ಉಡುಪಿ ನೂತನ ಎಸ್ಪಿ ಸಂಜೀವ್ ಪಾಟೀಲ್ ಅಧಿಕಾರ ಸ್ವೀಕಾರ
ಉಡುಪಿ, ಆಗಸ್ಟ್ 11: ಉಡುಪಿ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ. ಸಂಜೀವ್ ಎಂ ಪಾಟೀಲ್ ಅಧಿಕಾರ ಸ್ವೀಕರಿಸಿದ್ದಾರೆ.
ಮಂಗಳೂರಿನಲ್ಲಿ ಅಪರಾಧ ಮತ್ತು ಟ್ರಾಫಿಕ್ ವಿಭಾಗದಲ್ಲಿ ಡಿಸಿಪಿಯಾಗಿದ್ದ ಅವರು ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿಯಾಗಿ ಬಡ್ತಿ ಹೊಂದಿದ್ದರು.
ಇದಕ್ಕೂ ಮೊದಲು ಎಸ್ಪಿಯಾಗಿದ್ದ ಕೆಟಿ ಬಾಲಕೃಷ್ಣ ಅವರು ಬೆಂಗಳೂರಿನ ಗೃಹರಕ್ಷಕ ದಳದ ಡೆಪ್ಯೂಟಿ ಕಮಾಂಡಂಟ್ ಜನರಲ್ ಎಸ್ಪಿಯಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಡಾಕ್ಟರ್ ಸಂಜೀವ್ ಉಡುಪಿ ಜಿಲ್ಲಾ ಎಸ್ಪಿಯಾಗಿ ಆ. 4 ರಂದು ಉಡುಪಿಗೆ ವರ್ಗಾವಣೆಗೊಂಡಿದ್ದರು.

"ಜನರಿಗೆ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜಿಲ್ಲೆಯ ಎಲ್ಲ ಠಾಣೆಗಳಿಗೆ ಭೇಟಿ ನೀಡಿ ಹಳ್ಳಿ ಹಳ್ಳಿಗೂ ತೆರಳಿ ಜನರನ್ನು ಭೇಟಿ ಮಾಡುತ್ತೇನೆ. ಈ ಮೂಲಕ ಜಿಲ್ಲಾ ಪೊಲೀಸ್ ವ್ಯವಸ್ಥೆಯಿಂದ ಜನ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತೇನೆ," ಎಂದು ಸಂಜೀವ್ ಎಂ ಪಾಟೀಲ್ ಹೇಳಿದ್ದಾರೆ.
"ಜನರ ಸುರಕ್ಷತೆಯ ದೃಷ್ಟಿಯಿಂದ ಬೀಟ್ ವ್ಯವಸ್ಥೆ ಎಂದಿನಂತೆ ನಡೆಯಲಿದೆ. ಸಾರ್ವಜನಿಕರು ಅವರವರ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ನಡೆದಲ್ಲಿ ಅವುಗಳ ಬಗ್ಗೆ ಮಾಹಿತಿ ನೀಡಬಹುದು. ಅವುಗಳಲ್ಲಿ ಪೊಲೀಸ್ ಅಧಿಕಾರಿಗಳು ಕೂಡ ಶಾಮೀಲಾಗಿದ್ದರೆ ಅವರ ಮೇಲೆಯೂ ಕಠಿಣ ಕ್ರಮ ಕೈಗೊಳ್ಳಲಾಗುವುದು," ಎಂದು ತಿಳಿಸಿದ್ದಾರೆ.
ಜನರ ಅಹವಾಲುಗಳನ್ನು ಆಲಿಸಲು ಪ್ರತಿ ವಾರ ಒಂದು ಗಂಟೆ ಸಾರ್ವಜನಿಕರೊಂದಿಗೆ ಫೋನ್ ಇನ್ ಮೂಲಕ ನೇರ ಸಂವಾದ ನಡೆಸಲಾಗುವುದು. ಪ್ರಮುಖವಾಗಿ ಜನಮುಖಿ ಪೊಲೀಸಿಂಗ್ ಗೆ ಮೊದಲ ಪ್ರಾಮುಖ್ಯತೆ ನೀಡಲಾಗುವುದು ಎಂದು ಸಂಜೀವ್ ಪಾಟೀಲ್ ಹೇಳಿದ್ದಾರೆ.












Click it and Unblock the Notifications