ಕುಡಿತದ ಸಹವಾಸಕ್ಕೆ ಬಿದ್ದು ಮುದ್ದಾದ ಮಕ್ಕಳ ಮಾರಾಟಕ್ಕೆ ಮುಂದಾದ ತಂದೆ
ಉಡುಪಿ, ಜನವರಿ 7: ಕುಡಿತದ ಸಹವಾಸಕ್ಕೆ ಬಿದ್ದು, ಸಾಕಲು ಸಾಧ್ಯವಾಗದೇ ತಂದೆಯೊಬ್ಬ ತನ್ನ ಮಕ್ಕಳನ್ನೇ ಮಾರಾಟ ಮಾಡಲು ಮುಂದಾಗಿದ್ದ ಘಟನೆ ಕಾರ್ಕಳ ತಾಲೂಕಿನ ಬೈಲೂರು ಸಮೀಪದ ನೀರೆ ಎಂಬಲ್ಲಿ ನಡೆದಿದೆ.
ನೀರೆಯ ದಲಿತ ಸಮುದಾಯಕ್ಕೆ ಸೇರಿದ ಆನಂದ ಮಕ್ಕಳ ಮಾರಾಟಕ್ಕೆ ಮುಂದಾದಾತ. ಕೂಲಿ ಕೆಲಸ ಮಾಡುತ್ತಿದ್ದ ಈತನಿಗೆ ಕುಡಿತದ ಚಟವಿದ್ದ ಕಾರಣ ಮಕ್ಕಳನ್ನು ಸಾಕುವ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಮಕ್ಕಳನ್ನು ಮಾರಾಟ ಮಾಡಲು ಮುಂದಾಗಿದ್ದಾನೆ. ಈ ಬಗ್ಗೆ ತಿಳಿದ ಸ್ಥಳೀಯರು ಮಕ್ಕಳ ರಕ್ಷಣಾ ಘಟಕಕ್ಕೆ ಸುದ್ದಿ ಮುಟ್ಟಿಸಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ತಂದೆಯನ್ನು ವಿಚಾರಣೆ ಮಾಡಿದ್ದಾರೆ. ಬಳಿಕ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಕ್ಕಳಿಬ್ಬರನ್ನು ಉಡುಪಿ ಸಂತೆಕಟ್ಟೆಯ ಕೃಷ್ಣಾನುಗ್ರಹ ದತ್ತು ಸಂಸ್ಥೆಗೆ ಒಪ್ಪಿಸಿದ್ದಾರೆ. ಆನಂದ ಐದು ವರ್ಷಗಳ ಹಿಂದೆ ವಿವಾಹವಾಗಿದ್ದ. ಇತ್ತೀಚೆಗೆ ಪತ್ನಿ ಇವರನ್ನು ತೊರೆದು ಹೋಗಿದ್ದಾಳೆ. ಸರಕಾರಿ ಜಾಗದಲ್ಲಿ ಸಣ್ಣ ಗುಡಿಸಲು ನಿರ್ಮಿಸಿ ನಾಲ್ಕೂವರೆ ವರ್ಷದ ಗಂಡು, ಮೂರೂವರೆ ವರ್ಷದ ಹೆಣ್ಣು ಮಗುವನ್ನು ಹಾಗೂ ವೃದ್ಧೆ ತಾಯಿಯನ್ನು ಆನಂದ ನೋಡಿಕೊಳ್ಳುತ್ತಿದ್ದ. ಕೂಲಿ ಜೊತೆ ಕುಡಿತ ಚಟದಿಂದಾಗಿ ಈತನ ಪರಿಸ್ಥಿತಿಯನ್ನರಿತ ಕೆಲವರು ಮಕ್ಕಳನ್ನು ನಮಗೆ ಕೊಡು ನಿನಗೆ ಹಣ ಕೊಡುತ್ತೇವೆ ಎಂದು ಪುಸಲಾಯಿಸಿದ್ದಾರೆ.

ಸುದ್ದಿ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ, ನೀರೆ ಪಂಚಾಯತ್ ಪಿಡಿಓ ಅಂಕಿತಾ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಇಬ್ಬರು ಪುಟ್ಟ ಮಕ್ಕಳನ್ನು ದತ್ತು ಸಂಸ್ಥೆಗೆ ಸೇರಿಸಿ ಪುನರ್ವಸತಿ ಕಲ್ಪಿಸಲಾಗಿದೆ.












Click it and Unblock the Notifications