾರಿ. ಬೇರೆಲ್ಲಾ ತಪ್ಪುಗಳಿಗೆ ಕ್ಷಮೆ ಇದೆ. ಆದರೆ ದೇಶದ್ರೋಹಕ್ಕೆ ಕ್ಷಮೆ ಇಲ್ಲ. ನಮ್ಮ ಸೈನಿಕರು ಮೈನಸ್ ಹತ್ತು ಡಿಗ್ರಿಯಲ್ಲಿ ದೇಶ ಕಾಯುತ್ತಿದ್ದಾರೆ. ಪಾಕಿಸ್ತಾನಿಗಳ ಗುಂಡಿಗೆ ಬಲಿಯಾಗುತ್ತಿದ್ದಾರೆ. ದೇಶದ ಒಳಗೆ ನೆಮ್ಮದಿಯಿಂದ ಬದುಕುತ್ತಿರುವವರು ಶತ್ರುಗಳಿಗೆ ಘೋಷಣೆ ಕೂಗಿದರೆ ಅದನ್ನು ಸಹಿಸುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
"ಅಮೂಲ್ಯಾಳ ಹಿಂದೆ ಒಂದು ದೊಡ್ಡ ತಂಡ ಇದೆ. ಇದನ್ನು ಆಕೆ ಒಪ್ಪಿಕೊಂಡಿದ್ದಾಳೆ. ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಿದೆ" ಎಂದಿದ್ದಾರೆ.