ಪ್ರಭಾಕರ್ ಭಟ್, ಅಮಿತ್ ಶಾ ಹೇಳುವ ಹಿಂದೂ ಧರ್ಮ ಅಗತ್ಯವಿಲ್ಲ: ಮಟ್ಟು
ಉಡುಪಿ, ಆಗಸ್ಟ್ 9: ಸ್ವಾಮಿ ವಿವೇಕಾನಂದ, ನಾರಾಯಣ ಗುರುಗಳು ತೋರಿಸಿದ ಹಿಂದೂ ಧರ್ಮದ ಅಗತ್ಯ ನಮಗೆ ಇದ್ದು, ಕಲ್ಲಡ್ಕ ಪ್ರಭಾಕರ ಭಟ್, ಅಮಿತ್ ಶಾ ಹೇಳಿಕೊಡುವ ಹಿಂದೂ ಧರ್ಮದ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಜಿಲ್ಲಾ ಸೇವಾ ದಳ ಜಂಟಿಯಾಗಿ ಕ್ವಿಟ್ ಇಂಡಿಯಾ ಚಳುವಳಿಯ 75ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಬುಧವಾರ ನಗರದ ಕ್ಲಾಕ್ ಟವರ್ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹಿಂದೂ ಸಂಘಟನೆಗಳು ಕೇವಲ ಒಂದು ಪಕ್ಷದ ಏಜೆಂಟರಂತೆ ವರ್ತಿಸಿ, ಅವರಿಗಾಗಿ ಚುನಾವಣಾ ಪ್ರಚಾರದಲ್ಲೂ ಭಾಗವಹಿಸುವುದು ಸರಿಯಲ್ಲ ಎಂದರು.
ಧರ್ಮದ ಹೆಸರಿನಲ್ಲಿ ನಡೆಸುತ್ತಿರುವ ಅನ್ಯಾಯದ ವಿರುದ್ಧ ಪ್ರತಿಯೊಬ್ಬರೂ ಹೋರಾಡಬೇಕಾಗದ ಅಗತ್ಯ ಇದೆ. ಧರ್ಮದ ಆಧಾರದಲ್ಲಿ ಜನರಲ್ಲಿ ಒಡಕು ಮೂಡಿಸಿ ದೇಶಭಕ್ತಿಯ ನಾಟಕವನ್ನಾಡುವ ಸುಳ್ಳು ದೇಶಭಕ್ತರನ್ನು ಸಿದ್ಧಾಂತದ ಅಡಿಯಲ್ಲಿ ದೇಶದಿಂದ ತೊಲಗಿಸುವ ಕೆಲಸ ನಡೆಯಬೇಕಿದೆ ಎಂದು ಹೇಳಿದರು.
ದೇಶಭಕ್ತಿ ಮತ್ತು ರಾಷ್ಟ್ರೀಯತೆ ವಿಷಯ ಪ್ರತಿಯೊಬ್ಬರಲ್ಲೂ ಚರ್ಚೆಯಾಗುತ್ತಿದೆ. ಇದರ ಕುರಿತು ಚರ್ಚೆ ಮಾಡುತ್ತಿರುವ ರಾಷ್ಟ್ರ ಭಕ್ತರೆನಿಸಿಕೊಳ್ಳುವ ಆರೆಸ್ಸೆಸ್ ಅಥವಾ ಸಂಘಪರಿವಾರದ ಸಂಘಟನೆಗಳು ಕೇವಲ ಪ್ರಚಾರಕ್ಕಾಗಿ ತಮ್ಮ ದೇಶಭಕ್ತಿಯನ್ನು ತೋರಿಸಿ, ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.

52 ವರ್ಷಗಳಿಂದ ಕೇಂದ್ರ ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸದ ಆರೆಸ್ಸೆಸ್
ಸ್ವಾತಂತ್ರ್ಯ ಹೋರಾಟದಲ್ಲಿ ಕೇವಲ ಒಬ್ಬನೇ ಒಬ್ಬ ಸಂಘಪರಿವಾರದ ನಾಯಕ ಕೂಡ ಭಾಗವಹಿಸದೆ ಇಂದು ರಾಷ್ಟ್ರೀಯತೆಯ ಕುರಿತು ಮಾತನಾಡುವ ಕೆಲಸ ಮಾಡುತ್ತಿದ್ದಾರೆ. 52 ವರ್ಷಗಳಿಂದ ತನ್ನ ಕೇಂದ್ರ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸದ ಆರೆಸ್ಸೆಸ್ ಈಗ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಕುರಿತಾಗಿ ಮಾತನಾಡುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.

ಮುಖವಾಡ ಕಳಚಬೇಕಾದ ಅನಿವಾರ್ಯ
ನಿಜವಾದ ದೇಶಪ್ರೇಮ ಮೆರೆಯುವ ಪ್ರತಿಯೊಬ್ಬ ನಾಗರಿಕರು ಕೂಡ ಎಚ್ಚೆತ್ತುಕೊಂಡು ಜಾಗೃತರಾಗಬೇಕಾಗಿದೆ. ದೇಶ ಪ್ರೇಮದ ಮುಖವಾಡ ಹೊತ್ತಿರುವ ಇಂತಹ ದೇಶದ್ರೋಹಿಗಳ ಮುಖವಾಡ ಕಳಚಬೇಕಾದ ಅನಿವಾರ್ಯ ಇಂದು ಎದುರಾಗಿದೆ ಎಂದರು.

ಧರ್ಮ ಎಂಬುದು ಖಾಸಗಿ ವಿಚಾರ
ಧರ್ಮ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಖಾಸಗಿ ವಿಚಾರವಾಗಿದ್ದು ಅದನ್ನು ವೈಭವೀಕರಿಸುವ ಕೆಲಸ ಸಲ್ಲದು. ಧಾರ್ಮಿಕ ಗುರುಗಳು ಎನಿಸಿಕೊಂಡವರು ನಿಜವಾದ ಹಿಂದೂ ಧರ್ಮದ ಕುರಿತು ಜನರಿಗೆ ತಿಳಿ ಹೇಳುವ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವ ಕೆಲಸ ಮಾಡಬೇಕು ಎಂದು ದಿನೇಶ್ ಅಮಿನ್ ಮಟ್ಟು ಹೇಳಿದರು.

ಪರಸ್ಪರ ಪ್ರೀತಿಸುವುದನ್ನು ಕಲಿಯಬೇಕು
ಒಂದು ಧರ್ಮವನ್ನು ತಮ್ಮ ಲಾಭಕ್ಕಾಗಿ ಬಳಸಿ ಇನ್ನೊಬ್ಬರನ್ನು ಎತ್ತಿಕಟ್ಟುವುದರ ಬದಲು ಪ್ರತಿಯೊಬ್ಬರು ಪರಸ್ಪರ ಪ್ರೀತಿಸುವುದನ್ನು ಕಲಿಯಬೇಕಾಗಿದೆ ಎಂದು ಮಟ್ಟು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ, ಜಿಲ್ಲಾ ಸೇವಾ ದಲದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications