'ಶಿಖರದಿಂದ ಸಾಗರ'ಯಾನ; ಯುವತಿಯರಿಗೆ ಉಡುಪಿಯಲ್ಲಿ ಸ್ವಾಗತ
ಉಡುಪಿ, ಅಕ್ಟೋಬರ್ 28; ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ 'ಶಿಖರದಿಂದ ಸಾಗರ' ಐತಿಹಾಸಿಕ ಯಾನದಲ್ಲಿ ಪಾಲ್ಗೊಂಡಿದ್ದ ಐವರು ಯುವತಿಯರ ತಂಡ ಗುರುವಾರ ಮಲ್ಪೆ ಸಮುದ್ರ ತೀರಕ್ಕೆ ಆಗಮಿಸಿದರು.
ಗುರುವಾರ ಮಲ್ಪೆ ಸಮದ್ರ ತೀರದಲ್ಲಿ ಜಿಲ್ಲಾಡಳಿತದ ಪರವಾಗಿ ಐವರು ಯುವತಿಯರನ್ನು ಇವರನ್ನು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಸ್ವಾಗತಿಸಿದರು.
ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ 'ಶಿಖರದಿಂದ ಸಾಗರ' ಐತಿಹಾಸಿಕ ಯಾನದಲ್ಲಿ ಭಾಗಿಯಾಗಿರುವ ರಾಜ್ಯದ 5 ಯುವತಿಯರು ಕಾಶ್ಮೀರದಲ್ಲಿ 5425 ಮೀಟರ್ ಶಿಖರವನ್ನು ಯಸ್ವಿಯಾಗಿ ಏರಿದರು.

ನಂತರ ಲಡಾಖ್ನಿಂದ 3,000 ಕಿ. ಮೀ ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿದರು. ಕಾರವಾರದಿಂದ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ 300 ಕಿ. ಮೀ. ಸಮುದ್ರದಲ್ಲಿ ಕಯಾಕಿಂಗ್ ಯಾನ ಮಾಡುತ್ತಿದ್ದು, ಮಲ್ಪೆ ಸಮುದ್ರ ತೀರಕ್ಕೆ ಆಗಮಿಸಿದರು.
ಡಾ. ನವೀನ್ ಭಟ್ ಮಾತನಾಡಿ, "ಯುವತಿಯರು ಸಾಹಸ ಕ್ರೀಡೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸುವುದರ ಜೊತೆಗೆ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತು ಓಲಂಪಿಕ್ನಲ್ಲಿ ಉತ್ತಮ ಸಾಧನೆಯನ್ನು ಮಾಡುವ ದಿಟ್ಟ ನಿರ್ಧಾರ ಮಾಡಬೇಕು. ಇದಕ್ಕಾಗಿ ಈ ಯುವತಿಯರಲ್ಲಿರುವ ಸಾಹಸ ಗುಣಗಳು, ಛಲ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಯುವತಿಯರು ಮತ್ತು ಮಹಿಳೆಯರಿಗೂ ಮಾದರಿಯಾಗಬೇಕು" ಎಂದು ಕರೆ ನೀಡಿದರು.
"ಈ ಸಾಹಸ ಯತ್ರೆಯಲ್ಲಿ ತಮಗೆ ಎದುರಾದ ಎಲ್ಲ ಸಂಕಷ್ಟಗಳನ್ನು ದಿಟ್ಟತನದಿಂದ ಎದುರಿಸಿರುವ, ಈ ಯುವತಿಯರ ಸಾಧನೆ , ಕೇವಲ ರಾಜ್ಯಕ್ಕೆ , ದೇಶಕ್ಕೆ ಮಾತ್ರ ಸೀಮಿತಗೊಳ್ಳದೆ ಮುಂದಿನ ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವ ಛಲವನ್ನು ಹೊಂದುವುದರ ಜೊತೆಗೆ , ಯುವ ಪೀಳಿಗೆಗೆ ಮಾದರಿಯಾಗಬೇಕು. ಸ್ತ್ರೀಯರಲ್ಲಿನ ಶಕ್ತಿ , ಸಾಹಸ, ಧೈರ್ಯ ವನ್ನು ಬಿಂಬಿಸುವಂತಹ ವಿಭಿನ್ನವಾದ ಕಾರ್ಯಕ್ರಮವಾಗಿದೆ" ಎಂದರು.
ಉಡುಪಿ ಜಿಲ್ಲೆಯಲ್ಲಿಯೂ ಸಹ ಸಾಹಸ ಕಾರ್ಯಕ್ರಮಗಳ ತರಬೇತಿಗೆ ಈಗಾಗಲೇ ಪಡುಕೆರೆಯೆಲ್ಲಿ ಸ್ಥಳ ಗುರುತಿಸಲಾಗಿದ್ದು, ಜನರಲ್ ತಮ್ಮಯ್ಯ ಸಾಹಸ ಅಕಡೆಮಿಯ ಮೂಲಕ ಇಲ್ಲೂ ಸಹ ಸಾಹಸ ಕ್ರೀಡೆಗಳ ತರಬೇತಿ ಕೇಂದ್ರ ಆರಂಭವಾಗಲಿದ್ದು, ಜಿಲ್ಲೆಯ ಯುವ ಜನತೆಯ ಈ ಕೇಂದ್ರದ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಲಾಗಿದೆ.
ತಮ್ಮ ಈ ಸಾಹಸ ಯಾತ್ರೆಯ ಅನುಭವ ಹಂಚಿಕೊಂಡ ಯುವತಿಯರು, ಶಿಖರವೇರುವ ಸಂದರ್ಭದಲ್ಲಿ 25 ಕೆಜಿಗೂ ಅಧಿಕ ಬಾರದ ಬ್ಯಾಗ್ ಹೊತ್ತುಕೊಂಡು, ಜೀವವನ್ನು ಪಟಕ್ಕಿಟ್ಟು ಸಾಹಸ ಮಾಡಿದ್ದು, ಯಾನದ ಸಂಪೂರ್ಣ ಸಂದರ್ಭದಲ್ಲಿ ತಮ್ಮ ಎಲ್ಲಾ ಅಗತ್ಯತೆಗಳಿಗೆ ಯಾರನ್ನೂ ಅವಲಂಬಿಸದೇ ತಾವೇ ಸ್ವತ: ಅಡಿಗೆ ಮಾಡುವುದು ಸೇರಿದಂತೆ ಟೆಂಟ್ ಹಾಕುವ ಕೆಲಸಗಳನ್ನು ಮಾಡಿದ್ದು, ಶಿಖರವನ್ನು ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಏರಿ ಸಾಧನೆ ಮಾಡಿದ್ದೇವೆ ಎಂದರು.
ಸಾಧನೆಯ ಈ ಹಾದಿಯಲ್ಲಿ ಎದುರಾದ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ಲೆಕ್ಕಿಸದೇ ನಿಗದಿತ ಗುರಿ ಸಾಧನೆಯೆಡೆಗೆ ಬಂದಿದ್ದೇವೆ. ಲಡಾಖ್ನಿಂದ ನಡೆಸಿದ ಸೈಕ್ಲಿಂಗ್ ಪ್ರಯಾಣದಲ್ಲಿ ಕಂಡು ಬಂದ ವಿವಿಧ ಪ್ರದೇಶದಲ್ಲಿನ ಯುವತಿಯರು ಮತ್ತು ಮಹಿಳೆಯರ ಸಮಸ್ಯೆಗಳನ್ನು ಕಂಡಿದ್ದು, ಮಹಿಳೆಯರು ಮನೆಯಿಂದ ಹೊರಬಂದು ಸಾಹಸಿಗಳಾಗಬೇಕು ಎನ್ನುವ ಉದ್ದೇಶದಿಂದ ಮುಂದಿನ ದಿನದಲ್ಲಿ ಅರಿವು ಕಾರ್ಯಕ್ರಮಗಳನ್ನು ಮಾಡುವ ಉದ್ದೇಶವಿದೆ ಎಂದರು.
'ಶಿಖರದಿಂದ ಸಾಗರ' ಈ ಐತಿಹಾಸಿಕ ಯಾನದಲ್ಲಿ ಶಿವಮೊಗ್ಗದ ಐಶ್ವರ್ಯ. ವಿ ಮತ್ತು ಧನಲಕ್ಷ್ಮೀ, ಬೆಂಗಳೂರಿನ ಆಶಾ, ಮಡಿಕೇರಿಯ ಪುಪ್ಪ, ಮೈಸೂರಿನ ಬಿಂದು ಭಾಗವಹಿಸಿದ್ದಾರೆ. ಭಾರತೀಯ ಪರ್ವತರೋಹಣ ಸಂಸ್ಥೆಯ ದಕ್ಷಿಣ ವಲಯ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಹಯೋಗದೊಂದಿಗೆ ನಡೆಸುತ್ತಿರುವ ಈ ಯಾನವನ್ನು ಅಗಸ್ಟ್ 16ರಂದು ಧ್ವಜಾರೋಹಣ ಮಾಡಿದ್ದು, ಕಯಾಕಿಂಗ್ ಯಾನದ ಮೂಲಕ ಮಂಗಳೂರಿನಲ್ಲಿ ಮುಕ್ತಾಯಗೊಳ್ಳಲಿದೆ.












Click it and Unblock the Notifications