ಪೇಜಾವರ ಶ್ರೀಗಳು ಹಿಂದುತ್ವಕ್ಕಾಗಿ ಹೋರಾಟವೇ ನಡೆಸಿಲ್ಲವೇ ?
ಉಡುಪಿ, ಜೂನ್ 29: ಕರಾವಳಿ ಕೋಮು ದಳ್ಳುರಿಯಲ್ಲಿ ನಲುಗುತ್ತಿರಬೇಕಾದರೆ ಪೇಜಾವರ ಶ್ರೀಗಳು ಸೌಹಾರ್ದ ಬಯಸಿ ಇಫ್ತಾರ್ ಕೂಟ ಏರ್ಪಡಿಸಿದರೆ ಹಿಂದುತ್ವಕ್ಕೆ ಅಪಚಾರ ಮಾಡಿದ ಹಾಗಾಯಿತೇ ?
ಇಂಥ ಪ್ರಶ್ನೆ ಹಿಂದು ಕಾರ್ಯಕರ್ತ ರಲ್ಲಿ ಮೂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದುತ್ವ ಹೋರಾಟಗಾರರು ಎಂದು ಹೇಳಿಕೊಳ್ಳುವ ಯುವಕರು ಸ್ವಾಮೀಜಿ ವಿರುದ್ಧ ನಿಂದನೆಗಳನ್ನು ಮಾಡುತ್ತಿದ್ದಾರೆ. ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಒಂದು ಹೆಜ್ಹೆ ಮುಂದೆ ಹೋಗಿ ಜು.2ರಂದು ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.
ಉಡುಪಿ ಮಠದಲ್ಲಿ ಇಫ್ತಾರ್: ಹೀಗೆ ಮಾಡಿದ್ದರೆ ಎಲ್ಲವೂ ಸರಿಹೋಗುತ್ತಿತ್ತು!
ಹಿಂದುತ್ವ ಹೋರಾಟ ಎನ್ನುತ್ತಿರುವವರಲ್ಲಿ ಹಿಂದುತ್ವ ಪರಿಕಲ್ಪನೆ ಮೂಡಿಸಿದ ಶ್ರೇಷ್ಠರಲ್ಲಿ, ವಿಶ್ವ ಹಿಂದೂ ಪರಿಷತ್ ಸ್ಥಾಪಕರಲ್ಲಿ ಪೇಜಾವರ ಶ್ರೀ ಒಬ್ಬರು. ಅವರ ವಿರುದ್ಧವೇ ಈಗ ಅಪಸ್ವರ ಎದ್ದಿದೆ.
ಅನ್ಯರ ಟೀಕಿಸುವುದೇ ಹೋರಾಟವೇ ?
ಮುಂಬಯಿಯಲ್ಲಿ 1964ರಲ್ಲಿ ಚಿನ್ಮಯ ಮಿಶನ್ ಮಠದಲ್ಲಿ 'ವಿಶ್ವ ಮಟ್ಟದಲ್ಲಿ ಹಿಂದು ಸಂಘಟನೆ ಬೇಕು' ಎಂದು ಚಿಂತನೆ ಮಂಡನೆಯಾದಾಗ ಚಿನ್ಮಯಾನಂದ ಸ್ವಾಮೀಜಿ, ಆರ್.ಎಸ್.ಎಸ್ ವರಿಷ್ಠ ಗುರೂಜಿ ಗೋವಾಳ್ಕರ್ ಸಹಿತ 6 ಮಂದಿ ಪ್ರಮುಖರಿದ್ದರು. ಇದರಲ್ಲಿ ಪೇಜಾವರ ಶ್ರೀಗಳು ಒಬ್ಬರು.
ಬಳಿಕ 1966ಪ್ರಯಾಗದಲ್ಲಿ ಸಮಾವೇಶ ನಡೆಯಿತು. ಆಗ "ಯಾವ ಹಿಂದುವೂ ಪತಿತನಲ್ಲ" ಎಂಬ ಸಂದೇಶ ಸಾರಲಾಯಿತು. 1969 ರಲ್ಲಿ ಉಡುಪಿಯಲ್ಲಿ ಸಂತ ಸಮ್ಮೇಳನ ನಡೆದಾಗ ಹಿಂದೂಗಳೆಲ್ಲರೂ ಸಹೋದರರು ಎಂಬ ಘೋಷಣೆ ಮೊಳಗಿತ್ತು. ಭರಣಯ್ಯ ಎನ್ನುವ ದಲಿತರೇ ಅಧ್ಯಕ್ಷತೆ ವಹಿಸಿದ್ದರು.
ಸರ್ವಧರ್ಮ ಸಮನ್ವಯ ಬೂಟಾಟಿಕೆಯಲ್ಲ
ಶ್ರೀಗಳ ದಲಿತ ಹಿತ ಚಿಂತನೆ, ಸರ್ವಧರ್ಮ ಸಮನ್ವಯ ಎನ್ನುವುದು ಬೂಟಾಟಿಕೆಯಲ್ಲ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ. ಈ ಎಲ್ಲ ಸಮಾವೇಶಗಳ ಘೋಷ ವಾಕ್ಯ, ನೇತೃತ್ವ ಪೇಜಾವರಶ್ರೀಗಳದ್ದೇ ಆಗಿತ್ತು. 1989ರಲ್ಲಿ ರಾಮಜನ್ಮಭೂಮಿಯಲ್ಲಿ ರಾಮ ಮಂದಿರಕ್ಕೆ ದಲಿತರಿಂದ ಶಿಲಾನ್ಯಾಸ ಮಾಡಿದಾಗಲೂ ಪೇಜಾವರ ಶ್ರೀಗಳು ಮುಂಚೂಣಿಯಲ್ಲಿದ್ದರು.
ಪ್ರಮೋದ್ ಮುತಾಲಿಕ್ ಹೊಡಿಬಡಿಯ ಹೋರಾಟ ಶ್ರೇಷ್ಠವಾಯಿತೇ ?
ಆಚಾರ್ಯ ಮಧ್ವರ ಸರ್ವಧರ್ಮ ಸಮನ್ವಯದಡಿ ಮುಸ್ಲಿಮರನ್ನು ಶನಿವಾರ ಸಂಜೆ ಇಫ್ತಾರ್ ಕೂಟಕ್ಕೆ ಪೇಜಾವರ ಶ್ರೀಗಳು ಕರೆದಿದ್ದಾರೆ. ಪುತ್ತಿಗೆ ಶ್ರೀ ಪರ್ಯಾಯ ಸಂದರ್ಭ ನಿರ್ಮಿಸಿದ "ಅನ್ನಬ್ರಹ್ಮ" ಭೋಜನ ಛತ್ರದಲ್ಲಿ ಕೂರಿಸಿ ಪೇಜಾವರ ಶ್ರೀಗಳು ಪ್ರವಚನ ಮಾಡಿದ್ದಾರೆ. ಉಪವಾಸ ಬಿಡುವ ಸಮಯಕ್ಕೆ ಪ್ರಾರ್ಥನೆ ಮಾಡಬೇಕು ಎಂದು ಮುಸ್ಲಿಮರು ಹೇಳಿದ್ದಕ್ಕೆ ಮಹಡಿಗೆ ಕಳುಹಿಸಿದ್ದಾರೆ. ಅಲ್ಲಿ ನಮಾಜ್ ಮುಗಿಸಿ ಬಂದವರಿಗೆ ಶ್ರೀಕೃಷ್ಞನ ಪ್ರಸಾದ ರೂಪದಲ್ಲಿ ಫಲಾಹಾರ ನೀಡಿದ್ದಾರೆ. ಅಭಿಪ್ರಾಯ ಭೇದ ಸಹಜ. ಅದರೆ ಇಷ್ಟಕ್ಕೆ ವಿಶ್ವಹಿಂದೂ ಪರಿಷತ್ ಸ್ಥಾಪನೆಗೆ ಕಾರಣವಾದ ಪೇಜಾವರ ಶ್ರೀಗಳ ವಿರುದ್ಧವೇ ಹಿಂದೂ ರಕ್ಷಕರೆಂದು ಹೇಳಿಕೊಳ್ಳುವ ವ್ಯಕ್ತಿಗಳಿಂದ ನಿಂದನೆಗಳು, ಅವಮಾನಕಾರಿ ಹೇಳಿಕೆಗಳು ಹೊರಬೀಳುತ್ತಿವೆ.
ಹಿಂದೂ ಸಹೋದರರೆಲ್ಲ ಒಂದು ಎಂದು ಮೊದಲಿಗೆ ಹೇಳಿ ಹಿಂದೂ ಶಕ್ತಿ ರೂಪಿಸಿದ ಮೊದಲ ಸಂತ ಎನ್ನುವುದು ನೆನಪಿಲ್ಲವೇ ಅಥವಾ ಗೊತ್ತೇ ಇಲ್ಲವೇ ?
ಇಫ್ತಾರ್ ನಿಂದ ಹಿಂದೂ ಧರ್ಮದ ಶ್ರೇಷ್ಠತೆ ಹೆಚ್ಚಿದೆ - ಪೇಜಾವರ ಶ್ರೀ ತಿರುಗೇಟು
ಇವರನ್ನು ಉಪಚರಿಸುವುದು ತಪ್ಪೇ ?
ಕಟ್ಟುವವರಿಗೇ ಕಟ್ಟುವುದೇ ಕೆಲಸ, ಕೆಡಹುವವರಿಗೇ ಕೆಡುಹುವುದೇ ಕೆಲಸ. ಆದರೆ ಅಂದು ಮಠಕ್ಕೆ ಮುತ್ತಿಗೆ ಹಾಕುತ್ತೇವೆ ಎಂದಾಗ ನಾವು ಎದುರಿಸುತ್ತೇವೆ ಎಂದು ಹೇಳಿದ ಮುಸ್ಲಿಮರೂ ಇಫ್ತಾರ್ ಗೆ ಬಂದಿದ್ದರು ಇದನ್ನು ಸಂಘಟಿಸಿದ್ದೂ ಕೂಡಾ ಅವರೇ. ಪೇಜಾವರಶ್ರೀಗಳ ಹೆಸರಲ್ಲಿ ಇವರು ರಕ್ತದಾನವನ್ನೂ ಮಾಡುತ್ತಾರೆ.
ಮಠಕ್ಕೆ ತೈಲ ನೀಡಿದ ಹಾಜಿ ಅಬ್ದುಲ್ಲಾರಂಥಹ ಸಹೃದಯ ಮುಸ್ಲಿಮರು ಇನ್ನೂ ಉಡುಪಿಯಲ್ಲಿದ್ದಾರೆ. ಇಂಥವರು ಸಮಾಜದಲ್ಲಿ ಹೆಚ್ಚಾಗಲು ಇಂಥಾ ಕೋಮು ಸೌಹಾರ್ದ ಹೆಚ್ಚಬೇಕಿದೆ. ಸಮಾಜಕ್ಕೆ ಬೇಕಿರುವುದು, ಒಳ್ಳೆಯ ಮುಸ್ಲಿಮರು, ಒಳ್ಳೆಯ ಹಿಂದುಗಳು, ಒಳ್ಳೆಯ ಕ್ರೈಸ್ತರು. ಒಳ್ಳೆಯವರೇ ಬೇಕೇ ಹೊರತು ಕೆಟ್ಟವರು ಬೇಡ.
ಯಾವುದೇ ಒಂದು ಸಮುದಾಯವನ್ನೇ ಮುಗಿಸಿ ನಾವು ಮಾತ್ರ ಮೆರೆಯುತ್ತೇವೆ ಎಂಬುದು ಭ್ರಮೆ. ಇದನ್ನು ಬಿಟ್ಟು ನಾವು ಒಳ್ಳೆಯವರ ಜತೆ ಸೌಹಾರ್ದದಿಂದ ಬದುಕಬೇಕುವ ಸಂಕಲ್ಪ ತೊಡಬೇಕಿದೆ. ದುಷ್ಟರ ನಾಶ ಆಗಬೇಕು, ಶಿಷ್ಟರ ರಕ್ಷಣೆ ಆಗಬೇಕು. ಕೆಟ್ಟವರನ್ನು ಒಳ್ಳೆಯವರಿಂದ ಪ್ರತ್ಯೇಕಿಸಬೇಕು. ಇದೇ ಶ್ರೀಕೃಷ್ಣ ಹೇಳಿದ್ದು. ಹಸಿದು ಬಂದವರಿಗೆ ಪ್ರೀತಿ ಯಿಂದ ಸತ್ಕರಿಸಿ, ಊಟೋಪಚಾರ ನೀಡುವುದು ಹಿಂದು ಸಂಸ್ಕೃತಿ. ಇದು ಧಾರ್ಮಿಕ ವಿಧಿಗಳಲ್ಲ. ಇದು ಉಗ್ರವಾದಕ್ಕೆ ಸಮರ್ಥನೆಯಲ್ಲ. ಶಿಷ್ಟವಾದಕ್ಕೆ ಮನ್ನಣೆ ಎಂದು ಪೇಜಾವರ ಶ್ರೀಗಳ ಪರ ವಾದವೂ ಭಲ ಪಡೆದುಕೊಂಡಿದೆ.
ಉಡುಪಿ ಕೃಷ್ಣ ಮಠದಲ್ಲಿ ಪೇಜಾವರರಿಂದ ಐತಿಹಾಸಿಕ ಇಫ್ತಾರ್ ಕೂಟ
ಹಿಂದುತ್ವ ಕುರಿತು ಮುತಾಲಿಕ್ ಬೋಧಿಸಬೇಕಿಲ್ಲ
ಮುತಾಲಿಕ್ ಆರೋಪಕ್ಕೆ ಪೇಜಾವರಶ್ರೀಗಳು ಸರಿಯಾಗಿಯೇ ಪ್ರತಿಕ್ರಿಯಿಸಿದ್ದಾರೆ. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಇದು ನನ್ನ ತತ್ವ. 1955ರಿಂದ ಸ್ನೇಹ ಸೌಹಾರ್ಧಕ್ಕೆ ಪ್ರಯತ್ನಿಸುತ್ತಾ ಬಂದಿದ್ದೇನೆ. ಮಠದಲ್ಲಿ ಇಫ್ತಾರ್ ಕೂಟದಿಂದ ಹಿಂದೂ ಧರ್ಮಕ್ಕೆ ಯಾವುದೇ ಹಾನಿ ಮಾಡಿಲ್ಲ. ಇಫ್ತಾರ್ ಕೂಟದಿಂದ ಹಿಂದೂಗಳು ಉದಾರಿಗಳು ಎಂಬ ಸಂದೇಶ ಹೋಗುತ್ತದೆ. ಮಧ್ವಚಾರ್ಯರ ಕಾಲದಿಂದ ಮುಸ್ಲಿಂರ ಜೊತೆ ಉತ್ತಮ ಬಾಂಧವ್ಯವಿದೆ. ಪರ್ಯಾಯೋತ್ಸವ, ಉಡುಪಿ ಚಲೋ ಸಂದರ್ಭ ಮುಸ್ಲಿಮರು ಸಹಕಾರ ನೀಡಿದ್ದರು. ಮುತಾಲಿಕರು ಜನರ ಮನಸ್ಸು ಕದಡಿಸುವ ಕೆಲಸ ಮಾಡಬಾರದು.
ನನ್ನದು ಸ್ವತಂತ್ರ ವ್ಯಕ್ತಿತ್ವ, ಹಿಂದೂ ಧರ್ಮ ಏನು ಎಂಬುದು ಮುತಾಲಿಕ್ಗಿಂತ ಚೆನ್ನಾಗಿ ನನಗೆ ಗೊತ್ತು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.