ಪತ್ತೆಯಾಗದ ಮೀನುಗಾರರು:ಚುನಾವಣೆ ಬಹಿಷ್ಕರಿಸಲು ತೀರ್ಮಾನ
ಉಡುಪಿ, ಮಾರ್ಚ್ 14: ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮಲ್ಪೆಯ 7 ಮಂದಿ ಮೀನುಗಾರರ ಸುಳಿವು ಈವರೆಗೆ ಪತ್ತೆಯಾಗಿಲ್ಲ. ಅವರು ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಕುರುಹು ಕೂಡ ಪತ್ತೆಯಾಗಿಲ್ಲ. ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಪ್ರಯತ್ನಗಳು ಮುಂದುವರೆದಿವೆ.
ಆದರೆ ಈ ನಡುವೆ ಮೀನುಗಾರರ ನಾಪತ್ತೆ ಪ್ರಕರಣವನ್ನು ಸರಕಾರಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.
ನಾಪತ್ತೆಯಾದ ಮೀನುಗಾರ ಕುಟುಂಬ ಸದಸ್ಯರು ಇಂದಿಗೂ ಕಣ್ಣೀರಿಡುತ್ತಿದ್ದಾರೆ. ನಾಪತ್ತೆಯಾಗಿರುವ ಮೀನುಗಾರರು ಒಂದಲ್ಲಾ ಒಂದು ದಿನ ಮನೆಗೆ ಮರಳಲಿದ್ದಾರೆ ಎಂಬ ಆಶಾಭಾವ ದೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ತಮ್ಮವರ ಗತಿ ಏನಾಗಿದೆ? ಎಂಬ ಮಾಹಿತಿ ಸಿಗದೆ ಕುಟುಂಬಗಳು ಅಸಹಾಯಕರಾಗಿ ಹತಾಶೆಯ ಸ್ಥಿತಿ ಅನುಭವಿಸುತ್ತಿದ್ದು, ಬರುವಿಕೆಗಾಗಿ ಇನ್ನೂ ಕಾಯುತ್ತಾ ಕುಳಿತಿದ್ದಾರೆ.

ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಸಹಿತ 7 ಮಂದಿ ಮೀನುಗಾರರು ನಾಪತ್ತೆಯಾಗಿ 89 ದಿನಗಳು ಕಳೆದಿವೆ. ಜನಪ್ರತಿನಿಧಿಗಳು, ಸಚಿವರು, ಸಂಸದರು ನಾಪತ್ತೆಯಾದ ಮೀನುಗಾರರ ಮನೆಗೆ ಭೇಟಿ ನೀಡಿ ತೆರಳಿದ್ದಾರೆ.
ಆದರೆ ಈವರೆಗೆ ನಾಪತ್ತೆಯಾಗಿರುವ ಮೀನುಗಾರರ ಬಗ್ಗೆ ಮಾಹಿತಿ ನೀಡಿಲ್ಲ ಎಂದು ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಪತ್ತೆಯಾಗಿರುವ ಮೀನುಗಾರರ ಪ್ರಕರಣದ ನಿಗೂಢತೆಯನ್ನು ಭೇದಿಸಲು ಮೀನುಗಾರರ ನಿಯೋಗ ಇತ್ತೀಚೆಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೊರೆ ಹೋಗಿತ್ತು. ನಿರ್ಮಲಾ ಸೀತಾರಾಮನ್ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೀನುಗಾರರ ನಿಯೋಗ ಅವರನ್ನು ಭೇಟಿಯಾಗಿತ್ತು.
ಈ ಸಂದರ್ಭದಲ್ಲಿ ಅತೀ ಶೀಘ್ರ ನೌಕಾದಳ ಅಧಿಕಾರಿಗಳೊಂದಿಗೆ ಮಲ್ಪೆಗೆ ಬಂದು ಚರ್ಚಿಸಿ ಕಾರ್ಯಾಚರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದ ರಕ್ಷಣಾ ಸಚಿವರು ಈವರೆಗೆ ಮಲ್ಪೆಗೆ ಭೇಟಿ ನೀಡಿಲ್ಲ.












Click it and Unblock the Notifications