'ಗೋ ಹಂತಕರಿಗೆ ಇಫ್ತಾರ್ ಕೂಟ ಆಯೋಜಿಸಿರುವುದು ಶ್ರೀಗಳಿಗೆ ಶೋಭೆಯಲ್ಲ'
ಉಡುಪಿ, ಜೂನ್ 26 : ರಂಜಾನ್ ಹಬ್ಬದ ಪ್ರಯುಕ್ತ ಇದೇ ಮೊದಲ ಬಾರಿಗೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದ ಪೇಜಾವರ ಶ್ರೀ ಅವರ ವಿರುದ್ಧ ಶ್ರೀ ರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, 'ಶ್ರೀಕೃಷ್ಣ ಪವಿತ್ರವಾದ ಕ್ಷೇತ್ರದಲ್ಲಿ ಮುಸ್ಲಿಂ ಉಪವಾಸದ ಕೊನೆಯ ದಿನದಲ್ಲಿ ಅವರಿಗೆ ಫಲ ನೀಡಿವ ಮೂಲಕ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಶ್ರೀ ಕೃಷ್ಣ ಗೋವುಗಳ ಗೋಪಾಲಕ, ಇಂತಹ ಪುಣ್ಯ ದೇಗುಲದ ಆವರಣದಲ್ಲಿ ಗೋ ಹಂತಕರ ಕರೆದು ಸೌಹಾರ್ದ ಕೂಟವನ್ನು ಆಯೋಜಿಸಿರುವುದು ಸ್ವಾಮೀಜಿಯವರಿಗೆ ಶೋಭೆಯಲ್ಲ' ಎಂದು ಪೇಜಾವರ ಸ್ವಾಮೀಜಿ ಮೇಲೆ ಕಿಡಿಕಾರಿದರು.

ಪೇಜಾವರ ಶ್ರೀಗಳು ಕೇವಲ ಪೇಜಾವರ ಮಠಕ್ಕೆ ಸೀಮಿತವಾದವರಲ್ಲ, ಇಡೀ ವಿಶ್ವ ಹಿಂದೂ ಪರಿಷತಗೆ ಮಾರ್ಗದರ್ಶಕರು. ನಾವು ಬೀದಿಯಲ್ಲಿ ಒಂದು ಒಂದು ಗೋವುಗಳನ್ನು ಉಳಿಸಲು ಜೀವದ ಹಂಗು ತೊರೆದು ಕಾಪಾಡುವ ಪ್ರಯತ್ನ ಮಾಡುತ್ತಿದ್ದೇವೆ.
ಆದರೆ, ಪೇಜಾವರ ಶ್ರೀಗಳು ಗೋ ಹಂತಕರನ್ನು ಮಠದ ಒಳಗಡೆ ಕರೆಸಿ ಮಾನ್ಯತೆ ಕೊಡುವ ಪ್ರಕ್ರಿಯೆ ಒಪ್ಪುವಂತಹದಲ್ಲ. ಈ ಬಗ್ಗೆ ಪೇಜಾವರ ಸ್ವಾಮೀಗಳು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ ಮುಂದಿನ ದಿನದಲ್ಲಿ ಚರ್ಚೆ ಮಾಡಿ ನಿರ್ಣಾಯ ಮಾಡಲಾಗುವುದು' ಎಂದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮೀಜಿಗಳು, 'ಈ ಸೌಹಾರ್ದ ಕೂಟಕ್ಕೆ ಹಿಂದೂ ಮುಸ್ಲಿಂ ಮತೀಯ ಸ್ವರೂಪ ನೀಡಿ ಅನವಶ್ಯಕವಾಗಿ ಜನರ ಮನಸ್ಸುಗಳನ್ನು ಕಡೆಸುವ ಪ್ರಯತ್ನ ಮಾಡಬೇಡಿ' ಎಂದು ಪರ್ಯಾಯ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಸಮರ್ಥನೆ ಮಾಡಿಕೊಂಡರು.












Click it and Unblock the Notifications